ಜ್ಯೂಸ್ ಬಾಟಲಿಯನ್ನೇ ಮೈಕ್ ಮಾಡಿಕೊಂಡು ಶಾಲೆಯ ದುಸ್ಥಿತಿಯನ್ನು ವರದಿ ಮಾಡಿದ ಬಾಲಕ ; ವೀಡಿಯೋ ವೈರಲ್

jharkhand

ಜಾರ್ಖಂಡ್ : ಸರ್ಕಾರಿ ಶಾಲೆಗಳ ದುಸ್ಥಿತಿಯ ಬಗ್ಗೆ ಮಾಧ್ಯಮಗಳ(Media) ವರದಿಗಾರರು(Reporters) ಸುದ್ದಿ ಮಾಡೋದನ್ನು ನೀವು ನೋಡಿರ್ತೀರಿ, ಅಥವಾ ಇದರ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಅಂಕಣವನ್ನು ಓದಿರುತ್ತೀರಿ.

ಆದರೆ ಈಗ ನಡೆಯುತ್ತಿರುವುದು ಸಾಮಾಜಿಕ ಜಾಲತಾಣಗಳ(Social Media) ಯುಗ, ಇಲ್ಲಿ ಯಾರು ಬೇಕಾದರೂ ವರದಿಗಾರರಾಗಬಹುದು.

ಕಹಿ ಸತ್ಯದ ವರದಿ ಮಾಡಿದಾಗ ಕೆಲವು ವ್ಯಕ್ತಿಗಳು ಮಾಧ್ಯಮಗಳ ಮೇಲೆ ಹರಿಹಾಯುವುದು ಸಹಜ.

ಆದರೆ, ಲೇಖನಿ ಕತ್ತಿಗಿಂತ ಹರಿತ ಎಂಬ ಮಾತಿನಂತೆ, ಮಾಧ್ಯಮ ಎನ್ನುವುದು ಹರಿತವಾದ ಕತ್ತಿ ಎಂಬುದಂತೂ ಅಕ್ಷರಶಃ ಸತ್ಯ!


ಹಾಗಾಗಿಯೇ ಏನೋ, ತನ್ನ ಶಾಲೆಯ ದುಸ್ಥಿತಿಯನ್ನು ನೋಡಿ ಬೇಸತ್ತ ಜಾರ್ಖಂಡ್ನ(Jharkhand) 12 ವರ್ಷದ ವಿದ್ಯಾರ್ಥಿಯೊಬ್ಬ, ಮಾಧ್ಯಮ ವರದಿಗಾರನಂತೆ ನಟಿಸುತ್ತಾ ತನ್ನ ಶಾಲೆಯ ದುಃಸ್ಥಿತಿಯನ್ನು ಬಯಲಿಗೆಳೆದಿದ್ದಾನೆ.

ಶಾಲೆಯ ಅವ್ಯವಸ್ಥೆ ಬಗ್ಗೆ ವಿಡಿಯೋ ಮಾಡಿ, ಆ ರಾಜ್ಯದ ಶಿಕ್ಷಣ ಸಚಿವರು ಇತ್ತ ಗಮನಹರಿಸುವಂತೆ ಮಾಡಿದ್ದಾನೆ. ಈ ವೀಡಿಯೊವನ್ನು ಆತನ ಸ್ನೇಹಿತರು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ಈ ವೀಡಿಯೋ(Video) ಪೋಸ್ಟ್‌ ಆದ ಕೆಲವೇ ಗಂಟಗೆಳಲ್ಲಿ ಭಾರಿ ವೈರಲ್(Viral) ಆಗಿದ್ದು, ಸರ್ಕಾರದ ಗಮನ ಸೆಳೆದಿದೆ ಎನ್ನುವುದು ವಿಶೇಷ. ತಕ್ಷಣವೇ ಶಿಕ್ಷಣ ಇಲಾಖೆ ಈ ಬಗ್ಗೆ ವರದಿ ಕೇಳಿದ್ದು, ಇಬ್ಬರು ಶಿಕ್ಷಕರನ್ನೂ ಅಮಾನತು ಮಾಡಿದೆ.

 ಶೌಚಾಲಯದ ಅವ್ಯವಸ್ಥೆ ಹಾಗೂ ಶಾಲೆಗೆ ಹೋಗಲು ದಾರಿ ಇಲ್ಲದೇ ಪರದಾಡುವ ಬಗ್ಗೆ ಮಕ್ಕಳ ಜೊತೆ ಈ ವಿದ್ಯಾರ್ಥಿ ಮಾತುಕತೆ ನಡೆಸಿದ್ದಾನೆ! 12 ವರ್ಷದ ಬಾಲಕ ಪತ್ರಕರ್ತನಂತೆ ಮಾಡಿರುವ ವರದಿ ಈಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. 

ಆ 12 ವರ್ಷದ ಬಾಲಕನ ಹೆಸರು ಸರ್ಫರಾಜ್ ಖಾನ್, ಈತ ವರದಿ ಮಾಡಿರುವ ಎರಡು ವಿಡಿಯೋ ಕ್ಲಿಪ್‌ಗಳು ಮೈಕ್ರೋ ಬ್ಲಾಗಿಂಗ್ ಜಾಲತಾಣ ಟ್ವಿಟ್ಟರ್‌ನಲ್ಲಿ ಹರಿದಾಡುತ್ತಿದೆ. ಈ ಬಾಲಕ ಜಾರ್ಖಂಡ್‌ನ ಗೊಡ್ಡ ಜಿಲ್ಲೆಯ ಮಹಾಗಾಮಾ ಬ್ಲಾಕ್‌ನ ಭೀಖಿಯಾಛಕ್‌ ಗ್ರಾಮದ ಬಾಲಕನಾಗಿದ್ದಾನೆ.

ತನ್ನ ಗ್ರಾಮದಲ್ಲಿರುವ ಸರ್ಕಾರಿ ಶಾಲೆಯ ಸ್ಥಿತಿಯ ಬಗ್ಗೆ ಸ್ವತ: ವರದಿ ಮಾಡಿದ್ದಾನೆ. ಕಡ್ಡಿ ಹಾಗೂ ಕೂಲ್‌ ಡ್ರಿಂಕ್ಸ್‌ನ ಖಾಲಿ ಬಾಟಲಿಯನ್ನು ಮೈಕ್‌ನಂತೆ ಮಾಡಿಕೊಂಡಿದ್ದು, ವರದಿಗಾರನಂತೆ ತನ್ನ ಕ್ಲಾಸ್‌ಮೇಟ್‌ಗಳಿಗೆ ಪ್ರಶ್ನೆ ಕೇಳಿದ್ದಾನೆ, ಹಾಗೂ, ವಿಡಿಯೋವನ್ನು ರೆಕಾರ್ಡ್‌ ಮಾಡಲು ಸಹ ಗೆಳೆಯರನ್ನು ಬಳಸಿಕೊಂಡಿದ್ದಾನೆ.

ಈ ಬಾಲಕನಿಗೆ ವರದಿಗಾರಿಕೆ ಬಗ್ಗೆ ಇರುವ ಉತ್ಸಾಹ, ಆತನ ಧ್ವನಿ ಹಲವರ ಹುಬ್ಬೇರಿಸುತ್ತದೆ. ಈ ಹಿನ್ನೆಲೆ ಹಲವು ಮಾಧ್ಯಮಗಳ ವರದಿಗಾರರೇ ಈ ವಿಡಿಯೋವನ್ನು ಶೇರ್‌ ಮಾಡಿಕೊಂಡಿರುವುದು ವಿಶೇಷ.

ಈ ಬಾಲಕನ ಎರಡು ವಿಡಿಯೋಗಳು ವೈರಲ್‌ ಆಗಿದ್ದು, ಮೊದಲನೆಯ ವಿಡಿಯೋದಲ್ಲಿ ಸರ್ಫರಾಜ್‌ ಖಾನ್‌ ಕ್ಲಾಸ್‌ರೂಂ, ಟಾಯ್ಲೆಟ್‌ಗಳು, ಹ್ಯಾಂಡ್‌ ಪಂಪ್‌ ಹಾಗೂ ಭೀಖಿಯಾಛಕ್‌ ಗ್ರಾಮದ ಉತ್ಕ್ರಮಿತ್‌ ಪ್ರಾಥಮಿಕ ಶಾಲೆಯ ಸುತ್ತಮುತ್ತಲಿನ ವಾತಾವರಣದ ಗಲೀಜನ್ನು ಸಹ ತೋರಿಸಿದ್ದಾನೆ.

ಅಲ್ಲದೆ, ತನ್ನ ಶಾಲೆಯ ಇತರ ವಿದ್ಯಾರ್ಥಿಗಳಿಗೂ ಪ್ರಶ್ನೆಗಳನ್ನೂ ಕೇಳಿದ್ದಾನೆ.

ನೀನು ಯಾಕೆ ಪ್ರತಿನಿತ್ಯ ಶಾಲೆಗೆ ಬರೋದಿಲ್ಲ ಎಂದು ವಿದ್ಯಾರ್ಥಿಯೊಬ್ಬನನ್ನು ಕೇಳಿದ್ದು, ಇದಕ್ಕೆ ಉತ್ತರಿಸಿದ ಆತ ತನ್ನ ಶಾಲೆಯ ಟಾಯ್ಲೆಟ್‌ಗಳು ಹಾಗೂ ಕುಡಿಯುವ ನೀರಿನ ತೊಂದರೆಯನ್ನು ತೋರಿಸುತ್ತಾ, ತಾನು ಶಾಲೆಗೆ ಗೈರಾಗುವುದಕ್ಕೆ ಕಾರಣಗಳನ್ನು ನೀಡಿದ್ದಾನೆ.

ಹಾಗೇ, ಸರ್ಫರಾಜ್ ಮಾಡಿರುವ ಮತ್ತೊಂದು ವಿಡಿಯೋದಲ್ಲಿ ಶಾಲೆಯ ತರಗತಿಯ ಮತ್ತಷ್ಟು ಒಳನೋಟಗಳನ್ನು ನೋಡಬಹುದು. ಶಾಲೆಯ ಕೊಠಡಿಗಳು ಗಲೀಜಿನಿಂದ ಕೂಡಿದ್ದು, ಕ್ಲಾಸ್‌ರೂಂನಲ್ಲಿ ಅಗತ್ಯವಿಲ್ಲದ ವಸ್ತುಗಳನ್ನೆಲ್ಲ ಇಡಲಾಗಿದ್ದು,

ಸ್ಟೋರ್ ರೂಮ್ ನಂತೆ ಬಳಸಲಾಗಿದೆ. ತಮ್ಮ ಸಂಸ್ಥೆಯನ್ನು ಅಭಿವೃದ್ಧಿ ಪಡಿಸಲು ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಸರ್ಫರಾಜ್‌ ಖಾನ್‌ ಮನವಿ ಮಾಡಿಕೊಂಡಿದ್ದಾನೆ. ಹಾಗೂ, ಸರ್ಕಾರದಿಂದ ಬರುತ್ತಿರುವ ಎಜುಕೇಶನ್ ಫಂಡ್‌ ಅನ್ನು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ ಎಂದೂ ದೂರಿದ್ದಾನೆ.

ವಾಟರ್‌ ಟ್ಯಾಂಕ್‌ ಹಾಗೂ ಹ್ಯಾಂಡ್‌ ಪಂಪ್‌ ಅನ್ನು ರಿಪೇರಿ ಮಾಡಲು ಸಹ ಬಾಲಕ ಮನವಿ ಮಾಡಿಕೊಂಡಿದ್ದಾನೆ. ವಿಡಿಯೋ ಕೊನೆಯಲ್ಲಿ ಶಾಲಾ ಶಿಕ್ಷಕರು ಸಹ ಸರಿಯಾದ ವೇಳೆಗೆ ಬರುವುದಿಲ್ಲ ಎಂದು ದೂರಿದ್ದಾನೆ. ಈಗ ಸಮಯ ಮಧ್ಯಾಹ್ನ 12:45 ಆಗಿದೆ ಆದರೂ, ಇಲ್ಲಿ ಯಾವುದೇ ಶಿಕ್ಷಕರು ಇಲ್ಲ’’ ಎಂದು ಸರ್ಫರಾಜ್ ಖಾನ್ ಹೇಳಿಕೊಂಡಿದ್ದಾನೆ.

ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಶೇರ್‌ ಆದ ಬಳಿಕ, ಟ್ವಿಟ್ಟರ್‌ನಲ್ಲಿ ಸಾವಿರಾರು ಜನ ಇದನ್ನು ವೀಕ್ಷಿಸಿದ್ದಾರೆ. ಹಲವು ಬಳಕೆದಾರರು ‘ಯುವ ಪತ್ರಕರ್ತ’ ನ ದಿಟ್ಟತನವನ್ನು ಹೊಗಳಿದರೇ, ಹಲವರು ಆಶ್ಚರ್ಯಚಕಿತರಾಗಿದ್ದಾರೆ.

ಅಲ್ಲದೆ, ಹಳ್ಳಿಗಳ ಶಾಲೆಗಳ ದುಸ್ಥಿತಿಗಳ ಬಗ್ಗೆ ಹಲವರು ಕಮೆಂಟ್‌ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತನ್ನ ದಿಟ್ಟತನದ ವರದಿಗಾರಿಕೆಯ ಮೂಲಕ ಆಡಳಿತ ಸರ್ಕಾರಕ್ಕೆ ಬಾಲಕ ಕಪಾಳ ಮೋಕ್ಷ ಮಾಡಿದ್ದಾನೆ ಎಂದು ನೆಟ್ಟಿಗರೊಬ್ಬರು ಕಮೆಂಟ್‌ ಮಾಡಿದ್ದಾರೆ.

ಹೀಗೆ, ಹಲವರು ವಿಡಿಯೋವನ್ನು ಮೆಚ್ಚಿಕೊಂಡಿದ್ದು, ಬಾಲಕನ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿ ಕಮೆಂಟ್‌ ಮಾಡಿದ್ದಾರೆ.
Exit mobile version