ಕರ್ನಾಟಕದ ಮಾಜಿ ರಾಜ್ಯಪಾಲ ಕೆ. ರೋಸಯ್ಯ ನಿಧನ

ಹೈದರಾಬಾದ್ : ಕರ್ನಾಟಕದ ರಾಜ್ಯಪಾಲರಾಗಿ 2 ತಿಂಗಳುಗಳ ಕಾಲ ಕಾರ್ಯ ನಿರ್ವಹಿಸಿದ್ದ ಕಾಂಗ್ರೆಸ್ ಹಿರಿಯ ನಾಯಕ, ತಮಿಳುನಾಡಿನ ಮಾಜಿ ರಾಜ್ಯಪಾಲ, ಅವಿಭಜಿತ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಕೆ.ರೋಸಯ್ಯ ಶನಿವಾರ ಹೈದರಾಬಾದ್ ನಲ್ಲಿ ನಿಧನರಾಗಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿತ್ತು. ವಯೋಸಹಜ ಖಾಯಿಲೆಗಳಿಂದ ಬಳಲುತ್ತಿದ್ದ ಅವರು ಇಂದು ಬೆಳಗ್ಗೆ ಹೈದರಾಬಾದ್ ನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ರೋಸಯ್ಯ ಅವರು ಕಾಂಗ್ರೆಸ್ ನ ಅತ್ಯಂತ ಹಿರಿಯ ನಾಯಕರಲ್ಲಿ ಒಬ್ಬರಾಗಿದ್ದರು. ಕೆ. ವಿಜಯ ಭಾಸ್ಕರ್ ರೆಡ್ಡಿ ಸೇರಿದಂತೆ ಹಲವಾರು ಮುಖ್ಯಮಂತ್ರಿಗಳ ಸಂಪುಟಗಳಲ್ಲಿ ಸೇವೆ ಸಲ್ಲಿಸಿದ್ದರು. ಕೆಲವು ದಿನಗಳಿಂದ ವಯೋಸಹಜ ಅನಾರೋಗ್ಯಕ್ಕೆ ತುತ್ತಾಗಿದ್ದ ರೋಸಯ್ಯ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಕರ್ನಾಟಕದ ಹಂಗಾಮಿ ರಾಜ್ಯಪಾಲರಾಗಿ ಮಾತ್ರವಲ್ಲದೇ ತಮಿಳುನಾಡಿನಲ್ಲಿ 5 ವರ್ಷಗಳ ಕಾಲ ರಾಜ್ಯಪಾಲರಾಗಿ ರೋಸಯ್ಯ ಕಾರ್ಯ ನಿರ್ವಹಿಸಿದ್ದರು.ಹಲವು ದಶಕಗಳ ಕಾಲ ಕಾಂಗ್ರೆಸ್‌ನಲ್ಲಿದ್ದ ಅವರು ಹಲವು ಹುದ್ದೆಗಳನ್ನು ಅವರು ಅಲಂಕರಿಸಿದ್ದರು

ಆಗಸ್ಟ್ 31, 2011ರಿಂದ ಆಗಸ್ಟ್ 30, 2016ರವರೆಗೆ ತಮಿಳುನಾಡಿನ ರಾಜ್ಯಪಾಲರಾಗಿ, 28 ಜೂನ್, 2014ರಿಂದ 31 ಆಗಸ್ಟ್, 2014ರವರೆಗೂ ಕರ್ನಾಟಕದ ಹೆಚ್ಚುವರಿ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು. ರೋಸಯ್ಯ ಅವರ ನಿಧನಕ್ಕೆ ಕಾಂಗ್ರೆಸ್ ಮುಖಂಡರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Exit mobile version