ಹಳೇ ಪಠ್ಯಪುಸ್ತಕವನ್ನೇ ಮುಂದುವರೆಸಲು ಕರವೇ ನಾರಾಯಣಗೌಡ ಆಗ್ರಹ!

ರಾಜ್ಯದಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ವಿವಾದ ತಣ್ಣಗಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಬರಹಗಾರ(Writer) ರೋಹಿತ್ ಚಕ್ರತೀರ್ಥ(Rohith Chakratheertha) ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಮಾಡಿರುವ ಪರಿಷ್ಕರಣೆ ವಿರುದ್ದ ಕರ್ನಾಟಕ ರಕ್ಷಣಾ ವೇದಿಕೆ(Karnataka Rakshana Vedike) ತೀವ್ರ ಆಕ್ರೋಶ ಹೊರಹಾಕಿದೆ.

ಕೂಡಲೇ ಸರ್ಕಾರ ಈ ಸಮಿತಿಯನ್ನು ವಜಾಗೊಳಿಸಬೇಕೆಂದು ಆಗ್ರಹಿಸಿದೆ. ಎಡಪಂಥೀಯ ಚಿಂತಕರು, ಕೆಲ ಶಿಕ್ಷಣ ತಜ್ಞರು, ವಿಪಕ್ಷಗಳಾದ ಕಾಂಗ್ರೆಸ್(Congress), ಜೆಡಿಎಸ್(JDS) ಮತ್ತು ಪ್ರಗತಿಪರರು ನೂತನ ಪಠ್ಯಪುಸ್ತಕ ಪರಷ್ಕರಣೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಆರ್‍ಎಸ್‍ಎಸ್(RSS) ಸಿದ್ದಾಂತವನ್ನು ಮಕ್ಕಳ ಮೇಲೆ ಹೇರಲು ಸರ್ಕಾರ ಹೊರಟಿದೆ ಎಂದು ಆರೋಪಿಸಿದ್ದಾರೆ. ಈ ಕುರಿತು ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಅವರು ಇತ್ತೀಚೆಗೆ ಟ್ವೀಟ್‍ರ್‍ನಲ್ಲಿ ಸರ್ಕಾರದ ವಿರುದ್ದ ಅಸಮಾಧಾನ ಹೊರಹಾಕಿದ್ದರು.

ಇದೀಗ ರಾಜ್ಯಾದ್ಯಂತ ರಾಜ್ಯ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ರಾಜ್ಯದ ಎಲ್ಲ ಕರವೇ ಜಿಲ್ಲಾಧ್ಯಕ್ಷರು ಮತ್ತು ಪದಾಧಿಕಾರಿಗಳ ಜೊತೆ ಸಭೆ ನಡೆಸಿದ ನಾರಾಯಣಗೌಡ ಅವರು ಮೇ 31ರಂದು ಪಠ್ಯಪುಸ್ತಕ ಪರಿಷ್ಕರಣೆ ವಿರೋಧಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ರಾಜ್ಯ ಸರ್ಕಾರ ರೋಹಿತ್ ಚಕ್ರತೀರ್ಥ ಸಮಿತಿಯನ್ನು ವಜಾಗೊಳಿಸಬೇಕು ಮತ್ತು ಸಮಿತಿ ಜಾರಿಗೊಳಿಸಿರುವ ನೂತನ ಪಠ್ಯಪುಸ್ತಕಗಳನ್ನು ಹಿಂಪಡೆಯಬೇಕು. ಈ ಹಿಂದೆ ಬರಗೂರು ಸಮಿತಿ ರಚಿಸಿರುವ ಪಠ್ಯಪುಸ್ತಕಗಳನ್ನೇ ಮುಂದುವರೆಸಬೇಕೆಂದು ಕರವೇ ಆಗ್ರಹಿಸಿದೆ.

ಇನ್ನು ಕರವೇ ಮೇ 31ರಂದು ಹಮ್ಮಿಕೊಂಡಿರುವ ಹೋರಾಟಕ್ಕೆ ಅನೇಕ ವಿದ್ಯಾರ್ಥಿ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದೆ. ರಾಜ್ಯ ಸರ್ಕಾರ ಪಠ್ಯಪುಸ್ತಕಗಳನ್ನು ಹಿಂಪಡೆಯದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವ ಎಚ್ಚರಿಕೆಯನ್ನು ನೀಡಲಾಗಿದೆ. ಮೇ 31ರಂದು ರಾಜ್ಯದ ಎಲ್ಲ 31 ಜಿಲ್ಲೆಗಳ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಕರವೇ ನಾರಾಯಣಗೌಡ ಬಣ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಿದೆ.

Exit mobile version