ಸಿನಿಮೀಯ ರೀತಿಯಲ್ಲಿ ವಕೀಲನ ಅಪಹರಣ

ಬೆಂಗಳೂರು ಅ 2 : ಉದ್ಯಮಿ ಜೊತೆ ಸೇರಿ ಸಿನಿಮೀಯ ರೀತಿಯಲ್ಲಿ ವಕೀಲನನ್ನು ಕಿಡ್ನಾಪ್​ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದ 9 ಮಂದಿಯನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ.

ಸೆಪ್ಟೆಂಬರ್ 20ರಂದು ನಾಗರಭಾವಿಯ‌ ಸ್ವಾತಿ ಹೋಟೆಲ್ ಬಳಿಯಿಂದ ವಕೀಲ‌ ಅಭಯ್ ರವೀಂದ್ರ ಕುಲಕರ್ಣಿ ಎಂಬುವವರನ್ನು ಕಿಡ್ನಾಪ್​ ಮಾಡಲಾಗಿತ್ತು. ಪ್ರಕರಣದ ನಡೆದ 12 ಗಂಟೆಯೊಳಗೆ ಪೊಲೀಸರು ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.

ಅರುಣ್‌ಕುಮಾರ್‌, ಯುವರಾಜ್‌, ನರೇಶ್‌, ಅಶೋಕ್‌, ಯೋಗಾನಂದ್‌, ನೆಲ್ಸನ್‌ಕುಮಾರ್‌, ಸಂಜಯ್‌, ಸಿದ್ದೇಶ್‌ ಹಾಗೂ ವಿಜಯ್‌ಕುಮಾರ್‌ ಬಂಧಿತರು. ಬಂಧಿತರಲ್ಲಿ ಸಂಜಯ್‌, ಅರುಣ್‌ಕುಮಾರ್‌, ಅಶೋಕ್‌ ಹಾಗೂ ನರೇಶ್‌ ‘ಭರ್ಜರಿ’ ಸೇರಿದಂತೆ ಕೆಲ ಚಿತ್ರಗಳಲ್ಲಿ ನಟಿಸಿದ್ದರು. ಆದರೆ, ಆನಂತರ ಸಿನಿಮಾಗಳಲ್ಲಿ ಅವಕಾಶ ಸಿಗದೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದರು ಎಂದು ಅನ್ನಪೂರ್ಣೇಶ್ವರಿ ನಗರ ಪೊಲೀಸರು ತಿಳಿಸಿದ್ದಾರೆ.

ವಕೀಲ ರವೀಂದ್ರ ಕುಲಕರ್ಣಿ ಖಾಸಗಿ ಕಂಪನಿಯೊಂದರ ಲೀಗಲ್ ಅಡ್ವೈಸರ್​ ಆಗಿದ್ದರು. ಅದೇ ಕಂಪನಿಯಲ್ಲಿ ಅಂದ್ರಹಳ್ಳಿಯ ಸಿದ್ದೇಶ್ ಎಂಬುವವರು ಹಣ ಹೂಡಿಕೆ ಮಾಡಿದ್ದರು. ಬೇಸಿಕ್ ಜಾರ್ಜ್​ ಆಗಿ ರವೀಂದ್ರ ಅವರು ಸಿದ್ದೇಶ್​ನಿಂದ 6-7ಲಕ್ಷ ಹಣ ಪಡೆದಿದ್ದರು ಎನ್ನಲಾಗಿದೆ. ಹಣ ವಾಪಸ್​ ನೀಡದಿದ್ದಾಗ ಸಿದ್ದೇಶ್, ಸ್ಯಾಂಡಲ್​ವುಡ್ ಖಳನಟರಾದ ಸಂಜಯ್, ಅರುಣ್ ಹಾಗೂ ಅಶೋಕ್ ನರೇಶ್ ಸೇರಿ ರವೀಂದ್ರ ಅವರನ್ನು ಕಿಡ್ನಾಪ್​ ಮಾಡಿದ್ದಾನೆ.

ವಕೀಲ ರವೀಂದ್ರ ಅವರನ್ನು ಅಂದ್ರಹಳ್ಳಿಯ ಆಫೀಸ್​ನಲ್ಲಿಟ್ಟು ಹಲ್ಲೆ ನಡೆಸಿದ್ದಾರೆ. ಬಳಿಕ ವಕೀಲರ ಮನೆಯವರಿಗೆ ಕರೆ ಮಾಡಿ 10 ಲಕ್ಷ ತರುವಂತೆ ಬೆದರಿಕೆ ಹಾಕಿ, ಲೋಕೇಶನ್​ ಕಳುಹಿಸಿದ್ದಾರೆ. ಮಧ್ಯರಾತ್ರಿ 1 ಗಂಟೆ ವೇಳೆಗೆ ಫೈನಾನ್ಸ್‌ ಕಚೇರಿ ಮೇಲೆ ದಾಳಿ ನಡೆಸಿದ ಪೊಲೀಸರು, ವಕೀಲನನ್ನು ರಕ್ಷಿಸಿದ್ದರ ಜತೆಗೆ, ಆರೋಪಿಗಳನ್ನು ಬಂಧಿಸಿದ್ದಾರೆ. ನಾಗರ ಬಾವಿಯ ವಕೀಲ ಅಭಯ್‌ ಅವರಿಗೆ ಪರಿಚಿತನಾಗಿದ್ದ ಸಿದ್ದೇಶ್‌ ಹಣಕಾಸಿನ ವ್ಯವಹಾರ ಹೊಂದಿದ್ದ. ಖಾಸಗಿ ಕಂಪನಿಯೊಂದರಲ್ಲಿ ಕಾನೂನು ಸಮಾಲೋಚಕನಾಗಿದ್ದ ಅಭಯ್‌ಗೆ ಕಂಪನಿಯೊಂದರಲ್ಲಿ ಹೂಡಿಕೆಗಾಗಿ ಸಿದ್ದೇಶ್‌ ಹಣ ನೀಡಿದ್ದ ಎನ್ನಲಾಗಿದೆ ಮನೆಯವರು ಪೊಲೀಸರೊಂದಿಗೆ ಸ್ಥಳಕ್ಕೆ ತೆರಳಿದಾಗ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಸಂಜಯ್ ಎಂಬಾತ ಭರ್ಜರಿ ಸೇರಿದಂತೆ‌ ಕೆಲವು ಚಿತ್ರಗಳಲ್ಲಿ ನಟಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Exit mobile version