Bengaluru: ರಾಜ್ಯದ ಸ್ಥಳೀಯ ಆಡಳಿತ ಸಂಸ್ಥೆಗಳು ಬಾಕಿ ಉಳಿಸಿಕೊಂಡಿರುವ ವಿದ್ಯುತ್ ಬಿಲ್ ಪಾವತಿಸಲು ರಾಜ್ಯ ಸರ್ಕಾರದ ಬಳಿ ಹಣ ಇಲ್ಲದಿರುವುದರಿಂದ, ವಸತಿ ಮತ್ತು ನಗರಾಭಿವೃದ್ದಿ ನಿಗಮದಿಂದ ರಾಜ್ಯ ಸರ್ಕಾರ, 5257 ಕೋಟಿ ರೂಪಾಯಿಗಳನ್ನು ಸಾಲ ಪಡೆದುಕೊಂಡು, ವಿದ್ಯುತ್ ಸರಬರಾಜು ಕಂಪನಿಗಳಿಗೆ ಪಾವತಿಸಲು ಮುಂದಾಗಿದೆ.
![Electricity Bill](https://sp-ao.shortpixel.ai/client/to_webp,q_glossy,ret_img,w_1024,h_560/https://vijayatimes.com/wp-content/uploads/2024/07/Electricity-bill-1-1024x560.webp)
ಇನ್ನು ರಾಜ್ಯ ಕಾಂಗ್ರೆಸ್ (Congress) ಸರ್ಕಾರದ ಈ ನಡೆಯನ್ನು ಖಂಡಿಸಿರುವ ವಿಪಕ್ಷ ಬಿಜೆಪಿ, ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಕಮಿಷನ್, ಕಲೆಕ್ಷನ್, ಕರಪ್ಶನ್ ಮೂಲಕ ಲೂಟಿ ಮಾಡಿ ಹವಾಲಾ ದಂಧೆ ಮೂಲಕ ಹೊರ ರಾಜ್ಯಗಳ ಚುನಾವಣೆಗೆ ಕಳುಹಿಸಿಕೊಟ್ಟು ಸರ್ಕಾರದ ಖಜಾನೆ ಖಾಲಿ ಮಾಡಿ ಬರ್ಬಾದ್ ಆಗಿದೆ. ವಿದ್ಯುತ್ ಸರಬರಾಜು ಕಂಪನಿಗಳಿಗೆ ಬಾಕಿ ಹಣ ಕೊಡಲು ಕೈಲಾಗದ ಕಾಂಗ್ರೆಸ್ ಸರ್ಕಾರ, ವಸತಿ ಮತ್ತು ನಗರಾಭಿವೃದ್ಧಿ ನಿಗಮದಿಂದ ₹5,257.70 ಕೋಟಿ ಸಾಲ ಕಿತ್ತು ನಿಗಮವನ್ನು ಬರ್ಬಾದ್ ಮಾಡಿದೆ.
ಸರ್ಕಾರವೇ ನಿಗಮಗಳಿಗೆ ಅನುದಾನ ಕೊಟ್ಟು ಅಭಿವೃದ್ಧಿಗೆ ಸಹಕರಿಸಬೇಕು. ಆದರೆ, ಸರ್ಕಾರವೇ ನಿಗಮದಿಂದ ಸಾಲದ ರೂಪದಲ್ಲಿ ದೋಚುತ್ತಿರುವುದು ನೋಡಿದರೆ “ರಾಹು” (Rahu) ಕಾಲ ತೀವ್ರವಾಗಿ ಪರಿಣಾಮ ಬೀರಿದೆ ಎಂದೇ ಅರ್ಥ ಎಂದು ಲೇವಡಿ ಮಾಡಿದೆ.
![](https://sp-ao.shortpixel.ai/client/to_webp,q_glossy,ret_img,w_500,h_281/https://vijayatimes.com/wp-content/uploads/2024/05/siddaramaiah123.webp)
ಇನ್ನು ರಾಜ್ಯದ ಆರ್ಥಿಕ ಪರಿಸ್ಥಿತಿ ಬಗ್ಗೆ ಸ್ಪಷ್ಟನೆ ನೀಡಿರುವ ಸಿಎಂ ಸಿದ್ದರಾಮಯ್ಯ (CM Siddaramaiah) ನವರು, ಗ್ಯಾರಂಟಿ ಯೋಜನೆಗಳಿಗೆ 60,000 ಕೋಟಿ ರೂಪಾಯಿಗಳ ಅಗತ್ಯವಿದೆ. ಸಮಾಜದ ಅಸಮಾನತೆ ಹೋಗಬೇಕಾದರೆ ಎಲ್ಲರಿಗೂ ಆರ್ಥಿಕ, ಸಾಮಾಜಿಕ ಶಕ್ತಿ ಬರಬೇಕು. ಆಗ ಮಾತ್ರ ಸಮಾನತೆ ಬರಲು ಸಾಧ್ಯ. ಆರ್ಥಿಕವಾಗಿ ದುರ್ಬಲರಾದವರಿಗೆ ವಿಶೇಷ ಕಾರ್ಯಕ್ರಮ ನೀಡಿ ಅವರಿಗೆ ಶಕ್ತಿ ತುಂಬುವ ಕೆಲಸ ಮಾಡಲಾಗುತ್ತಿದೆ. ಎಲ್ಲಾ ಧರ್ಮದ, ಎಲ್ಲಾ ಜಾತಿಗಳ ಬಡವರಿಗೆ ಶಕ್ತಿ ತುಂಬಬೇಕಾದರೆ ಸಂಪನ್ಮೂಲ ಇರಬೇಕಾದುದ್ದು ಅಗತ್ಯ.
ತೆರಿಗೆ ಸೋರಿಹೋಗದಂತೆ ವಾಣಿಜ್ಯ ತೆರಿಗೆ ಇಲಾಖೆ ಪ್ರಯತ್ನ ಮಾಡುತ್ತದೆ. 2022-23 ನೇ ಸಾಲಿನಲ್ಲಿ 1,22,821 ಕೋಟಿ ತೆರಿಗೆ ಸಂಗ್ರಹವಾಗಿದೆ. 2023-24 ನೇ ಸಾಲಿನಲ್ಲಿ 1,45,266 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿ ವಾಣಿಜ್ಯ ತೆರಿಗೆ ಇಲಾಖೆ ಉತ್ತಮ ಕೆಲಸ ಮಾಡಿದೆ. ವಾಣಿಜ್ಯ ತೆರಿಗೆ ಇಲಾಖೆಯ 65 ಜನರಿಗೆ ಪ್ರಶಸ್ತಿಗಳನ್ನು ಇಂದು ವಿತರಿಸಲಾಗಿದ್ದು, ಉಳಿದ ಆರು ಸಾವಿರ ಅಧಿಕಾರಿಗಳು ಸಹ ಪ್ರಶಸ್ತಿ ಪಡೆಯುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದಿದ್ದಾರೆ.