Kolkata: ಇಂಡಿಯಾ (I.N.D.I.A )ಮೈತ್ರಿಕೂಟ ಛಿದ್ರವಾಗುವ ವಿದ್ಯಮಾನಗಳ ನಡುವೆಯೇ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 40 ಸ್ಥಾನಗಳನ್ನ ಗೆಲ್ಲೋದು ಸಹ ಅನುಮಾನವಿದೆ ಎಂದು ಭವಿಷ್ಯ ನುಡಿದಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ (Mamata Banerjee), ಧೈರ್ಯವಿದ್ದರೇ ವಾರಣಾಸಿಯಲ್ಲಿ ಬಿಜೆಪಿ ಸೋಲಿಸುವಂತೆ ಸವಾಲು ಹಾಕಿದ್ದಾರೆ.
ಇತ್ತೀಚೆಗಷ್ಟೇ ರಾಜ್ಯದಲ್ಲಿ ಕಾಂಗ್ರೆಸ್ ಜತೆ ತೃಣಮೂಲ ಕಾಂಗ್ರೆಸ್ (TMC) ಮೈತ್ರಿ ಮಾಡಿಕೊಳ್ಳುವುದಿಲ್ಲ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಮಮತಾ ಬ್ಯಾನರ್ಜಿ ಪ್ರಕಟಿಸಿದ್ದರು. ಇದರಿಂದಾಗಿ ಇಂಡಿಯಾ ಮೈತ್ರಿಕೂಟದಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿತ್ತು.
ರಾಜ್ಯದಲ್ಲಿ ಮೈತ್ರಿಗೆ ನಾವು ಸನ್ನದ್ದರಾಗಿದ್ದೆವು. ಎರಡು ಸ್ಥಾನಗಳನ್ನು ನೀಡುವುದಾಗಿ ಹೇಳಿದ್ದೆವು. ಆದರೆ ಕಾಂಗ್ರೆಸ್ (Congress) ನಿರಾಕರಿಸಿದೆ. ಈಗ ಎಲ್ಲ 42 ಸ್ಥಾನಗಳಲ್ಲಿ ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧಿಸಲಿ. ಆ ಬಳಿಕ ಮೈತ್ರಿ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ. ನಾವು ಏಕಾಂಗಿಯಾಗಿ ಹೋರಾಡಿ ಬಂಗಾಳದಲ್ಲಿ ಬಿಜೆಪಿ (BJP)ಯನ್ನು ಸೋಲಿಸುತ್ತೇವೆ’ ಎಂದು ಹೇಳಿದ್ದಾರೆ.
”ತಾಕತ್ತಿದ್ದರೆ ಕಾಂಗ್ರೆಸ್, ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ (Rajasthan, Madhyapradesh) ಸೇರಿದಂತೆ ಹಿಂದಿ ಭಾಷೆ ಪ್ರಾಬಲ್ಯವಿರುವ ರಾಜ್ಯಗಳಲ್ಲಿ ಪ್ರಬಲವಾಗಿರುವ ಬಿಜೆಪಿಯನ್ನು ಸಮರ್ಥವಾಗಿ ಎದುರಿಸಿ ತೋರಿಸಲಿ,” ಎಂದು ದೀದಿ ಸವಾಲು ಹಾಕಿದ್ದಾರೆ. ಅಲ್ಲದೇ, ”ಪಶ್ಚಿಮ ಬಂಗಾಳದ 6 ಜಿಲ್ಲೆಗಳಲ್ಲಿ ಸಂಚರಿಸಿದ ರಾಹುಲ್ ಗಾಂಧಿ (Rahul Gandhi) ಅವರ ಭಾರತ ಐಕ್ಯತಾ ನ್ಯಾಯ ಯಾತ್ರೆಯು ರಾಜ್ಯಕ್ಕೆ ವಲಸೆ ಬಂದಿರುವ ಹಕ್ಕಿಗಳ ಫೋಟೊ ಶೂಟ್ಗೆ ಮಾತ್ರ ಸೀಮಿತವಾಗಿದೆ,” ಎಂದು ಲೇವಡಿ ಮಾಡಿದ್ದಾರೆ.