ಪದ್ಮಾವತಿ ಕೊಲೆ ಪ್ರಕರಣವನ್ನು ಸಿ.ಬಿ.ಐಗೆ ವಹಿಸಬೇಕು ಎಂದ ಗೃಹ ಇಲಾಖೆ!

ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಸಂಬಂಧಿಸಿದಂತೆ ಬಳ್ಳಾರಿ ಮಹಾನಗರ ಪಾಲಿಕೆ ಸದಸ್ಯೆಯಾಗಿದ್ದ ಪದ್ಮಾವತಿ ಯಾದವ್‌ ಕೊಲೆ ಪ್ರಕರಣವನ್ನು ಕೂಡಲೇ ಸಿಬಿಐ ತನಿಖೆಗೆ ವರ್ಗಾವಣೆ ಮಾಡಬೇಕು ಎಂಬುದರ ಕುರಿತು ಡಿಜಿಪಿಗೆ ಪತ್ರದ ಮೂಲಕ ಮಾಹಿತಿ ನೀಡಲಾಗಿದೆ ಎಂದು ಗೃಹ ಇಲಾಖೆ ತಿಳಿಸಿದೆ. ಅಕ್ರಮವಾಗಿ ಕಬ್ಬಿಣದ ಅದಿರು ಮಾರಾಟ, ರಾಜ್ಯ ಸರ್ಕಾರಕ್ಕೆ ರಾಜಧನ ನಷ್ಟವಾಗುವುದರ ಮತ್ತು ಇತರೆ ಟ್ಯಾಕ್ಸ್ ನಷ್ಟಕ್ಕೆ ಕಾರಣರಾಗಿರುವ ಆರೋಪಕ್ಕೆ ಪ್ರಮುಖ ಗುರಿಯಾಗಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಸೇರಿದಂತೆ ಮೂವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಆದೇಶಿಸಿತ್ತು. ಈ ಬೆನ್ನಲ್ಲೇ ಪದ್ಮಾವತಿ ಯಾದವ್‌ ಕೊಲೆ ಪ್ರಕರಣವನ್ನು ಸಿಬಿಐ ತನಿಖೆಗೆ ಶೀಘ್ರವೇ ವರ್ಗಾಯಿಸಬೇಕು ಎಂದು ಸಂಬಂಧ ಗೃಹ ಇಲಾಖೆಗೆ ಬರೆದಿರುವ ಪತ್ರವು ಈಗ ಚರ್ಚೆಗೆ ಬಂದಿದೆ.

ಸಿಬಿಐ ತನಿಖೆಗೆ ವಹಿಸುವ ಸಂಬಂಧ ಒಳಾಡಳಿತ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಪೊಲೀಸ್‌ ಮಹಾನಿರ್ದೇಶಕರಿಗೆ ಮಾಹಿತಿ ಕೋರಿ ಪತ್ರ (ಸಂಖ್ಯೆ ಒಇ; 29 ಪಿಸಿಬಿ 2021) ಬರೆದು ರವಾನಿಸಲಾಗಿದೆ. ಬಳ್ಳಾರಿ ನಗರಸಭೆ ಸದಸ್ಯರಾಗಿದ್ದ ಜಿ. ಪದ್ಮಾವತಿ ಯಾದವ್‌ ಅವರ ಕೊಲೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಕೋರಿ ಈ ಪತ್ರವನ್ನು (ಪತ್ರ ಸಂಖ್ಯೆ; ಅಪರಾಧ-5/09/ಕಲಬುರಗಿ/2021,ದಿನಾಂಕ 12-07-2021) ಪರಿಶೀಲಿಸಿ ದೃಢಪಡಿಸಲಾಯಿತು. ಕರ್ನಾಟಕ ಉಚ್ಚ ನ್ಯಾಯಾಲಯದ ರಿಟ್‌ ಪಿಟಿಷನ್‌ ಸಂಖ್ಯೆ 104087/2018ರಲ್ಲಿ ನಮೂದಿಸಲಾದ ಫಿರ್ಯಾದಿಯ ಮನವಿ ಪತ್ರ, ಇದೇ ರಿಟ್‌ ಅರ್ಜಿಯಲ್ಲಿ ನೀಡಲಾದ ಅಂತಿಮ ಆದೇಶ, ಉಚ್ಚ ನ್ಯಾಯಾಲಯದ ಅಂತಿಮ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದರೆ ಅದರ ಮಾಹಿತಿ ನೀಡಬೇಕು ಎಂದು ಒಳಾಡಳಿತ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯು ಪೊಲೀಸ್‌ ಮಹಾನಿರ್ದೇಶಕರಿಗೆ ಬರೆದಿರುವ ಪತ್ರದಲ್ಲಿ ನಿರ್ದೇಶಿಸಿದ್ದಾರೆ.

ಒಳಾಡಳಿತ ಇಲಾಖೆ ಬರೆದಿರುವ ಪತ್ರದಲ್ಲಿ ಉಲ್ಲೇಖಗೊಂಡಿರುವ ಮಾಹಿತಿ ಹೀಗಿದೆ. ಬಳ್ಳಾರಿ ನಗರದ ಎಂಎಂಟಿಸಿ ಕಾಲೊನಿಯಲ್ಲಿ 2010, ಫೆ.4ರಂದು ರಾತ್ರಿ 8.45ರ ಸಮಯಕ್ಕೆ ಮಹಾನಗರ ಪಾಲಿಕೆ ಸದಸ್ಯೆ, ಬಿಜೆಪಿ ಮುಖಂಡರಾಗಿದ್ದ ಪದ್ಮಾವತಿ ಯಾದವ್ ಅವರನ್ನು ನಾಲ್ವರು ಅಪರಿಚಿತ ದುಷ್ಕರ್ಮಿಗಳು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ದರು. ಸಾವು ನೋವಿನ ಮಧ್ಯೆ ಒದ್ದಾಡುತ್ತಿದ್ದ ಪದ್ಮಾವತಿ ಅವರನ್ನು ಚಿಕಿತ್ಸೆ ಕೊಡಿಸಲು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗಮಧ್ಯೆಯೆ ಅವರ ಉಸಿರು ನಿಂತಿದೆ. ಈ ಕುರಿತು ಅವರ ಸೋದರ ಸುಬ್ಬರಾಯುಡು ಅವರು ದೂರು ನೀಡಿದ್ದರು.

ಈ ಪ್ರಕರಣವನ್ನು ಸರ್ಕಾರವು 2010, ಫೆ.5ರಂದು ಸಿಐಡಿ ತನಿಖೆಗೆ ಒಪ್ಪಿಸಿತ್ತು. ತನಿಖೆ ನಡೆದು ಐದು ವರ್ಷಗಳಾದರೂ ಸಿಐಡಿಯವರು, ನ್ಯಾಯಾಲಯಕ್ಕೆ ವರದಿ ನೀಡಿರಲಿಲ್ಲ. ಸಿಐಡಿಗೆ ವರದಿ ಸಲ್ಲಿಸಲು ಸೂಚಿಸುವಂತೆ ಪ್ರಕರಣದ ದೂರುದಾರ, ಪದ್ಮಾವತಿ ಅವರ ಸೋದರ ಸುಬ್ಬರಾಯುಡು ಅವರು ಹೈಕೋರ್ಟ್‌ ಮೊರೆ ಹೋಗಿದ್ದರು. ಹಲವು ರಾಜಕೀಯ ಪ್ರಭಾವಗಳಿಂದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗಳು ನನ್ನ ಹೇಳಿಕೆಯನ್ನು ಪಡೆದಿಲ್ಲ. ಪ್ರಕರಣದ ಕುರಿತು ತನಿಖೆ ಪೂರ್ಣಗೊಳಿಸಲ್ಲ ಎಂದು ದೂರುದಾರ ಸುಬ್ಬರಾಯುಡು ಅವರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸುವ ಮೂಲಕ ತಿಳಿಸಿದ್ದರು. ತಕ್ಷಣ ತನಿಖಾ ವರದಿ ಸಲ್ಲಿಸಬೇಕು ಎಂದು 2015, ಡಿಸೆಂಬರ್‌ 12ರಂದು ಸಿಐಡಿಗೆ ನ್ಯಾಯಾಲಯ ಸೂಚಿಸಿತ್ತು. ಈ ಸೂಚನೆ ಆಧಾರಿಸಿ, ಬಳ್ಳಾರಿ ನ್ಯಾಯಾಲಯಕ್ಕೆ ಸಿಐಡಿಯವರು 2016, ಸೆ.21 ರಂದು ಆರೋಪಿಗಳು ಸಿಕ್ಕಿಲ್ಲವೆಂದು ಸಿ ರಿಪೋರ್ಟ್‌ ಸಲ್ಲಿಸಿತ್ತು.

ಸಿಐಡಿಯವರ ವರದಿಯಲ್ಲಿ ಅಸ್ಪಷ್ಟತೆ ಇದೆ. ಸಿಐಡಿ, ಸಿ ರಿಪೋರ್ಟ್‌ ಸಲ್ಲಿಕೆ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಮತ್ತು ಪ್ರಕರಣದ ಮರು ತನಿಖೆ ನಡೆಸಬೇಕು ಎಂದು ಸುಬ್ಬರಾಯುಡು ಅವರು ಬಳ್ಳಾರಿ ಪ್ರಿನ್ಸಿಪಾಲ್‌ ಸಿವಿಲ್‌ ಜಡ್ಜ್‌ ಜೂನಿಯರ್‌ ಡಿವಿಜನ್‌ ನ್ಯಾಯಾಲಯಕ್ಕೆ 2017 ರ ಮೇ ತಿಂಗಳಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ಸ್ವೀಕರಿಸಿಕೊಂಡ ನ್ಯಾಯಾಲಯವು, ಸಿಬಿಐ ತನಿಖೆಗೆ ನೀಡುವ ಅಧಿಕಾರ ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ತಿಳಿಸಿತ್ತು. ಆದರೆ, ಪ್ರಕರಣವನ್ನು ಸಿಐಡಿ ಮರುವಿಚಾರಣೆಗೆ ನ್ಯಾಯಾಧೀಶರು ಆದೇಶಿಸಿದ್ದರು. ಪದ್ಮಾವತಿ ಯಾದವ್ ಹತ್ಯೆಯ ಪ್ರಕರಣದಲ್ಲಿ ಜನಾರ್ದನರೆಡ್ಡಿ ಹೆಸರು ಸಿಲುಕಿ ಹಾಕಿಕೊಂಡಿತ್ತು.

ಕೊಲೆ ಪ್ರಕರಣದಲ್ಲಿ ರೆಡ್ಡಿಯ ಕೈ ಅಡಗಿದೆ. ಸಾಕ್ಷಿ ತಿದ್ದುಪಡಿ ಮಾಡಿರುವ ಅನುಮಾನವಿದೆ. ಈ ಹಿಂದೆ ಇದ್ದ ಕೆಲ ಪೊಲೀಸ್ ಅಧಿಕಾರಿಗಳು ಕೂಡ ಕೊಲೆ ಪ್ರಕರಣ ಸಿ ರಿಪೋರ್ಟ್ ಹಾಕಲು ಕುಮ್ಮಕ್ಕು ನೀಡಿದ್ದಾರೆ. ಅಂದಿನ ಡಿಜಿ ಶಂಕರ್ ಬಿದರಿ ಮತ್ತು ತಂಡ ಸಿ ರಿಪೋರ್ಟ್ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ ಎಂಬ ಆರೋಪಗಳು ಬಂದಿದ್ದವು. ಇದು ಈಗ ಕೆಲವರಿಗೆ ತಮ್ಮ ಬುಡಕ್ಕೆ ಬಂತ ಎಂಬ ಚಿಂತೆ ಕಂತೆಗಳು ಕಾಡಿದ್ದಾವೆ ಎನ್ನಬಹುದು.

Exit mobile version