ನೀರು ಕೇಳೋ ನೆಪದಲ್ಲಿ ಕನ್ನಾ ಹಾಕುತ್ತಿದ್ದ ಇಬ್ಬರು ಅಂದರ್

ಮೈಸೂರು, ಫೆ. 02: ಒಂಟಿ ಮಹಿಳೆ ಇರುವ ಮನೆಗೆ ನುಗ್ಗಿ ಚಿನ್ನಾಭರಣ, ನಗದು ದೋಚಿದ್ದ ಇಬ್ಬರು ದರೋಡೆಕೋರರನ್ನು ನಗರದ ಪೊಲೀಸರು ಬಂಧಿಸಿದ್ದಾರೆ.

ಕೆ.ಸಾಲುಂಡಿ ಗ್ರಾಮದ ಶಿವಕುಮಾರ್ (30), ಶಾರದಾದೇವಿನಗರ ನಿವಾಸಿ ಹರೀಶ್ ಯಾದವ್ (23) ಬಂಧಿತ ಆರೋಪಿಗಳು. ಉಳಿದ ಆರೋಪಿಗಳಾದ ಸುನಿಲ್ ಕುಮಾರ್, ಶಶಾಂಕ್, ಕಾರ್ತಿಕ್ ತಲೆ ಮರೆಸಿಕೊಂಡಿದ್ದಾರೆ.

ನಾಗರತ್ನಮ್ಮ ಎಂಬವರ ಮನೆಗೆ ಕುಡಿಯಲು ನೀರು ಕೇಳಿಕೊಂಡು ಬಂದ ಇಬ್ಬರು, ತಕ್ಷಣ ಬಾಗಿಲು ಹಾಕಿ ಚಾಕು ತೋರಿಸಿ ಬೆದರಿಸಿದ್ದರು. 25ಗ್ರಾಂ ತೂಕದ ಚಿನ್ನಾಭರಣ, 17 ಸಾವಿರ ರೂ. ನಗದು ದೋಚಿ ಪರಾರಿಯಾಗಿದ್ದರು. ಈ ಬಗ್ಗೆ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ನಾಗರತ್ನಮ್ಮ ದೂರು ದಾಖಲಿಸಿದ್ದರು.

ಚಾಮುಂಡಿವನಂ ಬಳಿ ಗಿರವಿ ಅಂಗಡಿ ಹತ್ತಿರ ಇಬ್ಬರು ಅನುಮಾನಾಸ್ಪದವಾಗಿ ನಿಂತಿದ್ದನ್ನು ಗಮನಿಸಿದ ಪೊಲೀಸರು ಅವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಕಳ್ಳತನ ಮಾಡಿರುವುದಾಗಿ ಹೇಳಿದ್ದಾರೆ. ಇವರ ವಿರುದ್ಧ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯ ಒಟ್ಟು ಮೂರು ಪ್ರಕರಣಗಳು ಪತ್ತೆಯಾಗಿವೆ. ಬಂಧಿತರಿಂದ ಸುಮಾರು 4 ಲಕ್ಷ ರೂ. ಮೌಲ್ಯದ ಚಿನ್ನದ ಒಡವೆ, ಒಂದು ಆ್ಯಕ್ಟಿವಾ, 2 ಮೊಬೈಲ್, ಚಾಕು, ಮಚ್ಚನ್ನು ವಶಪಡಿಸಿಕೊಳ್ಳಲಾಗಿದೆ.

Exit mobile version