Patna: ಪ್ರಸ್ತುತ ಕಾಂಗ್ರೆಸ್ (Congress) ನೇತೃತ್ವದ ಇಂಡಿಯಾ ಮೈತ್ರಿಕೂಟದ ಭಾಗವಾಗಿರುವ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ (Nitish Kumar) ಮತ್ತು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಕಾಂಗ್ರೆಸ್ಗೆ ನೇರ ಎಚ್ಚರಿಕೆ ನೀಡಿರುವುದು ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಇಬ್ಬರೂ ನಾಯಕರು ನೀಡಿರುವ ಹೇಳಿಕೆಗಳು ಇಂಡಿಯಾ ಮೈತ್ರಿಕೂಟಕ್ಕೆ ಶಾಕ್ ನೀಡುವ ಮನ್ಸೂಚನೆಗಳು ಎಂದೇ ಹೇಳಲಾಗುತ್ತಿದೆ.
ಬಿಹಾರದ (Bihar) ಮೋತಿಹಾರಿಯಲ್ಲಿ ಮಹಾತ್ಮ ಗಾಂಧಿ ಕೇಂದ್ರೀಯ ವಿವಿಯ ಘಟಿಕೋತ್ಸವದಲ್ಲಿ ಮಾತನಾಡಿದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು, ಅಭಿವೃದ್ದಿ ವಿಚಾರದಲ್ಲಿ ಬಿಜೆಪಿ (BJP) ನೇತೃತ್ವದ ಎನ್ಡಿಎ ಮೈತ್ರಿಕೂಟ ಸಾಕಷ್ಟು ಅತ್ಯುತ್ತಮ ಕೆಲಸಗಳನ್ನು ಮಾಡಿದೆ. ಈ ಹಿಂದಿನ ಯುಪಿಎ ಸರ್ಕಾರಕ್ಕೆ ಹೋಲಿಸಿದರೆ ಎನ್ಡಿಎ (NDA) ಉತ್ತಮ ಕಾರ್ಯಗಳನ್ನು ಮಾಡಿದೆ. ಇನ್ನು ಈ ಹಿಂದಿನ ಯುಪಿಎ (UPA) ಸರ್ಕಾರ ಬಿಹಾರ ಸರಕಾರದ ಬೇಡಿಕೆಯನ್ನು ಪರಿಗಣಿಸಿರಲಿಲ್ಲ.
ಮನಮೋಹನ್ ಸಿಂಗ್ (Manamohan Singh) ನೇತೃತ್ವದ ಮೈತ್ರಿ ಸರಕಾರ 10 ವರ್ಷಗಳ ಕಾಲ ನಮ್ಮ ಪ್ರಸ್ತಾಪಕ್ಕೆ ಸ್ಪಂದಿಸಿರಲಿಲ್ಲ. ಆದರೆ 2014ರ ನಂತರ ಮೋದಿ ಸರ್ಕಾರ ನಮ್ಮ ಸರ್ಕಾರದ ಅನೇಕ ಬೇಡಿಕೆಗಳಿಗೆ ಉತ್ತಮವಾಗಿ ಸ್ಪಂದಿಸಿದೆ ಎಂದು ಹೊಸ ರಾಜಕೀಯ ಸಮೀಕರಣದ ಸುಳಿವು ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಬಿಜೆಪಿಯನ್ನು ಹೊಗಳುವ ಮೂಲಕ ಪರೋಕ್ಷವಾಗಿ ಕಾಂಗ್ರೆಸ್ ಪಕ್ಷದ ವಿರುದ್ಧ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಅವರ ಹೇಳಿಕೆ ಸಾಕಷ್ಟು ಚರ್ಚೆಗೆ ಕಾರಣವಾದ ಬೆನ್ನಲ್ಲೇ ಇದಕ್ಕೆ ಸ್ಪಷ್ಟನೆ ನೀಡಿರುವ ಅವರು, ರಾಜಕೀಯವೇ ಬೇರೆ ಸ್ನೇಹವೇ ಬೇರೆ. ಕೆಲಸ ಮಾಡಿದವರನ್ನು ಹೊಗಳುವುದರಲ್ಲಿ ತಪ್ಪಿಲ್ಲ. ಉತ್ತಮ ಕೆಲಸ ಮಾಡಿದ ವ್ಯಕ್ತಿಗಳನ್ನು ನೆನೆಯಬೇಕು ಎಂದು ಹೇಳಿದ್ದಾರೆ.
ಕಾಂಗ್ರೆಸ್ಗೆ ಅಖಿಲೇಶ್ ಯಾದವ್ ಎಚ್ಚರಿಕೆ :
ಮದ್ಯಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿನ ಮೈತ್ರಿ ವಿಚಾರವಾಗಿ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳ ನಡುವೆ ಭಿನ್ನಾಭಿಪ್ರಾಯ ಮೂಡಿದ್ದು, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ (Akhilesh Yadav) ಕಾಂಗ್ರೆಸ್ ವಿರುದ್ದ ನೇರವಾಗಿಯೇ ವಾಗ್ದಾಳಿ ನಡೆಸಿದ್ದಾರೆ. ಈ ಕುರಿತು ಕಾಂಗ್ರೆಸ್ಗೆ ಎಚ್ಚರಿಕೆ ನೀಡುರುವ ಅಖಿಲೇಶ್, ಕಾಂಗ್ರೆಸ್ ಇತರೆ ಪ್ರಾದೇಶಿಕ ಪಕ್ಷಗಳನ್ನು ಲಘವಾಗಿ ಪರಿಗಣಿಸಿದೆ. ಪ್ರಾದೇಶಿಕ ಪಕ್ಷಗಳ ಅಭಿಪ್ರಾಯಗಳಿಗೆ ಮನ್ನಣೆ ನೀಡುತ್ತಿಲ್ಲ.
ಕಾಂಗ್ರೆಸ್ನ ಈ ಮನೋಧರ್ಮ ಮುಂದುವರಿಸಿದರೆ ನಾವು ಮೈತ್ರಿಯಲ್ಲಿ ಇರುವ ಸಾಧ್ಯತೆ ಕಡಿಮೆ. ರಾಜ್ಯ ವಿಧಾನಸಭೆಗಳ ಚುನಾವಣೆಯಲ್ಲಿ ಮೈತ್ರಿಕೆ ಕಾಂಗ್ರೆಸ್ ನಿರಾಕರಿಸಿದರೆ 2024ರ ಲೋಕಸಭೆಗೆ ಸಮಾಜವಾದಿ ಪಕ್ಷ ಏಕಾಂಗಿಯಾಗಿ ಉತ್ತರಪ್ರದೇಶದ (Uttarapradesh) ಎಲ್ಲಾ 80 ಸ್ಥಾನಗಳಿಗೆ ಸ್ಪರ್ಧೆ ಮಾಡಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.