New Delhi: ದೇಶದಾದ್ಯಂತ ಕೋರೋನಾ (Corona) ಅಬ್ಬರಿಸಿದ ನಂತರ ಅರೋಗ್ಯ ಸಮಸ್ಯೆ ಜಾಸ್ತಿಯಾಗಿದ್ದು, ಕೋವಿಡ್ ಲಸಿಕೆ ಬಳಿಕ ಹೃದಯಾಘಾತ, ಹೃದಯ ಸ್ತಂಭನ ಪ್ರಕರಣಗಳು ಹೆಚ್ಚುತ್ತಿವೆ ಎಂಬ ಆರೋಪಗಳು ಕೇಳಿಬರುತ್ತಿರುವ ಹಿನ್ನಲೆ ಕೇಂದ್ರ ಆರೋಗ್ಯ ಸಚಿವಾಲಯವು ಕೊರೊನಾ ಸಾವಿನ ದವಡೆಯಿಂದ ಪಾರಾಗಿ ಬಂದವರು ಹೆಚ್ಚು ದೈಹಿಕ ಶ್ರಮದ ಕೆಲಸ ಮಾಡಬಾರದು ಎಂದು ದೇಶದ ಜನರಿಗೆ ಸಲಹೆ ನೀಡಿದೆ.
ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಂಡಾವೀಯ (Mansukh Mandaviya) ಅವರು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಅಧ್ಯಯನ ವರದಿ ಉಲ್ಲೇಖಿಸಿ ಸಲಹೆ ನೀಡಿರುವ ”ತೀವ್ರ ಕೋವಿಡ್ ಸೋಂಕಿಗೆ ತುತ್ತಾಗಿ ಐಸಿಯುನಲ್ಲಿ ಚಿಕಿತ್ಸೆ ಪಡೆದವರು ಸೇರಿದಂತೆ ಗಂಭೀರ ಆರೋಗ್ಯ ಪರಿಸ್ಥಿತಿ ಎದುರಿಸಿ ಬದುಕಿ ಬಂದವರು ಯಾವುದೇ ಕಾರಣಕ್ಕೂ ಹೆಚ್ಚು ಭಾರದ ಕೆಲಸ ಮಾಡಬಾರದು. ದೈಹಿಕ ವ್ಯಾಯಾಮದಂತಹ ಕಠಿಣ ಕಸರತ್ತು ಮಾಡುವುದನ್ನು ಎರಡು ವರ್ಷ ಕಾಲ ಮುಂದೂಡಬೇಕು,” ಎಂದು ಹೇಳಿದರು.
ಹೆಚ್ಚಾಗಿ ವ್ಯಾಯಾಮ, ಜಿಮ್ ಬೇಡ
ಇತ್ತೀಚೆಗೆ ಗುಜರಾತ್ನಲ್ಲಿ ನವರಾತ್ರಿ ಆಚರಣೆ ವೇಳೆ ಗಾರ್ಬಾ (Garba) ನೃತ್ಯ ಮಾಡುವಾಗ 10 ಜನರು ಹೃದಯಾಘಾತದಿಂದ ಮೃತಪಟ್ಟಿರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ”ಕೊರೊನಾ ಸೋಂಕಿತರು ಸ್ವಲ್ಪ ಸಮಯದವರೆಗೆ ಹೆಚ್ಚು ಭಾರ ಹೊರುವ ಕೆಲಸ ಮಾಡಬಾರದು. ಒಂದು ವರ್ಷ ಅಥವಾ ಎರಡು ವರ್ಷಗಳವರೆಗೆ ಇಂತಹ ವ್ಯಕ್ತಿಗಳು ಅತಿಯಾದ ವ್ಯಾಯಾಮ, ಜಿಮ್ನಲ್ಲಿ ವರ್ಕೌಟ್ (Workout) ಕೂಡ ಮಾಡಬಾರದು ಎಂಬ ಸಲಹೆಯನ್ನು ಐಸಿಎಂಆರ್ ಅಧ್ಯಯನ ವರದಿಯಲ್ಲಿ ಉಲ್ಲೇಖಿಸಿದೆ,” ಎಂದು ತಿಳಿಸಿದರು.
ಕೋವಿಡ್ ತಂದ ಹೃದಯಾಘಾತ
”ಕೋವಿಡ್ ವೈರಸ್ (Corona Virus) ಬಂದ ಬಳಿಕ ದೇಶದಲ್ಲಿ ಹೃದಯಾಘಾತದ ಸಾವಿನ ಪ್ರಮಾಣ ಜಾಸ್ತಿಯಾಗುತ್ತಿದೆ ಎಂಬುದನ್ನು ಐಸಿಎಂಆರ್ ತಜ್ಞರು ಒಪ್ಪಿಕೊಂಡಿದ್ದಾರೆ. ಆದರೆ ಲಸಿಕೆಯ ಅಡ್ಡ ಪರಿಣಾಮದಿಂದ ಈ ಪ್ರಮಾಣ ಹೆಚ್ಚುತ್ತಿದೆ ಎಂಬುದಕ್ಕೆ ಯಾವುದೇ ಪ್ರಬಲ ಪುರಾವೆಗಳಿಲ್ಲ. ಲಸಿಕೆಯಿಂದಲೇ ಹೃದಯಾಘಾತ ಸಂಭವಿಸಿದೆಯೇ ಎಂಬ ಬಗ್ಗೆ ಸಂಶೋಧನೆ ನಡೆಸಲಾಗುತ್ತಿದೆ. ಅಧ್ಯಯನದ ಬಳಿಕವಷ್ಟೇ ನೈಜ ಕಾರಣ ತಿಳಿದು ಬರಲಿದೆ ಎಂದು ಸಚಿವರು ತಿಳಿಸಿದ್ದಾರೆ.
ಶೇ.30ರಷ್ಟು ಹೆಚ್ಚಳ
ಜಾಗತಿಕ ಮಟ್ಟದಲ್ಲಿ ಈ ಸಾಂಕ್ರಾಮಿಕ ರೋಗದ ಬಳಿಕ ಹೃದಯಾಘಾತ ಪ್ರಮಾಣ ಶೇ.30ರಷ್ಟು ಹೆಚ್ಚಳವಾಗಿರುವುದು ದೃಢಪಟ್ಟಿದೆ. 24 ರಿಂದ 45 ವರ್ಷದ ವಯೋಮಾನದವರು ಹೆಚ್ಚಿನ ಪ್ರಮಾಣದಲ್ಲಿ ಹೃದಯಾಘಾತಕ್ಕೆ ಬಲಿಯಾಗಿರುವುದು ಕಂಡು ಬಂದಿದೆ.
ಭವ್ಯಶ್ರೀ ಆರ್.ಜೆ