ಮನೆ ಬಾಗಿಲಿಗೇ ಆಕ್ಸಿಜನ್‌ ಕಾನ್ಸಂಟ್ರೇಟರ್‌, ಜಿಲ್ಲೆಗೊಂದು ಆಕ್ಸಿಜನ್‌ ಬ್ಯಾಂಕ್‌: ದೆಹಲಿ ಸರ್ಕಾರದ ಮಹತ್ವದ ನಿರ್ಧಾರ

ಹೊಸದಿಲ್ಲಿ, ಮೇ. 15: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೊನಾ 2ನೇ ಅಲೆಯ ಆತಂಕ ಉಲ್ಬಣಿಸಿದ್ದು, ಇದನ್ನು ನಿಯಂತ್ರಿಸಲು ದೆಹಲಿ ಸರ್ಕಾರ ಮನೆ ಮನೆಗೆ ಆಕ್ಸಿಜನ್‌ ಕಾನ್ಸಂಟ್ರೇಟರ್‌ ಒದಗಿಸುವ ನಿಟ್ಟಿನಲ್ಲಿ ಮಹತ್ವದ ತೀರ್ಮಾನ ಕೈಗೊಂಡಿದೆ.

ದೆಹಲಿಯಲ್ಲಿ ಕೊರೊನಾ ಸೋಂಕಿನ ಪ್ರಕರಣಗಳ ಸಂಖ್ಯೆ ಹೆಚ್ಚಾದ ಪರಿಣಾಮ ‌ಹಲವೆಡೆ ಆಕ್ಸಿಜನ್ ಕೊರತೆ ಕಂಡುಬಂದ ಪರಿಣಾಮ, ಹೆಚ್ಚಿನ ಸಾವು ‌ನೋವುಗಳು ಸಂಭವಿಸಿತ್ತು. ಈ ಹಿನ್ನೆಲೆ ಆಕ್ಸಿಜನ್ ಪೂರೈಸುವ ಸಲುವಾಗಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟಣೆಯಲ್ಲಿ ವಿವರಿಸಿರುವ ಸಿಎಂ ಅರವಿಂದ ಕೇಜ್ರಿವಾಲ್, ಬಹಳಷ್ಟು ಮಂದಿ ಆಕ್ಸಿಜನ್‌ ಸಿಗದೆ ಮನೆಯಲ್ಲೇ ಸಾವಿಗೀಡಾಗುತ್ತಿದ್ದಾರೆ. ಅಲ್ಲದೇ ಆಸ್ಪತ್ರೆಯಲ್ಲಿ ಆಕ್ಸಿಜನ್‌ ಸೌಲಭ್ಯವಿಲ್ಲದೆ ಸಾವಿಗೀಡಾಗುತ್ತಿರುವವರನ್ನೂ ನೋಡಿರಬಹುದು. ಈ ಎರಡೂ ವರ್ಗದ ರೋಗಿಗಳಿಗೆ ನೆರವಾಗುವ ದೃಷ್ಟಿಯಿಂದ ಜಿಲ್ಲೆಗೊಂದು ಆಕ್ಸಿಜನ್‌ ಬ್ಯಾಂಕ್‌ ರಚಿಸಲಾಗಿದೆ.

ಆಕ್ಸಿಜನ್‌ ಅಗತ್ಯ ಇರುವವರು ಕರೆ ಮಾಡಿ ಮನೆ ಬಾಗಿಲಿಗೇ ಆಕ್ಸಿಜನ್‌ ಕಾನ್ಸಂಟ್ರೇಟರ್‌ ಅನ್ನು ಪಡೆಯಬಹುದಾಗಿದೆ. ಇದನ್ನು ಅಳವಡಿಸಿಕೊಳ್ಳುವುದು ಹೇಗೆ ಎಂದು ಬಲ್ಲ ತಾಂತ್ರಿಕ ತಜ್ಞರೊಬ್ಬರು ನಿಮಗೆ ಆಕ್ಸಿಜನ್‌ ಒದಗಿಸುವ ತಂಡದಲ್ಲಿ ಇರಲಿದ್ದಾರೆ. ಬಳಕೆದಾರರಿಗೆ ಇದರ ಬಗ್ಗೆ ಅವರು ಮಾಹಿತಿ ನೀಡಲಿದ್ದಾರೆ. ಕೋವಿಡ್‌ ಸೊಂಕಿತರಿಗೆ ನೆರವಾಗಬಲ್ಲ ಸ್ವಯಂ ಸೇವಕರು ಈ ಯೋಜನೆಗೆ ಕೈ ಜೋಡಿಸಬಹುದು.

ಆಸ್ಪತ್ರೆಯಿಂದ ಬಿಡುಗಡೆಯಾಗಿಯೂ ಆಮ್ಲಜನಕದ ಅಗತ್ಯತೆ ಇರುವವರಿಗೂ ಈ ಸೇವೆ ಲಭ್ಯವಾಗಲಿದೆ. ನಮ್ಮ ರಾಜ್ಯದ ವೈದ್ಯರು ರೋಗಿಗಳೊಂದಿಗೆ ಸಂಪರ್ಕದಲ್ಲಿರಲಿದ್ದಾರೆ. ಏನೇ ಸಮಸ್ಯೆ ಇದ್ದರೂ 1031 ಸಹಾಯವಾಣಿಗೆ ಕರೆ ಮಾಡಬಹುದು ಎಂದು ಕೇಜ್ರಿವಾಲ್‌ ತಿಳಿಸಿದ್ದಾರೆ.

Exit mobile version