ಮೈಸೂರು, ಏ. 05: ಪವರ್ ಸ್ಟಾರ್ ಅಭಿನಯದ ಯುವರತ್ನ ಸಿನಿಮಾ ನೋಡಬೇಕು ಎಂದು ಆಸೆಪಟ್ಟಿದ್ದ ನಟ ಪುನೀತ್ ರಾಜ್ಕುಮಾರ್ ಅಪ್ಪಟ ಅಭಿಮಾನಿಯೊಬ್ಬ ಸಿನಿಮಾ ರಿಲೀಸ್ ಗೂ ಮುನ್ನ ಸಾವನಪ್ಪಿದ್ದು, ಮಗನ ಆಸೆ ಈಡೇರಿಸುವ ಸಲುವಾಗಿ ಕುಟುಂಬಸ್ಥರು ಸಿನಿಮಾ ವೀಕ್ಷಣೆ ಮಾಡಿದ್ದಾರೆ.
ಮೈಸೂರಿನ ನಿವಾಸಿ ಮುರಳೀಧರ್ ಎಂಬುವವರ ಪುತ್ರ ಹರಿಕೃಷ್ಣನ್ ಕಳೆದ 3 ತಿಂಗಳ ಹಿಂದೆ ಈಜಲು ಹೋಗಿ ನೀರಲ್ಲಿ ಮುಳುಗಿ ಮೃತಪಟ್ಟಿದ್ದರು. ಹೀಗಾಗಿ ಮಗನ ಆಸೆ ಈಡೇಸಲು ನಗರದ ಡಿ.ಆರ್.ಸಿ ಮಲ್ಟಿಪ್ಲೆಕ್ಸ್ ಗೆ ಬಂದ ತಂದೆ-ತಾಯಿ, ಸಾವನ್ನಪ್ಪಿದ ಮಗನಿಗೂ ಒಂದು ಟಿಕೆಟ್ ತೆಗೆದುಕೊಂಡು ಥಿಯೇಟರ್ ನಲ್ಲಿ ಮಗನ ಫೋಟೋ ಹಿಡಿದು ಕಣ್ಣೀರಿಡುತ್ತಾ ಚಲನಚಿತ್ರ ವೀಕ್ಷಣೆ ಮಾಡಿದ್ದಾರೆ.
ಹರಿಕೃಷ್ಣನ್ ಬದುಕಿದ್ದಾಗ ಪುನೀತ್ ರಾಜ್ಕುಮಾರ್ ಅಪ್ಪಟ ಅಭಿಮಾನಿಯಾಗಿದ್ದ. ಅಲ್ಲದೇ ಯುವರತ್ನ ಸಿನಿಮಾ ಟೀಸರ್ ಹಾಗೂ ಸಾಂಗ್ ಕೇಳಿ ಸಾಕಷ್ಟು ಬದಲಾಗಿದ್ದ ಹರಿಕೃಷ್ಣ, ಓದಿನ ಬಗ್ಗೆ ಸಾಕಷ್ಟು ಆಸಕ್ತಿ ಬೆಳೆಸಿಕೊಂಡಿದ್ದನಂತೆ. ಜೊತೆಗೆ ಕುಟುಂಬದವರೆಲ್ಲಾ ಒಟ್ಟಾಗಿ ಸಿನಿಮಾ ವೀಕ್ಷಣೆ ಮಾಡೋಣ ಎಂದು ಆಸೆಪಟ್ಟಿದ್ದನಂತೆ. ಆದರೆ ವಿಧಿಯಾಟಕ್ಕೆ ಸಿಲುಕಿ ಹರಿಕೃಷ್ಣನ್ ಅಕಾಲಿಕ ಮರಣಕ್ಕೆ ತುತ್ತಾಗಿದ್ದಾನೆ.
ಇನ್ನು, ಸಿನಿಮಾ ವೀಕ್ಷಣೆ ಮಾಡಿದ ಬಳಿಕ ತಂದೆ ಮುರಳೀಧರ್ ಭಾವುಕರಾದ್ರು . ತಮ್ಮ ಮಗನನ್ನ ನೆನೆಸಿಕೊಂಡು ಕಣ್ಣೀರಿಟ್ಟರು. ಇಡೀ ಕುಟುಂಬ ವಯಸ್ಸಿಗೆ ಬಂದ ಮಗನನ್ನ ನೆನೆದು ಬೇಸರಗೊಂಡ್ರು . ಅಲ್ದೇ ಆತ ಇದ್ದಿದ್ರೆ ಇವತ್ತು ಸಿನಿಮಾ ನೋಡಿ ಸಾಕಷ್ಟು ಸಂತಸಪಡುತ್ತಿದ್ದ ಅಂತ ಅಭಿಪ್ರಾಯಪಟ್ಟರು.
ಇನ್ನೂ ಮುರಳಿಧರ್ ಹಾಗು ಕುಟುಂಬದವರು ಅವರ ದಿ.ಪುತ್ರ ಹರಿಕೃಷ್ಣನ್ ಫೋಟೋ ಜೊತೆಗೆ ಯುವರತ್ನ ಸಿನಿಮಾ ನೋಡಿರುವ ದೃಶ್ಯಗಳನ್ನು ಕಂಡು ನಟ ಪುನೀತ್ ರಾಜ್ಕುಮಾರ್ ಮರುಕ ವ್ಯಕ್ತಪಡಿಸಿದ್ದಾರೆ.