ತರಗತಿಗೆ ಹಿಜಾಬ್ ಧರಿಸಿ ಬರುತ್ತೀವಿ ಎಂದು ಮುಸ್ಲಿಂ ವಿದ್ಯಾರ್ಥಿನಿಯರು ಪಟ್ಟು ಹಿಡಿದು ನಿಂತರೇ, ಅತ್ತ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಬರುವಂತ ಸಂಧರ್ಭಗಳು ಉಡುಪಿ ಕಾಲೇಜುಗಳಲ್ಲಿ ಎದುರಾಗುತ್ತೀವೆ! ಇದೊಂದು ರಾಜಕೀಯ ಹುನ್ನಾರವ? ಎಂಬುದು ಅಸ್ಪಷ್ಟವಾಗಿ ಗೋಚರಿಸುತ್ತಿದೆ. ಎರಡು ಧರ್ಮಗಳ ನಡುವೆ ನಡೆಯುತ್ತಿರುವ ಸಮರದಂತೆ ಸಾಗುತ್ತಿದೆ ಈ ಒಂದು ಹಿಜಾಬ್ ಪ್ರಕರಣ. ರಾಜ್ಯದಲ್ಲಿ ಕಳೆದ ಒಂದೆರೆಡು ವಾರಗಳಿಂದ ಪ್ರಮುಖ ಸುದ್ದಿಯಲ್ಲಿರುವ ಉಡುಪಿ ಜಿಲ್ಲೆಯ ಕಾಲೇಜಿನ ಮುಸ್ಲಿಂ ವಿದ್ಯಾರ್ಥಿನಿಯರ ಹಿಜಾಬ್ ಪ್ರಕರಣ ಇಡೀ ರಾಜ್ಯವನ್ನೇ ಕೆಣಕುತ್ತಿರುವ ಪ್ರಶ್ನೆಯಾಗಿದೆ.
ಹಲವಾರು ವರ್ಷಗಳಿಂದ ಉಡುಪಿ ಶಾಲೆಗಳಲ್ಲಿ ಹಾಗೂ ರಾಜ್ಯದ ಶಾಲೆಗಳಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಧರಿಸುತ್ತಿದ್ದ ಹಿಜಾಬ್ ಯಾವುದೇ ವಾದ-ವಿವಾದಕ್ಕೆ ಕಾರಣವಾಗಿರಲಿಲ್ಲ. ಆದರೆ ಕಡಲ ತೀರಗಳ ಆಗರವಾದ ಉಡುಪಿ ಜಿಲ್ಲೆಯಲ್ಲಿ ಇದೇ ಪ್ರಥಮ ಬಾರಿಗೆ ಹುಟ್ಟಿಕೊಂಡಿರುವ ಜಾತಿ, ಧರ್ಮದ ಕಿಡಿ ದೊಡ್ಡ ತೊಂದರೆಗೆ ಎಡ ಮಾಡಿಕೊಡಲಿದೆಯಾ ಎಂಬ ಅನೇಕ ಪ್ರಶ್ನೆಗಳು ಸದ್ಯ ರಾಜ್ಯದಲ್ಲಿ ಬುಗಿಲೆದ್ದೀವೆ. ಎರಡು ಧರ್ಮಗಳ ನಡುವೆ ಕೋಮು ಸಂಘರ್ಷವನ್ನುಂಟು ಮಾಡುವಂತೆ ಮಾರ್ಪಟ್ಟಿದೆ. ಉಡುಪಿ ಜಿಲ್ಲೆಯ ಕಾಲೇಜಿನಲ್ಲಿ ಇಷ್ಟು ವರ್ಷಗಳಲ್ಲಿ ಕಂಡು ಕೇಳದ ಹಿಜಾಬ್ ಪ್ರಕರಣ ಇಂದು ದೊಡ್ಡ ಸಮಸ್ಯೆಯಾಗಿ ಕಾಣಸಿಕೊಂಡಿದೆ.
ಇತ್ತ ಕಾಲೇಜು ಆಡಳಿತ ಮಂಡಳಿ ಪ್ರತ್ಯೇಕವಾಗಿ 6 ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಿ ಬರುವುದಾದರೆ ಕಾಲೇಜಿನ ತರಗತಿ ಒಳಗೆ ಪ್ರವೇಶವಿಲ್ಲ ಎಂದು ತಿಳಿಸಿದರೆ, ನಾವು ಹಿಜಾಬ್ ಧರಿಸಿಯೇ ಕ್ಲಾಸಿಗೆ ಬರ್ತೀವಿ, ಪಾಠ ಕೇಳ್ತೀವಿ ಎಂದು ಆಗ್ರಹಿಸುತ್ತಿರುವ ವಿದ್ಯಾರ್ಥಿನಿಯರು ಮತ್ತೊಂದೆಡೆ. ಈ ವಿಚಾರವಾಗಿ ಶಾಲೆಯ ಆಡಳಿತ ಮಂಡಳಿ ಹಾಗೂ ಮುಸ್ಲಿಂ ವಿದ್ಯಾರ್ಥಿನಿಯರ ನಡುವೆ ದೊಡ್ಡ ಗಲಾಟೆಯೇ ಸಂಭವಿಸಿದ್ದು, ಕಾಲೇಜು ಆಡಳಿತ ಮಂಡಳಿ ಹಿಜಾಬ್ ಧರಿಸಿ ಬರುವುದಾದರೆ ಪ್ರವೇಶವಿಲ್ಲ ಎಂದು ಹೇಳಿದರೆ ವಿದ್ಯಾರ್ಥಿನಿಯರು ಧರಿಸಿಯೇ ನಾವು ಬರುವುದು ಎಂದು ಹಠ ಹಿಡಿದಿದ್ದಾರೆ.
ಈ ಚರ್ಚೆ ಇದೀಗ ತೀವ್ರವಾಗಿ ತಿರುವು ಪಡೆದುಕೊಂಡಿದ್ದು, ಕಾಲೇಜು ಆಡಳಿತ ಮಂಡಳಿ ಮತ್ತು ಮುಸ್ಲಿಂ ವಿದ್ಯಾರ್ಥಿನಿಯರ ನಡುವೆ ಬಗೆಹರಿಯದ ಸಮಸ್ಯೆಯಾಗಿ ನಿಂತಿದೆ. ಈ ಕುರಿತು ಮೊನ್ನೆಯಷ್ಟೇ ಮುಸ್ಲಿಂ ವಿದ್ಯಾರ್ಥಿನಿ ಒಬ್ಬರು ಹೈಕೋರ್ಟ್ ಮೆಟ್ಟಿಲೇರಿ ರಿಟ್ ಅರ್ಜಿ ಸಲ್ಲಿಸಿದ್ದಾರೆ. ನಮಗೆ ತರಗತಿಯೊಳಗೆ ನಮ್ಮ ಧರ್ಮದ ಹಿಜಾಬ್ ಅನ್ನು ಧರಿಸಿಕೊಂಡು ಹೋಗಲು ಅನುಮತಿ ಸೂಚಿಸಿಬೇಕು ಎಂದು ಮನವಿ ಸಲ್ಲಿಸಿದರು. ಈ ಒಂದು ವಿವಾದ ರಾಷ್ಟ್ರಮಟ್ಟದಲ್ಲಿ ದೊಡ್ಡ ಚರ್ಚೆಯಾಗಿ ಪರಿವರ್ತನೆಗೊಂಡಿದೆ. ಮೊನ್ನೆಯವರೆಗೂ ಕೇವಲ ಮುಸ್ಲಿಂ ಹೆಣ್ಣುಮಕ್ಕಳ ಹಿಜಾಬ್ ವಾದಗಳಿದ್ದರೆ, ಇಂದು ಅದೇ ಕಾಲೇಜಿನ ಯುವಕರು ಕೇಸರಿ ಶಾಲ್ ಕುತ್ತಿಗೆಗೆ ಧರಿಸಿಕೊಂಡು ಕಾಲೇಜಿನೊಳಗೆ ಬಂದಿದ್ದಾರೆ.
ಇದೆನ್ನೆಲ್ಲಾ ಗಮನಿಸಿ ನೋಡುವುದಾದರೆ ಇದೊಂದು ರಾಜಕೀಯ ಕುತಂತ್ರವೇ ಎಂಬುದು ಸ್ಪಷ್ಟವಾಗಿ ತಿಳಿಯುತ್ತಿದೆ. ಇಷ್ಟು ದಿನ ಕೇಸರಿ ಶಲ್ಯ ಧರಿಸದ ಹಿಂದು ಯುವಕರಿಗೆ, ಇಂದು ಯಾರೋ ಒಬ್ಬರು ಹಿಜಾಬ್ ಪ್ರಕರಣದ ಬೆನ್ನಲೇ ಅವರಿಗೆಲ್ಲಾ ಕೇಸರಿ ಶಾಲ್ ಹಾಕಿ ಕಾಲೇಜಿಗೆ ಕಳಿಸಿದ್ದಾರೆ. ಈ ರೀತಿ ಮಾಡುವ ಮೂಲಕ ವಿದ್ಯಾರ್ಥಿಗಳಲ್ಲಿ ಜಾತಿ, ಧರ್ಮಗಳ ವಿಷ ಬೀಜನೆ ಬಿತ್ತುವ ಕೆಲಸವನ್ನು ಮಾಡುತ್ತಿದ್ದಾರೆ ಎಂಬುದು ನಿಖರವಾಗಿ ತಿಳಿಯುತ್ತಿದೆ. ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಕ್ಷೇತ್ರವನ್ನು ಜಾತಿ, ಧರ್ಮದ ವಿರುದ್ಧ ಹೋರಾಡುವ ಅಖಾಡವನ್ನಾಗಿ ಮಾಡಿಕೊಳ್ಳಬಾರದು. ಬದಲು ವಿದ್ಯೆ ಕಲಿಕೆ, ಜೀವನಕ್ಕೆ ಬೃಹತ್ ಅಡಿಪಾಯವನ್ನು ನಿರ್ಮಿಸಿಕೊಳ್ಳುವಂತ ಒಂದು ಕೇಂದ್ರವನ್ನಾಗಿಸಬೇಕು ಎಂದು ಅನೇಕರು ಹೇಳುತ್ತಿದ್ದಾರೆ.
ತರಗತಿಯಲ್ಲಿ ಎಲ್ಲರೂ ವಿದ್ಯಾಭ್ಯಾಸ ಮುಂದುವರಿಸಲು ಬಂದಾಗ ಅಲ್ಲಿ ವಿದ್ಯೆಯ ಆಗರವಿರಬೇಕು, ಸ್ನೇಹ ತುಂಬಿರಬೇಕು, ಓದುವ ಪರಸ್ಪರ ಸಂಪ್ರದಾಯಗಳು ಹಬ್ಬಬೇಕು ಆ ರೀತಿ ವಿದ್ಯಾರ್ಥಿಗಳು ರೂಡಿಸಿಕೊಳ್ಳಬೇಕೇ ವಿನಃ ಕೋಮುವಾದಿಗಳ ಉದ್ದೇಶಕ್ಕೆ ಬಲಿಯಾಗಬಾರದು, ಅವರ ತಾಳಕ್ಕೆ ಕುಣಿಯಬಾರದು ಎಂಬುದನ್ನು ಸ್ಥಳೀಯ ಮುಖಂಡರು ಸ್ಪಷ್ಟವಾಗಿ ಹೇಳಿದ್ದಾರೆ. ಒಟ್ಟಾರೆ ಮುಸ್ಲಿಂ ವಿದ್ಯಾರ್ಥಿನಿಯರ ಹಿಜಾಬ್ ಪ್ರಕರಣಕ್ಕೆ ಬ್ರೇಕ್ ಬಿಳಲಿದೆಯಾ ಅಥವಾ ಮತ್ತಷ್ಟು ತಿರುವುಗಳು ಪಡೆದುಕೊಳ್ಳಲಿದೆಯೋ ಎಂಬುದನ್ನು ಕಾದು ನೋಡಬೇಕಿದೆ.