Bellary: ಬಳ್ಳಾರಿಗೆ (Problem for Kannada Students) ಹೊಂದಿಕೊಂಡಿರುವ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಗಡಿಭಾಗದ ಕನ್ನಡ ಶಾಲೆಗಳ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದ್ದು,
ಆಂಧ್ರಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ಸಿಬಿಎಸ್ಇ (CBSE) ಮಾದರಿ ಪರೀಕ್ಷೆ ಮಾಡಲು ಆದೇಶ ಹೊರಡಿಸಿದೆ. ಹಾಗಾಗಿ ಕರ್ನಾಟಕದ ಮಕ್ಕಳು ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯಬೇಕಿದ್ದು,
ತೆಲುಗು ಭಾಷೆಯನ್ನು ಭಾಷಾ ವಿಷಯವನ್ನಾಗಿ (Problem for Kannada Students) ಕಡ್ಡಾಯ ಮಾಡಲಾಗಿದೆ.
ನೆರೆಯ ಆಂಧ್ರಪ್ರದೇಶದಲ್ಲಿ (Andrapradesh) 9ನೇ ತರಗತಿ ಸಿಬಿಎಸ್ಇ ಮಾದರಿ ಪರೀಕ್ಷೆಗೆ ಆದೇಶ ಹಾಗೂ ಕನ್ನಡ, ಉರ್ದು ಕಲಿಕೆ ಶಾಶ್ವತವಾಗಿ ನಿಲ್ಲಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡ ಕಾರಣ ಗಡಿ
ಭಾಗದ ಕನ್ನಡ ಭಾಷಿಕರ ಮಕ್ಕಳು ತೊಂದರೆಗೆ ಸಿಲುಕುವಂತಾಗಿದೆ. ಹೀಗಾಗಿ ಮಕ್ಕಳಿಗೆ ಕನ್ನಡ ಕಲಿಯಲು ಅವಕಾಶವೇ ಇಲ್ಲದಂತಾಗಿದೆ ಎಂದು ವಿದ್ಯಾರ್ಥಿಗಳು ಮತ್ತು ಪೋಷಕರು ಅಳಲು ತೋಡಿಕೊಂಡಿದ್ದಾರೆ.
ಸುಮಾರು ವರ್ಷಗಳಿಂದ ಅಭ್ಯಾಸ ಮಾಡುತ್ತಿದ್ದ ತೆಲುಗು (Telugu) ಭಾಷೆಯನ್ನು ಹೊರತುಪಡಿಸಿ, ಇತರೆ ಭಾಷೆಗಳಿಗೆ ವಿದಾಯ ಹೇಳಲು ಮುಂದಾಗಿರುವುದು ಕನ್ನಡಿಗರ ಭಾಷಾ ಅಭಿಮಾನಕ್ಕೆ ಧಕ್ಕೆ ಉಂಟಾಗಿದೆ.
ವಿದ್ಯಾರ್ಥಿಗಳಲ್ಲಿ ಮೂಡಿದ ಆತಂಕ:
ಆಂಧ್ರಪ್ರದೇಶದ ಸರ್ಕಾರವು, ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಆಂಧ್ರಪ್ರದೇಶದ ಪ್ರೌಢಶಾಲೆಗಳಲ್ಲಿ 9ನೇ ತರಗತಿ ವಿದ್ಯಾರ್ಥಿಗಳಿಗೆ ಸಿಬಿಎಸ್ಇ ಮಾದರಿ ಪರೀಕ್ಷೆ ನಡೆಸುವಂತೆ ಆದೇಶ ಹೊರಡಿಸಿದೆ.
ಇದು ಆಂಧ್ರದಲ್ಲಿರುವ ಕನ್ನಡ ಮಾಧ್ಯಮ ಶಾಲೆಗಳಿಗೆ ಕಂಟಕವಾಗಿ ಪರಿಣಮಿಸಿದ್ದು, ಸರ್ಕಾರದ ಈ ದಿಢೀರ್ ಆದೇಶದಿಂದ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಆತಂಕ ಎದುರಾಗಿದೆ. ಇನ್ನು
ಈ ಆದೇಶದಿಂದಾಗಿ 9ನೇ ತರಗತಿ ಮಕ್ಕಳು ಇಂಗ್ಲಿಷ್ (English) ಮಾಧ್ಯಮದಲ್ಲಿ ಪರೀಕ್ಷೆ ಬರೆಯಬೇಕಿದೆ. ಮೊದಲ ಭಾಷೆಯಾಗಿ ತೆಲುಗು, ತೃತೀಯ ಭಾಷೆಯಾಗಿ ಹಿಂದಿ ಕಲಿಕೆಗಷ್ಟೇ
ಅವಕಾಶವಿದ್ದು, ಕನ್ನಡ ಕಲಿಕೆಗೆ ಅವಕಾಶವೇ ಇಲ್ಲದಂತಾಗಿದೆ.
ಇದ್ದಕ್ಕಿದ್ದಂತೆ ಇಂಗ್ಲಿಷ್ ಮಾಧ್ಯಮ
ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ 11, ಅನಂತಪುರ (Anantapur) ಜಿಲ್ಲೆಯಲ್ಲಿ 3 ಕನ್ನಡ ಮಾಧ್ಯಮ ಪ್ರೌಢಶಾಲೆಗಳಿವೆ. ಎರಡೂ ಜಿಲ್ಲೆಗಳ ಪ್ರೌಢಶಾಲೆಗಳಲ್ಲಿಸುಮಾರು 5 ಸಾವಿರಕ್ಕೂ ಹೆಚ್ಚು
ವಿದ್ಯಾರ್ಥಿಗಳು ಕನ್ನಡ (Kannada) ಮಾಧ್ಯಮದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಸರ್ಕಾರದ ಆದೇಶದಿಂದಾಗಿ ಈಗ 9ನೇ ತರಗತಿಯಲ್ಲಿ ಓದುತ್ತಿರುವ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಶೈಕ್ಷಣಿಕ
ವರ್ಷದ ಮಧ್ಯದಲ್ಲಿ ಕನ್ನಡ ಮಾಧ್ಯಮ ಬಿಟ್ಟು ಇದ್ದಕ್ಕಿದ್ದಂತೆ ಇಂಗ್ಲಿಷ್ ಮಾಧ್ಯಮಕ್ಕೆ ಬದಲಾಗಬೇಕಾಗಿದೆ. ಇದಕ್ಕೆ ಕನ್ನಡಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.
ಕನ್ನಡ ಕಲಿಕೆಗೆ ಅವಕಾಶವೇ ಇಲ್ಲ
ಎಲ್ಲರೂ ಇಂಗ್ಲಿಷ್ ಕಲಿಯಬೇಕು ಎಂಬ ಉದ್ದೇಶದಿಂದ ಆಂಧ್ರ ಪ್ರೌಢಶಾಲೆ ಹಂತದಲ್ಲಿ ಸಿಬಿಎಸ್ಇ ಮಾದರಿ ಜಾರಿಗೊಳಿಸಿದೆ. ಆದರೆ ಒಂದು ವಿಷಯವಾಗಿ ಕನ್ನಡ ಕಲಿಕೆಗೆ ಆಸ್ಪದ ನೀಡದಿರುವುದರಿಂದ
ವಿದ್ಯಾರ್ಥಿಗಳು ಸಮಸ್ಯೆ ಎದುರಿಸುವಂತಾಗಿದೆ. ಶೈಕ್ಷಣಿಕ ವರ್ಷದಿಂದ ಆಂಧ್ರಪ್ರದೇಶದ ಆಯ್ದ 1000 ಪ್ರೌಢಶಾಲೆಗಳಲ್ಲಿ ಸಿಬಿಎಸ್ಇ ಮಾದರಿಯಲ್ಲಿ ಒಂಬತ್ತನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ
ನಡೆಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಇದನ್ನು ಓದಿ: ಬ್ಯೂಟಿ ಟಿಪ್ಸ್: ಸುಂದರವಾಗಿ ಕಾಣಬೇಕೇ? ಹಾಗಾದ್ರೆ ಮುಖದ ಕಾಂತಿ ಹೆಚ್ಚಿಸಲು ಇಲ್ಲಿದೆ ಟಿಪ್ಸ್
- ಭವ್ಯಶ್ರೀ ಆರ್ ಜೆ