ಮೆಹಂದಿ ಶಾಸ್ತ್ರದ ವೇಳೆ ದೌರ್ಜನ್ಯ ನಡೆಸಿದ ಪೊಲೀಸ್‌ ಉಪ ನಿರೀಕ್ಷಕ ಅಮಾನತು

ಉಡುಪಿ ಡಿ 29 : ಕೊರಗ ಸಮುದಾಯದ ಮದುವೆಯ ಮೆಹಂದಿ ಶಾಸ್ತ್ರ ನಡೆಯುತ್ತಿದ್ದ ವೇಳೆ ಪೊಲೀಸರು ನಡೆಸಿದ ದೌರ್ಜನ್ಯದ ವಿರುದ್ದ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಉಪನಿರೀಕ್ಷಕ ಬಿ.ಪಿ. ಸಂತೋಷ್‌ ಎಂಬುವವರನ್ನು ಅಮಾನತುಗೊಳಿಸಿದ್ದು, ಐವರು‌ ಸಿಬ್ಬಂದಿಯನ್ನು ಬೇರೆಡೆಗೆ ವರ್ಗಾಯಿಸಲಾಗಿದೆ.

ಮದುಮಗ, ಮಹಿಳೆಯರು, ಹಿರಿಯರು ಸೇರಿದಂತೆ ಯಾವುದನ್ನು ಲೆಕ್ಕಿಸದೇ ಪೊಲೀಸರು ಲಾಠಿ ಚಾರ್ಜ್ ನಡೆಸಿ ಅಮಾನೀಯತೆ ಮರೆದಿದ್ದರು. ಪೊಲೀಸರು ದೌರ್ಜನ್ಯ ನಡೆಸಿರುವ ಆರೋಪ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ ಅವರು ಅಮಾನತುಗೊಳಿಸಿ ಆದೇಶಿಸಿದ್ದಾರೆ. ದಾಳಿಯಲ್ಲಿ ಭಾಗವಹಿಸಿದ್ದ ಕೋಟಾ  ಠಾಣೆ ಸಿಬ್ಬಂದಿ ಜೈರಾಮ್, ವಿಕ್ರಮ್, ಮುಂಜುನಾಥ, ಅಶೋಕ್ ಶೆಟ್ಟಿ ಹಾಗೂ ಗಣೇಶ ಎಂಬುವವರನ್ನು ಬೇರೆಡೆಗೆ ವರ್ಗಾವಣೆ ಮಾಡಲಾಗಿದೆ ಎಂದು ಉಡುಪಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಎನ್‌. ವಿಷ್ಣುವರ್ಧನ್ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.

ಸೋಮವಾರ ರಾತ್ರಿ ಕೊರಗ ಸಮುದಾಯದ ರಾಜೇಶ್ ಎಂಬುವವರ ಮನೆಯಲ್ಲಿ ಮೆಹಂದಿ ಕಾರ್ಯಕ್ರಮ ನಡೆಯುತ್ತಿತ್ತು. ಮನೆಯಲ್ಲಿ ಡಿಜೆ ಬಳಕೆಯ ಬಗ್ಗೆ ಸ್ಥಳೀಯನೊಬ್ಬ ದೂರು‌ ನೀಡಿರುವ ಹಿನ್ನೆಲೆಯಲ್ಲಿ ಪ್ರಕರಣ ಸಂಬಂಧ ಕೋಟ ಆರಕ್ಷಕ ಠಾಣಾಧಿಕಾರಿ ಸಂತೋಷ್ ಬಿ.ಪಿ. ನೇತೃತ್ವದಲ್ಲಿ ದಾಳಿ ಮಾಡಿ ಅಲ್ಲಿದ್ದ ಕೊರಗ ಸಮುದಾಯದವರ ಮೇಲೆ ಲಾಠಿ ಚಾಜ್೯ ನಡೆಸಲಾಗಿತ್ತು. ಪೊಲೀಸರ ರಾಕ್ಷಸೀ ಕೃತ್ಯದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲೂ ಆಕ್ರೋಶ ವ್ಯಕ್ತವಾಗಿತ್ತು.

Exit mobile version