ಪುನೀತ್ ಪುಣ್ಯಾರಾಧನೆಗೆ ಕಣ್ಣೀರಧಾರೆ ಹರಿಸಿದ ಅಭಿಮಾನಿಗಳು

 ಬೆಂಗಳೂರು ನ 9 : ನಟ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್ ಪುಣ್ಯಾರಾಧನೆ ಅಂಗವಾಗಿ ಡಾ.ರಾಜ್ ಕುಟುಂಬಸ್ಥರು ನಗರದ ಅರಮನೆ ಮೈದಾನದಲ್ಲಿ 25 ಸಾವಿರಕ್ಕೂ ಅಧಿಕ ಅಭಿಮಾನಿಗಳಿಗೆ ಅನ್ನಸಂತರ್ಪಣೆ ಹಮ್ಮಿಕೊಂಡಿದ್ದುಈ ಹಿನ್ನಲೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಅರಮನೆ ಮೈದಾನಕ್ಕೆ ಆಗಮಿಸುತ್ತಿದ್ದಾರೆ.

ಈ ವೇಳೆ ಮಾತನಾಡಿದ ರಾಘವೇಂದ್ರ ರಾಜ್​ಕುಮಾರ್​, ಅಪ್ಪುಗೆ ಎಲ್ಲರನ್ನು ಕರೆಸಿ ಊಟ ಹಾಕಿಸಬೇಕೆಂಬ ಆಸೆ ಇತ್ತು. ಎಲ್ಲರ ಸಹಕಾರದಿಂದ ಇಂದು ಕಾರ್ಯಕ್ರಮ ಸಾಕಾರಗೊಂಡಿದೆ. ಎಲ್ಲರೂ ಊಟ ಮಾಡಿಕೊಂಡು ಜೋಪಾನವಾಗಿ ಮನೆಗೆ ಹೋಗಿ ಎಂದು ಮನವಿ ಮಾಡಿದರು.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಈಗಾಗಲೇ ಸಕಲ ವ್ಯವಸ್ಥೆ ಮಾಡಲಾಗಿದ್ದು, ಏಕಕಾಲಕ್ಕೆ 5 ಸಾವಿರ ಜನರು ಊಟ ಮಾಡಲು ಬೇಕಾಗುವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಸುಮಾರು 25 ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಒಂದುವೇಳೆ, ಈ ಸಂಖ್ಯೆ ಇನ್ನೂ ಹೆಚ್ಚಾದರೆ, ಅದಕ್ಕೂ ಬೇಕಾದ ತಯಾರಿಗಳನ್ನು ಮಾಡಿಕೊಳ್ಳಲಾಗಿದೆ. ವೆಜ್ & ನಾನ್ ವೆಜ್ ಶೈಲಿಯ ಊಟ ಇರಲಿದ್ದು, ಸುಮಾರು 1 ಸಾವಿರ ಬಾಣಸಿಗರು ಸೋಮವಾರದಿಂದಲೇ ಕೆಲಸ ಶುರು ಮಾಡಿದ್ದರು. ಅಡುಗೆಗೆ 1 ಸಾವಿರ ಕೆಜಿ ಸೋನಾ ಮಸೂರಿ ಅಕ್ಕಿ, 750 ಲೀಟರ್ ಎಣ್ಣೆ, ಕೆಜಿಗಟ್ಟಲೇ ಈರುಳ್ಳಿ, ಬೆಳ್ಳುಳ್ಳಿ, ಟೊಮ್ಯಾಟೊ, ಪುದೀನಾ, ಕೊತ್ತಂಬರಿ ಸೊಪ್ಪು ಕಟ್ಟು, ರಾಶಿ ರಾಶಿ ದಿನಸಿಗಳನ್ನು ರಾಜ್ ಕುಟುಂಬವು ಪೂರೈಸಿದೆ. 3 ಸಾವಿರ ಕೆ.ಜಿ. ಚಿಕನ್, 8,500 ಕೋಳಿ ಮೊಟ್ಟೆ ಬಳಸಿ ಅಡುಗೆ ಮಾಡಲಾಗಿದೆ.

ಸಸ್ಯಾಹಾರಿ ಅಡುಗೆಯಲ್ಲಿ ಆಲೂ ಕಬಾಬ್, ಬೇಬಿ ಕಾರ್ನ್, ಘೀ ರೈಸ್-ಕುರ್ಮ, ಅನ್ನ-ರಸಂ, ಅಕ್ಕಿ ಪಾಯಸ, ಮಸಾಲೆ ವಡೆ ಇದೆ. ಇನ್ನು ನಾನ್ ವೆಜ್ ಆಹಾರಪ್ರಿಯರಿಗೆ ಕೋಳಿ ಮೊಟ್ಟೆ, ಚಿಕನ್ ಕಬಾಬ್, ಚಿಕನ್ ಚಾಪ್ಸ್, ಘೀ ರೈಸ್, ಅನ್ನ-ರಸಂ ಇರಲಿದೆ. ಸೌದೆ ಒಲೆಯಲ್ಲಿ ಬಾಣಸಿಗರು ಅರಮನೆ ಮೈದಾನದಲ್ಲಿ ತಯಾರಿಸಿದ್ದಾರೆ. ಈಗಾಗಲೇ ಅಡುಗೆ ತಯಾರಾಗಿದ್ದು,11 ಗಂಟೆಯ ಬಳಿಕ ಅರಮನೆ ಮೈದಾನಕ್ಕೆ ಬರುವ ಅಭಿಮಾನಿಗಳು, ಗಣ್ಯರಿಗೆ ಊಟ ನೀಡುವ ವ್ಯವಸ್ಥೆ ಮಾಡಲಾಗುತ್ತಿದೆ. ದೊಡ್ಮನೆ ಕುಟುಂಬದವರು ಕೂಡ ಈಗಾಗಲೇ ಅರಮನೆ ಮೈದಾನಕ್ಕೆ ಆಗಮಿಸಿದ್ದಾರೆ.

ಅನ್ನಸಂತರ್ಪಣೆ ವೇಳೆ ಪುನೀತ್​ ಪತ್ನಿ ಅಶ್ವಿನಿ, ನಟ ಶಿವರಾಜ್​ಕುಮಾರ್ , ರಾಘವೇಂದ್ರ ರಾಜ್​ಕುಮಾರ್ ಸೇರಿದಂತೆ ಕುಟುಂಬದ ಸದಸ್ಯರು ಉಪಸ್ಥಿತರಿದ್ದು, ಶಿವಣ್ಣ ತಾವೇ ಸ್ವತಃ ಅಭಿಮಾನಿಗಳಿಗೆ ಊಟ ಬಡಿಸಿದ್ದಾರೆ.

Exit mobile version