Kalburgi: ರಾಜ್ಯ ಸರ್ಕಾರಕ್ಕೆ ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ್ (B R Patil) ಬರೆದ ಪತ್ರ ಸಂಚಲನ ಮೂಡಿಸಿದ್ದು, ಕೃಷ್ಣ ಭೈರೇಗೌಡ ವಿರುದ್ಧ ಅಸಮಾಧಾನ ಹೊರಹಾಕಿರುವ ಅವರು, ರಾಜೀನಾಮೆ ನೀಡೋದಕ್ಕೂ ಸಿದ್ಧ ಎಂದಿದ್ದಾರೆ. ಸದ್ಯ ಈ ವಿಚಾರ ರಾಜಕೀಯ ಕ್ಷೇತ್ರದಲ್ಲಿ ಭಾರೀ ಚರ್ಚೆಯಾಗುತ್ತಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಒಡೆದ ಮನೆಯಾಗಿದೆ ಎಂದು ವಿರೋಧ ವಿಪಕ್ಷ ನಾಯಕ ಆರ್.ಅಶೋಕ್ (R Ashok) ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ನ (Congress) ಹಿರಿಯ ನಾಯಕ, ಆಳಂದ ಕ್ಷೇತ್ರದ ಶಾಸಕ ಬಿ.ಆರ್.ಪಾಟೀಲ್, ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದು, ಸಚಿವ ಕೃಷ್ಣ ಭೈರೇಗೌಡ (Krishna Byre Gowda) ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಇದು ಕೈ ಪಡೆಯಲ್ಲಿ ಶಾಸಕರು ಸಚಿವರ ಜಟಾಪಟಿ ಇನ್ನೂ ಆರದ ಬೆಂಕಿಯಾಗಿದೆ ಅನ್ನೋದಕ್ಕೆ ಸಾಕ್ಷಿ ನೀಡುತ್ತಿದ್ದು, ಮತ್ತೊಂದೆಡೆ ವಿರೋಧ ಪಕ್ಷದ ನಾಯಕರು ಕೂಡು ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಕಳೆದ ಅಧಿವೇಶನದಲ್ಲಿ KRIDL ಕಾಮಗಾರಿಗಳ ವಿಚಾರವಾಗಿ, ಲಂಚ ಪಡೆದು ಕಾಮಗಾರಿ ಮಾಡಿಸಿದ್ದೇನೆ ಅಂತಾ ನನ್ನ ವಿರುದ್ಧ ಆರೋಪ ಬಂದಿದೆ. ಕೃಷ್ಣಭೈರೇಗೌಡರು ಸದನದಲ್ಲಿ ಅಂದು ಆಡಿದ್ದ ಮಾತು ನನ್ನ ಮೇಲೆ ಅನುಮಾನ ಬರುವಂತೆ ಮಾಡಿದೆ. ಹೀಗಾಗಿ ಈ ಬಗ್ಗೆ ತನಿಖೆ ನಡೆಸಿ, ನನ್ನನ್ನು ಆರೋಪ ಮುಕ್ತಗೊಳಿಸಿ, ಇಲ್ಲದೆ ಇದ್ದರೆ ಈ ಆರೋಪ ಹೊತ್ತು ಬೆಳಗಾವಿ ಅಧಿವೇಶನಕ್ಕೆ ಬರಲು ಆಗಲ್ಲ. ಒಂದು ವೇಳೆ ಬಂದ್ರೆ ಆರೋಪ ಒಪ್ಪಿಕೊಂಡಂತೆ ಆಗುತ್ತೆ ಎಂದು ಸಿಎಂಗೆ ಶಾಸಕ ಬಿ.ಆರ್.ಪಾಟೀಲ್ ಪತ್ರ ಬರೆದಿದ್ದಾರೆ.
ಅಷ್ಟೇ ಅಲ್ಲ ಆರೋಪ ಸಾಬೀತಾದ್ರೆ ರಾಜೀನಾಮೆ ಕೊಡೋದಾಗಿ ಹೇಳಿದ್ದಾರೆ. ಆದರೆ ಇದಕ್ಕೆ ಸ್ಪಷ್ಟನೆ ನೀಡಿರುವ ಕೃಷ್ಣಭೈರೇಗೌಡ ಈ ವಿಚಾರವಾಗಿ ಸಿಎಂ ಅಭಿಪ್ರಾಯ ತೆಗೆದುಕೊಳ್ತಾರೆ. ನನ್ನ ಮಾತನ್ನ ಅವರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಅಂತಾ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.
ಬಿ.ಆರ್.ಪಾಟೀಲ್ ಬರೆದ ಪತ್ರದ ಬಗ್ಗೆ ಸಿಎಂ ನಿರ್ಣಯ ಮಾಡುತ್ತಾರೆ. ಸದನದಲ್ಲಿ ಏನು ಹೇಳಿದ್ದೇನೆ ಎಂಬುವುದರ ಬಗ್ಗೆ ಮಾಹಿತಿ ನೀಡುತ್ತೇನೆ. ಶಾಸಕ ಬಿ.ಆರ್ ಪಾಟೀಲ್ ಹೇಳಿಕೆಗೆ ನಾನು ಯಾವುದೇ ಪ್ರತಿಕ್ರಿಯೆ ಕೊಡಲ್ಲ. ಈ ವಿಷಯವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ನನ್ನನ್ನು ಸಂಪರ್ಕಿಸಿಲ್ಲ. ಅಂತಿಮವಾಗಿ ಸಿಎಂ ಅವರೇ ಈ ಕುರಿತು ತೀರ್ಮಾನ ಮಾಡುತ್ತಾರೆ ಎಂದರು.
ರಾಜ್ಯದಲ್ಲಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಶಾಸಕರೇ ದಂಗೆ ಎದ್ದಿದ್ದಾರೆ. ನಾವು ಇದನ್ನು ಮೊದಲಿನಿಂದಲೂ ಹೇಳುತ್ತಲೇ ಬಂದಿದ್ದೇವೆ. ಆಳಂದ ಶಾಸಕ ಬಿ.ಆರ್.ಪಾಟೀಲ್ ಎರಡನೇ ಬಾರಿ ಪತ್ರ ಬರೆದಿದ್ದಾರೆ. ಬಿ.ಆರ್.ಪಾಟೀಲ್ರಂಥ ಧೈರ್ಯವಂತರು ಮಾತ್ರ ಮಾತನಾಡಿದ್ದಾರೆ. ಉಳಿದ ಶಾಸಕರು ಹೆದರಿ ಕುಳಿತಿದ್ದಾರೆ, ಮಂತ್ರಿಗಳು ಹೆದರಿಸುತ್ತಿದ್ದಾರೆ. ಮಂತ್ರಿಗಳು ಮಾತ್ರವಲ್ಲ, ಅವರ ಪಿಎಗಳು ಕೂಡ ದಂಧೆ ಮಾಡ್ತಿದ್ದಾರೆ ಎಂದು ಆರ್, ಅಶೋಕ್ ಆರೋಪಿಸಿದ್ದಾರೆ.
ಬಿಆರ್ ಪಾಟೀಲ್ ಅವರಿಗೆ ಬಂದು ಕಾಣುವಂತೆ ಹೇಳಿದ್ದೇನೆ: ಸಿದ್ದರಾಮಯ್ಯ
ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸಿದ್ದರಾಮಯ್ಯ ಅವರು ನಿನ್ನೆ ಪಾಟೀಲ್ ಜೊತೆ ಮಾತಾಡಲು ಪ್ರಯತ್ನಿದರೂ ಅವರು ಸಿಕ್ಕಿರಲಿಲ್ಲ. ಆದರೆ ಇಂದು ಬೆಳಗ್ಗೆ ಮಾತುಕತೆ ಸಾಧ್ಯವಾಯಿತು. ಅವರು ತನ್ನ ಸಮಸ್ಯೆ ಹೇಳಿಕೊಂಡ ಬಳಿಕ ಬೆಂಗಳೂರಿಗೆ ಬಂದು ಮಾತಾಡಲು ತಿಳಿಸಿರುವುದಾಗಿ ಹೇಳಿದರು.
ಭವ್ಯಶ್ರೀ ಆರ್.ಜೆ