ರಾಜ್ಯಸಭೆಗೆ ಕರ್ನಾಟಕದಿಂದ ಕನ್ನಡಿಗರು ಆಯ್ಕೆಯಾಗಬೇಕಲ್ಲವೇ?

Rajyasabha

ರಾಜ್ಯ ವಿಧಾನಸಭೆಯಿಂದ(Rajyasabha Vidhansabha) ರಾಜ್ಯಸಭೆಯ 4 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ‘ಚಿಂತಕರ ಚಾವಡಿ’ ಎನಿಸಿಕೊಂಡಿರುವ ರಾಜ್ಯಸಭೆಯಲ್ಲಿ ಕನ್ನಡಿಗರಿಗೆ(Kannadigas) ಸಿಗಬೇಕಾದ ಪ್ರಾತಿನಿಧ್ಯ, ರಾಜಕೀಯ ಕಾರಣಗಳಿಂದ ಬೇರೆ ರಾಜ್ಯಗಳ ಪ್ರಭಾವಿ ರಾಜಕಾರಣಿಗಳ ಪಾಲಾಗುತ್ತಿರುವುದು ದುರಂತ.

ಸದ್ಯ ನಡೆಯುತ್ತಿರುವ ರಾಜ್ಯಸಭಾ ಚುನಾವಣೆಯ ನಾಲ್ಕು ಸ್ಥಾನಗಳ ಪೈಕಿ ಎರಡು ಸ್ಥಾನಗಳು ಬೇರೆ ರಾಜ್ಯಗಳ ವ್ಯಕ್ತಿಗಳ ಪಾಲಾಗಲಿವೆ. ಪ್ರಾದೇಶಿಕವಾರು ಕನ್ನಡಿಗರಿಗೆ ಸಿಗಬೇಕಾದ ಪ್ರಾತಿನಿಧ್ಯ ಬೇರೆಯವರ ಪಾಲಾಗುತ್ತಿದೆ. ಬಿಜೆಪಿಯ(BJP)ನಿರ್ಮಲಾ ಸೀತಾರಾಮನ್(Nirmala Sitharaman), ಕಾಂಗ್ರೆಸ್‍ನ(Congress) ಜೈರಾಮ್ ರಮೇಶ್ ಅವರನ್ನು ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆಯಾಗಲು ಅಭ್ಯರ್ಥಿಯನ್ನಾಗಿ ಮಾಡಲಾಗಿದೆ. ಈ ಇಬ್ಬರು ನಾಯಕರು ಕನ್ನಡಿಗರಲ್ಲ. ಅಚ್ಚರಿ ಎಂದರೆ ಇಬ್ಬರೂ ಎರಡನೇಯ ಬಾರಿಗೆ ಮರು ಆಯ್ಕೆಯಾಗಲು ಬಯಸಿದ್ದಾರೆ.

ಅಂದರೆ 12 ವರ್ಷಗಳ ಕಾಲ ಕರ್ನಾಟಕದಲ್ಲದವರು ಕರ್ನಾಟಕವನ್ನು ರಾಜ್ಯಸಭೆಯಲ್ಲಿ ಪ್ರತಿನಿಧಿಸುತ್ತಿದ್ದಾರೆ. ಕನ್ನಡ ಭಾಷೆ, ಸಂಸ್ಕೃತಿ, ಕಲೆ, ಸಾಹಿತ್ಯ, ಇಲ್ಲಿಯ ಮೂಲಭೂತ ಸಮಸ್ಯೆಗಳ ಯಾವುದರ ಅರಿವಿಲ್ಲದವರು ನಮ್ಮ ಪ್ರತಿನಿಧಿಗಳಾಗಿ ಆಯ್ಕೆಯಾಗಿ ಏನು ಮಾಡಲು ಸಾಧ್ಯ..? ಇನ್ನು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಹೈಕಮಾಂಡ್ ಸಂಸ್ಕೃತಿಗೆ ತಲೆಬಾಗಿ ಈ ರೀತಿ ಅನ್ಯ ರಾಜ್ಯದವರನ್ನು ಅಭ್ಯರ್ಥಿಗಳನ್ನಾಗಿ ಮಾಡುತ್ತಿವೆ. ಇದಕ್ಕೆ ಕಡಿವಾಣ ಹಾಕಬೇಕಿದೆ.

ಕನ್ನಡಿಗರೇ ಕರ್ನಾಟಕವನ್ನು ರಾಜ್ಯಸಭೆಯಲ್ಲಿ ಪ್ರತಿನಿಧಿಸಬೇಕು. ಆಗ ಮಾತ್ರ ನಮ್ಮ ಧ್ವನಿ ರಾಷ್ಟ್ರಮಟ್ಟದಲ್ಲಿ ಪ್ರಬಲವಾಗಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಕನ್ನಡಿಗರು ರಾಷ್ಟ್ರ ರಾಜಕೀಯದಲ್ಲಿ ಕೇವಲ ನೆಪವಾಗಿ ಉಳಿಯುತ್ತಾರೆ. ಒಕ್ಕೂಟ ರಾಜಕೀಯದಲ್ಲಿ ಕರ್ನಾಟಕ ತನ್ನ ಪ್ರಾಬಲ್ಯ ಕಳೆದುಕೊಳ್ಳುತ್ತದೆ. ಹೀಗಾಗಿ ಮೂರು ಪಕ್ಷಗಳು ಉತ್ತಮ ಜ್ಞಾನ, ಪಾಂಡಿತ್ಯ, ನೈಪುಣ್ಯತೆ ಮತ್ತು ವಾಕ್‍ಚಾತುರ್ಯ ಹೊಂದಿರುವರನ್ನು ರಾಜ್ಯಸಭೆಗೆ ಕಳುಹಿಸಬೇಕು.

Exit mobile version