ಅಪ್ಪುವಿನ ನೆನೆದು ಕಂಬನಿ ಮಿಡಿದ ರಕ್ಷಾ ರಾಮಯ್ಯ

ಬೆಂಗಳೂರು ಅ 30 : ಶಾಲಾ ದಿನಗಳ ಸಹಪಾಠಿ, ಒಡನಾಡಿಯಾಗಿದ್ದ ನಾಡಿನ ಹಿರಿಯ ನಟ ಪುನೀತ್ ರಾಜ್‌ಕುಮಾರ್ ಅವರ ನಿಧನಕ್ಕೆ ಯುವ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್. ರಕ್ಷಾ ರಾಮಯ್ಯ ಕಂಬನಿ ಮಿಡಿದಿದ್ದಾರೆ.

ಪುನೀತ್ ರಾಜ್‌ಕುಮಾರ್ ಅವರೊಂದಿಗೆ ಬಾಲ್ಯದಲ್ಲಿ ಕಳೆದ ಅಮೂಲ್ಯ ದಿನಗಳನ್ನು ಸ್ಮರಿಸಿಕೊಂಡಿರುವ ರಕ್ಷಾ ರಾಮಯ್ಯ, ಅವರೊಂದಿಗೆ ಆಟ, ಒಡನಾಟ ಸ್ಮರಣೀಯವಾದದ್ದು. ಸದಾಶಿವನಗರದ ಪೂರ್ಣ ಪ್ರಜ್ಞ ಶಾಲೆಯಲ್ಲಿ ಪುನೀತ್ ರಾಜ್‌ಕುಮಾರ್ ಅವರೊಂದಿಗೆ ಕಳೆದ ದಿನಗಳನ್ನು ಸದಾ ಸ್ಮರಿಸಿಕೊಳ್ಳುತ್ತೇನೆ. ಆಟ, ಪಾಠ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪುನೀತ್ ರಾಜ್‌ಕುಮಾರ್ ಸದಾ ಪಾಲ್ಗೊಳ್ಳುತ್ತಿದ್ದರು. ಸಹಜವಾಗಿ ಎಲ್ಲರೊಂದಿಗೆ ಬೆರೆಯುತ್ತಿದ್ದ ಅವರು ನಮ್ಮೆಲ್ಲರ ಪ್ರೀತಿಯ ಅಪ್ಪು ಆಗಿದ್ದರು ಎಂದು ಹೇಳಿದ್ದಾರೆ.

ಶಾಲಾ ದಿನಗಳ ನಂತರವೂ ಸಹ ನಮ್ಮ ಬಾಂಧವ್ಯ ಹಾಗೆಯೇ ಮುಂದುವರೆದಿತ್ತು. ಡಾ. ರಾಜ್ ಕುಮಾರ್ ಕುಟುಂಬದೊಂದಿಗೆ ನಮ್ಮ ಕುಟುಂಬ ನಿಕಟ ಬಾಂಧವ್ಯ ಹೊಂದಿದೆ. ನಮ್ಮ ಭೇಟಿ ಸಂದರ್ಭದಲ್ಲಿ ಶಾಲಾ ದಿನಗಳನ್ನು ಸ್ಮರಿಸಿಕೊಂಡು ತಾವು ಹಾಗೂ ಪುನೀತ್ ರಾಜ್‌ಕುಮಾರ್ ಸಂತಸಪಡುತ್ತಿದ್ದೆವು. ಯುವ ಜನರ ಮೇಲೆ ಪುನೀತ್ ರಾಜ್‌ಕುಮಾರ್ ಅಪಾರ ಪರಿಣಾಮ ಬೀರಿದ್ದರು. ಬಾಲ ನಟರಾಗಿ, ಗಾಯಕರಾಗಿ, ನಾಯಕ ನಟರಾಗಿ ಯುವ ಜನಾಂಗಕ್ಕೆ ಪ್ರೇರಕ ಶಕ್ತಿಯಾಗಿದ್ದರು. ಅವರು ಇನ್ನಷ್ಟು ಕಾಲ ಕನ್ನಡ ಚಿತ್ರರಂಗದಲ್ಲಿ ಮಿನುಗಬೇಕಿತ್ತು. ಮತ್ತಷ್ಟು ವೈವಿದ್ಯಮಯ ಪಾತ್ರಗಳಲ್ಲಿ ನಾವು ಅಪ್ಪು ಅವರನ್ನು ಕಾಣಬೇಕಾಗಿತ್ತು. ಅವರ ಹಠಾತ್ ಅಗಲಿಕೆ ತಮಗೆ ತೀವ್ರ ನೋವು ಮತ್ತು ಸಂಕಟ ಉಂಟು ಮಾಡಿದೆ ಎಂದು ರಕ್ಷಾ ರಾಮಯ್ಯ ನೊಂದು ನುಡಿದಿದ್ದಾರೆ.

Exit mobile version