ಇತ್ತೀಚಿನ ಘಟನೆಯನ್ನು ನೆನೆದು ಸುದೀರ್ಘವಾಗಿ ಬರೆದು ಪೋಸ್ಟ್‌ ಮಾಡಿದ ಮೋಹಕ ತಾರೆ ರಮ್ಯ ; ರಮ್ಯ ಬರಹ ಹೀಗಿದೆ

Bengaluru: ಕನ್ನಡ ಚಿತ್ರರಂಗದ ಚಾಲೆಂಜಿಂಗ್‌ ಸ್ಟಾರ್‌ ನಟ ದರ್ಶನ್‌ (Ramya supported Darshan) ಅವರಿಗೆ ಚಪ್ಪಲಿ ಎಸೆದ ಕಿಡಿಗೇಡಿಗಳ ಕೃತ್ಯಕ್ಕೆ ರಾಜ್ಯದೆಲ್ಲೆಡೆ ವ್ಯಾಪಕ ವಿರೋಧ ವ್ಯಕ್ತವಾದ ಬೆನ್ನಲ್ಲೇ ನಟಿ ರಮ್ಯ ದರ್ಶನ್‌ ಅವರ ಪರ ನಿಂತು ಬೆಂಬಲ ಸೂಚಿಸಿದ್ದರು.

ನಟಿ ರಮ್ಯ/ದಿವ್ಯಾ ಸ್ಪಂದನಾ (Divya Spandana), ನಟ ದರ್ಶನ್‌ ಅವರಿಗೆ ಎದುರಾದ ಪರಿಸ್ಥಿತಿಯನ್ನು ಖಂಡಿಸಿ, ಟ್ವೀಟ್‌ ಮಾಡುವ ಮೂಲಕ ದರ್ಶನ್‌ ಅವರಿಗೆ ಬೆಂಬಲಿಸಿದ್ದರು.

ಈ ಘಟನೆ ಬಳಿಕ ದರ್ಶನ್‌ ಹಾಗೂ ಅಪ್ಪು ಅಭಿಮಾನಿಗಳ ನಡುವೆ ನಡೆದ ಸಾಮಾಜಿಕ ಜಾಲತಾಣದ (Ramya supported Darshan) ಸಂಘರ್ಷವನ್ನು ಕಂಡು ರಮ್ಯ ತೀವ್ರ ಬೇಸರ ವ್ಯಕ್ತಪಡಿಸಿದರು.

ಇಬ್ಬರ ಅಭಿಮಾನಿಗಳು ಟ್ವೀಟರ್‌ನಲ್ಲಿ (Twitter) ಅವಾಚ್ಯ, ಅಶ್ಲೀಲ ಪದಗಳನ್ನು ಬಳಸಿದ್ದನ್ನು ಫೋಟೋ ತೆಗೆದು ಅದನ್ನು ಟ್ವೀಟರ್‌ ಸಂಸ್ಥೆಗೆ ಟ್ಯಾಗ್‌ ಮಾಡಿ, ಇಂಥ ಪದಬಳಕೆ ಮಾಡುವವರ ಖಾತೆಯನ್ನು ಬ್ಲಾಕ್‌ ಮಾಡಿ ಜೊತೆಗೆ ಸೂಕ್ತ ಕ್ರಮ ಕೈಗೊಳ್ಳಿ ಎಂದು ಟ್ವೀಟರ್‌ಗೆ ತಿಳಿಸಿದ್ದಾರೆ.

ಸದ್ಯ ಈ ಎಲ್ಲಾ ಸಂಗತಿಗಳನ್ನು ಕೇಂದ್ರಿಕರಿಸಿ ಸುದೀರ್ಘವಾಗಿ ಬರೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ. ರಮ್ಯ ಅವರ ಬರಹ ಹೀಗಿದೆ,

“ಚಿತ್ರರಂಗದಲ್ಲಿ ಇವತ್ತು ತಲುಪಿರುವ ಹಂತಕ್ಕೆ ಬರಲು ಪ್ರತಿಯೊಬ್ಬರು ತಮ್ಮದೇ ಆದ ಸವಾಲುಗಳನ್ನು ಎದುರಿಸಿಕೊಂಡು ಬಂದಿರುತ್ತಾರೆ.

http://ಇದನ್ನೂ ನೋಡಿ:https://fb.watch/hxlS7UCah0/

ಕೇವಲ ನಾಯಕ ನಟರು ಮತ್ತು ನಾಯಕ ನಟಿಯರಷೇ ಅಲ್ಲ, ಸಂಗೀತ ನಿರ್ದೇಶಕರು(Music Director), ಗಾಯಕರು, ನೃತ್ಯ ನಿರ್ದೇಶಕರು, ಬರಹಗಾರರು,

ಸಾಹಸ ಮಾಸ್ಟರ್‌ಗಳು ಮುಂತಾದ ಪ್ರತಿಯೊಬ್ಬ ತಂತ್ರಜ್ಞರೂ ಅನೇಕ ಕಷ್ಟಕರವಾದ ಪರಿಸ್ಥಿತಿಗಳನ್ನು ಎದುರಿಸಿ ಉನ್ನತ ಸ್ಥಾನಕ್ಕೆ ಬಂದಿರುತ್ತಾರೆ.

ಕೆಲವರ ಕಷ್ಟಗಳು ಸಾರ್ವಜನಿಕವಾಗಿ ನಮಗೆ ತಿಳಿದಿರುತ್ತೆ, ಮತ್ತಷ್ಟು ತಿಳಿದಿರುವುದಿಲ್ಲ. ಕೆಲವರು ಉನ್ನತ ಸ್ಥಾನಕ್ಕೆ ಏರಿದ್ದರೆ, ಅನೇಕರಿಗೆ ದೊಡ್ಡ ಯಶಸ್ಸು ಗಳಿಸಲು ಸಾಧ್ಯವಾಗಿಲ್ಲದೆ ಇರಬಹುದು.

ಚಿತ್ರರಂಗದಲ್ಲಿ ತಮ್ಮ ಆಸೆಯ ಗೋಪುರ ಕಟ್ಟಿಕೊಂಡು ಬರುವವರ ಹಿನ್ನೆಲೆಗಳು ಬೇರೆಯೇ ಇರಬಹುದು. ಹಲವರಿಗೆ ಎರಡು ಹೊತ್ತು ಊಟ ಗಿಟ್ಟಿಸಿಕೊಳ್ಳುವುದು ಕಷ್ಟವಾಗಿದ್ದರೇ,

ಹಲವರಿಗೆ ಮೈ ತುಂಬಾ ಸಾಲ ಮಾಡಿಕೊಂಡು ಸಾಧನೆ ಮಾಡಬೇಕು ಅಂತ ಬಂದಿರಬಹುದು, ಹಲವರು ಇದ್ದುದ್ದೆಲ್ಲವನ್ನು ಬಿಟ್ಟು ಚಿತ್ರರಂಗದಲ್ಲಿ ಸಾಧಿಸಬೇಕೆಂದು ಬಿಟ್ಟು ಬಂದದ್ದು ಉಂಟು.

ಯಶಸ್ಸು ಬಹಳ ಕಡಿಮೆ ಜನರ ಪಾಲಾಗಿದೆ ಅಷ್ಟೇ ಆದರೆ ಶ್ರಮ ಪಟ್ಟವರ ಸಂಖ್ಯೆ ಎಣಿಸಲಸಾಧ್ಯ. ಎಲ್ಲಕ್ಕಿಂತ ಮುಖ್ಯ ಮನುಷ್ಯ ತನ್ನ ಬೇರುಗಳಿಗೆ ಗಟ್ಟಿಯಾಗಿ ಅಂಟಿಕೊಂಡಿರುವುದು,

ಮತ್ತು ತಾವು ತಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡಿ ಮೇಲೆ ಬಂದ ಬಳಿಕ ತಮ್ಮಂತೆ ಕಷ್ಟ ಪಟ್ಟು ಶ್ರದ್ಧೆಯಿಂದ ಕೆಲಸ ಮಾಡಲು ಹಂಬಲ ಇರುವ ಪ್ರತಿಭೆಗಳನ್ನು ಹುಡುಕಿ ಸಹಾಯ ಮಾಡುವುದು ಉತ್ತಮ ನಡವಳಿಕೆ.

ನಾನು ಯಾವತ್ತಿಗೂ ನಂಬರ್ ೧ ಮತ್ತು ಈ ಸ್ಥಾನ ನನಗೆ ಮಾತ್ರ ದಕ್ಕಬೇಕು ಅನ್ನುವ ಅಹಂ ಬಿಟ್ಟು ನಮ್ಮಲ್ಲಿ ಯಾರೇ ಮೇಲೆ ಬಂದರೂ ಅದನ್ನು ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು.

ಯಶಸ್ಸು, ಅಧಿಕಾರ, ಹಣ ಯಾವುದು ಶಾಶ್ವತವಲ್ಲ ಅನ್ನುವ ಸಾಮಾನ್ಯ ಅರಿವು ಎಲ್ಲರಿಗೂ ಇರಬೇಕು.

ಇಂದು ಅಭಿಮಾನಿ ಸಂಘಗಳು, ಅಭಿಮಾನಿ ಬಳಗಗಳು ತೋರುತ್ತಿರುವ ನಡವಳಿಕೆ ಬಹಳ ಚಿಂತಾಜನಕವಾಗಿದೆ .ತಮ್ಮ ಗುಂಪಿನಲ್ಲಿ ಅಥವಾ ಬಣದಲ್ಲಿ ಕಾಣಿಸಿಕೊಳ್ಳದ ಎಲ್ಲರನ್ನು ಬಹಳ ಅವಾಚ್ಯ ಶಬ್ದಗಳಿಂದ ನಿಂದಿಸುವುದು,

ತಾಯಿ, ಹೆಂಡತಿ, ಮಗಳು ಅನ್ನುವ ಎಲ್ಲ ಪವಿತ್ರ ಸಂಬಂಧಗಳಿಗೆ ಮಸಿ ಬಳಿಯುವಂತ ಬಹಳ ಕೆಟ್ಟ ಮಾತುಗಳು ಆಡುವುದನ್ನು ಕಂಡಲ್ಲಿ ನೋವಾಗುತ್ತದೆ.

http://ಇದನ್ನೂ ಓದಿ:https://vijayatimes.com/cbi-raid-on-dkc-2/

ನಮ್ಮ ಪ್ರಜ್ಞಾವಂತ ಸಮಾಜ ಯಾವ ಮಟ್ಟಕ್ಕೆ ಇಳಿಯುತ್ತಿದೆ ಅನ್ನುವುದು ನೋಡಿ ಬೇಜಾರಾಗ್ತಿದೆ. ಮುಂಚಿನಿಂದಲೂ ಅಭಿಮಾನಿ ಸಂಘಗಳು ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುವುದು ನಾವು ಕಂಡಿದ್ದೇವೆ, ಕೇಳಿದ್ದೇವೆ.

ರಕ್ತದಾನ ಶಿಬಿರ, ಅನ್ನದಾನ, ವೃದ್ಧಾಶ್ರಮ, ಅನಾಥಾಶ್ರಮದಲ್ಲಿ ಸೇವೆ ಮಾಡುವುದು, ಗಿಡ ನೆಡುವುದು, ಪ್ರಕೃತಿ ಕಾಪಾಡುವುದು, ಬಡವರಿಗೆ ಆಹಾರ ಮತ್ತು,

ಔಷಧಿ ಹಂಚುವುದು ಮುಂತಾದ ಅನೇಕ ಕಾರ್ಯಗಳನ್ನು ಮಾಡಿಕೊಂಡು ಬಂದಿರುವುದು ಅಭಿಮಾನಿ ಸಂಘಗಳಿಗೆ (Fan clubs) ಇರುವ ಹೆಗ್ಗಳಿಕೆ.

ಆದರೆ ಅಭಿಮಾನಿಗಳು ಅನ್ನುವ ಹೆಸರಿನಲ್ಲಿ ಈಗ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ನಿಜ ರೂಪವನ್ನು, ಹೆಸರನ್ನು ಹಾಕಿಕೊಳ್ಳದೆ ಅನಾಮಧೇಯವಾಗಿ ತಮಗೆ ಆಗದವರ ಬಗ್ಗೆ ಅತ್ಯಂತ ಕೆಟ್ಟ ರೀತಿಯಲ್ಲಿ ಮಾತಾಡುವುದು ವಿಷಾದನೀಯ.


ಇಂತಹ ವರ್ತನೆಯನ್ನು ನಮ್ಮ ನಟರು ಖಂಡಿಸಿ ತಮ್ಮ ಅಭಿಮಾನಿಗಳಿಗೆ ತಿಳವಳಿಕೆ ಹೇಳಿ ಅವರನ್ನು ಸುಸಂಕೃತರಾಗಿ ಮಾಡುವ ಜವಾಬ್ದಾರಿ ಹೊರಬೇಕಿದೆ.

ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಅಭಿಮಾನಿಗಳು ಮಾಡುವ ಸಮಾಜ ವಿರೋಧಿ ಚಟವಟಿಕೆಗಳಿಗೆ ಬೆಂಬಲ ಕೊಡಬಾರದು.
ಕನ್ನಡ ಚಿತ್ರರಂಗ ಇವತ್ತು ದೇಶ ವಿದೇಶಗಳಲ್ಲಿ ದೊಡ್ಡ ಖ್ಯಾತಿಪಡೆದಿದೆ.

ಐಎಮ್‌ಡಿಬಿ (IMDB) ಉನ್ನತ ೧೦ ಚಿತ್ರಗಳ ಪಟ್ಟಿಯಲ್ಲಿ ೩ ಕನ್ನಡ ಚಿತ್ರಗಳಿವೆ (Kannada Movie) ಅಂತ ಹೇಳಲು ನಮಗೆಲ್ಲ ಬಹಳ ಹೆಮ್ಮೆ ಆಗಬೇಕಿದೆ.

ಕನ್ನಡ ಚಿತ್ರಗಳು ಈ ವರ್ಷ ಕಂಡ ಯಶಸ್ಸು ಬೇರಾವುದೇ ಭಾಷೆಯ ಚಿತ್ರಗಳಿಗೂ ಲಭ್ಯವಾಗಿಲ್ಲ. ಇದಕ್ಕಿಂತ ಹೆಮ್ಮೆಯ ವಿಚಾರ ಮತ್ತು ಸ್ಫೂರ್ತಿ ಬೇಕಿದೆಯೇ? ಕಲಾದೇವಿಯ ಸೇವೆ ಮಾಡಿಕೊಂಡು ಸಮಾಜಕ್ಕೂ, ನಮ್ಮ ಚಿತ್ರರಂಗಕ್ಕೂ ಒಳ್ಳೆಯ ಹೆಸರು ತರುವುದು ನಮ್ಮೆಲ್ಲರ ಗುರಿ ಆಗಿರಬೇಕು.

ಇದು ನಮ್ಮೆಲ್ಲರ ಜವಾಬ್ದಾರಿಯೂ ಹೌದು. ಸಮಾಜದಲ್ಲಿ ಶಾಂತಿ ಮತ್ತು ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ನಮ್ಮ ಅಭಿಮಾನಿಗಳು ಮತ್ತು ಬೆಂಬಲಿಗರನ್ನು ಉತ್ತೇಜಿಸೋಣ.

ಪ್ರೀತಿ ಮತ್ತು ವಿಶ್ವಾಸ ತುಂಬಿದ ಉತ್ತಮ ಸಮಾಜ ನಿರ್ಮಿಸೋಣ. ದ್ವೇಷ ಮತ್ತು ಅಸೂಯೆಗಳನ್ನು ದಮನೆ ಮಾಡೋಣ. ಎಲ್ಲರಿಗು ಒಳಿತಾಗಲಿ ಎಂದು ಬರೆದು ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.
Exit mobile version