Mysore: ಲೋಕಸಭಾ ಚುನಾವಣೆ (Loksabha Election) ಹೊತ್ತಲ್ಲೇ ಅಕ್ರಮ ಮಧ್ಯ ಹಾಗೂ ಹಣದ ವಹಿವಾಟಿನ ಮೇಲೆ ಹದ್ದಿನ ಕಣ್ಣಿಟ್ಟಿರುವ ಅಬಕಾರಿ ಇಲಾಖೆ ಇದೀಗ ಭರ್ಜರಿ ಕಾರ್ಯಾಚರಣೆ ನಡೆಸುವ ಮೂಲಕ, ಅಕ್ರಮವಾಗಿ ಸಂಗ್ರಹ ಮಾಡಿದ್ದ ಸುಮಾರು98 ಕೋಟಿ ರೂಪಾಯಿ ಮೊತ್ತದ ಬಿಯರ್ ಅನ್ನು ಜಪ್ತಿ ಮಾಡಿದೆ.
ಮೈಸೂರಿನಲ್ಲಿರುವ ತಾಂಡ್ಯ ಕೈಗಾರಿಕಾ ಪ್ರದೇಶದಲ್ಲಿರುವ ಯುನೈಟೆಡ್ ಬ್ರಿವರೀಸ್ ಲಿಮಿಟೆಡ್ (United Braveries Limited) ಘಟಕದ ಮೇಲೆ ಅಬಕಾರಿ ಇಲಾಖೆಯ ಜಂಟಿ ಆಯುಕ್ತರ ನೇತೃತ್ವದಲ್ಲಿ ಈ ದಾಳಿ ನಡೆಸಲಾಗಿದ್ದು, ಬಿಯರ್ ದಾಸ್ತಾನು ಜಪ್ತಿ ಮಾಡಿದ್ದಾರೆ. ಈ ಸಂಬಂಧ 17 ಮಂದಿ ವಿರುದ್ಧ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲಾಗಿದೆ.
ಯುನೈಟೆಡ್ ಬ್ರಿವರೀಸ್ ಲಿಮಿಟೆಡ್ ಸೇರಿರುವ ತಾಂಡ್ಯ ಕೈಗಾರಿಕಾ ಪ್ರದೇಶದಲ್ಲಿರುವ ದಾಸ್ತಾನು ಘಟಕದಲ್ಲಿ ಸರ್ಕಾರಕ್ಕೆ ತೋರಿಸಿರುವ ಲೆಕ್ಕಕ್ಕಿಂತ ಹೆಚ್ಚಿನ ಬಿಯರ್ ದಾಸ್ತಾನು ಸಂಗ್ರಹ ಪತ್ತೆಯಾಗಿದೆ. 7000 ಸಾವಿರಕ್ಕೂ ಹೆಚ್ಚಿನ ವಿವಿಧ ಬ್ರಾಂಡಿನ ಪೆಟ್ಟಿಗೆಗಲ್ಲಿ ಬಿಯರ್ ಬಾಟಲಿಗಳು (Beer Bottle) ಪತ್ತೆಯಾಗಿದ್ದು, ಯುಟಿ ಟ್ಯಾಂಕ್, ಸೈಲೋಸ್ ಟ್ಯಾಂಕ್ಗಳಲ್ಲಿರುವ ಕಚ್ಚಾ ವಸ್ತು ಸಮೇತ ಎಲ್ಲವನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಅನಾಮಧೇಯ ಕರೆಯಿಂದ ಸಿಕ್ಕಿತು ಮಾಹಿತಿ : ಮೈಸೂರು (Mysore) ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಗೆ ಬಂದಿರುವ ಅನಾಮಧೇಯ ಕರೆಯ ಮೇರೆಗೆ ಅಬಕಾರಿ ಜಂಟಿ ಆಯುಕ್ತರು ಘಟಕದ ಮೇಲೆ ದಾಳಿ ನಡೆಸಿದಾಗ ದಾಸ್ತಾನಿಗಿಂತ ಹೆಚ್ಚಿನ ಬಿಯರ್ ದಾಸ್ತಾನು ಇರುವುದು ಕಂಡುಬಂದಿದೆ. ಈ ಹಿನ್ನೆಲೆ ಅವುಗಳನ್ನು ಜಪ್ತಿ ಮಾಡಿ ಪ್ರಕರಣ ದಾಖಲಿಸಲಾಗಿದೆ ಎಂದು ಮೈಸೂರು ಜಿಲ್ಲಾ ಚುನಾವಣಾಧಿಕಾರಿ ಮಾಹಿತಿ ನೀಡಿದ್ದಾರೆ.