ಸೋಲುವ ಭೀತಿ, ಸುರಕ್ಷಿತ ಕ್ಷೇತ್ರ ಹುಡುಕಾಟಕ್ಕಿಳಿದ ಸಿದ್ದು!

siddaramaiah

ಪಂಚರಾಜ್ಯ(Five States) ಚುನಾವಣೆಯ(Election) ಫಲಿತಾಂಶದ(Result) ನಂತರ ರಾಜ್ಯ ಕಾಂಗ್ರೆಸ್‍ನಲ್ಲೂ(Congress) ಭಾರೀ ಬದಲಾವಣೆಗಳಾಗುತ್ತಿವೆ. ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ (Karnataka Vidhandabha Election)ರೂಪಿಸಬೇಕಾದ ತಂತ್ರಗಾರಿಕೆ ಕುರಿತು ಮೂರು ಪಕ್ಷಗಳು ಭಾರೀ ರಣತಂತ್ರ ಹೆಣೆಯುತ್ತಿವೆ. ಪಂಚರಾಜ್ಯಗಳ ಪೈಕಿ ನಾಲ್ಕು ರಾಜ್ಯಗಳಲ್ಲಿ ಮತ್ತೇ ಅಧಿಕಾರದ ಚುಕ್ಕಾಣಿ ಹಿಡಿದ ಬಿಜೆಪಿ ನಾಯಕರಿಗೆ ಉತ್ಸಾಹ ಇಮ್ಮಡಿಯಾಗಿದ್ದರೆ, ಇತ್ತ ಕಾಂಗ್ರೆಸ್ ನಾಯಕರಿಗೆ ಚುನಾವಣೆಯಲ್ಲಿ ಬಿಜೆಪಿಯ ‘ಹಿಂದೂತ್ವ’ ಮತಬ್ಯಾಂಕ್ ಅನ್ನು ಛಿದ್ರಗೊಳಿಸಿ, ಅಧಿಕಾರ ಹಿಡಿಯುವುದು ಹೇಗೆ ಎಂಬ ಚಿಂತೆ ಶುರುವಾಗಿದೆ.

ಕಾಂಗ್ರೆಸ್ ಪಕ್ಷದಲ್ಲಿನ ಆಂತರಿಕ ಕಚ್ಚಾಟ ಕೂಡಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಹೀಗಾಗಿ ಮುಂಬರುವ ವಿಧಾನಸಭಾ ಚುನಾವಣೆ ವೇಳೆಗೆ ಪಕ್ಷವನ್ನು ಸರಿ ದಾರಿಗೆ ತರಲು ಅಧ್ಯಕ್ಷ ಡಿ.ಕೆ.ಶಿವಕುಮಾರ್ ತೆರೆಮರೆಯಲ್ಲಿ ಭಾರೀ ಪ್ರಯತ್ನಗಳನ್ನೇ ನಡೆಸುತ್ತಿದ್ದಾರೆ.
ಇನ್ನೊಂದೆಡೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸುರಕ್ಷಿತ ಕ್ಷೇತ್ರಕ್ಕಾಗಿ ಈಗಲೇ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿಯವರು ಹೇಗಾದರು ಮಾಡಿ, ಸಿದ್ದರಾಮಯ್ಯನವರನ್ನು ಸೋಲಿಸುವ ತಂತ್ರ ಹೆಣೆಯುತ್ತಿದ್ದಾರೆ. ಕಾಂಗ್ರೆಸ್‍ನಲ್ಲಿನ ಕೆಲ ನಾಯಕರು ಸಿದ್ದರಾಮಯ್ಯನವರನ್ನು ಸೋಲಿಸಲು ಬಿಜೆಪಿಗೆ ನೆರವು ನೀಡಲು ಸಿದ್ದರಿದ್ದಾರೆ.

ಹೀಗಾಗಿ ಒಳ-ಹೊರ ಶತ್ರುಗಳನ್ನು ಎದುರಿಸಲು ಸುರಕ್ಷಿತ ಕ್ಷೇತ್ರಕ್ಕಾಗಿ ಸಿದ್ದು ಹುಡುಕಾಟ ನಡೆಸುತ್ತಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಿಂದ ನಾನು ಮತ್ತೆ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಸಿದ್ದರಾಮಯ್ಯ ಈಗಾಗಲೇ ಘೋಷಣೆ ಮಾಡಿದ್ದಾರೆ. ಜಿ.ಟಿ. ದೇವೇಗೌಡರು ಜೆಡಿಎಸ್ ತೊರೆದು, ಕಾಂಗ್ರೆಸ್ ಸೇರಿಕೊಳ್ಳುವ ಸಿದ್ದತೆ ನಡೆಸಿದ್ದಾರೆ. ಹೀಗಾಗಿ ಜಿ.ಟಿ. ದೇವೇಗೌಡರಿಗೆ ಚಾಮುಂಡೇಶ್ವರಿ ಟಿಕೆಟ್ ಪಕ್ಕಾ ಎನ್ನಲಾಗಿದೆ. ಇನ್ನು ಬಾದಾಮಿ ಕ್ಷೇತ್ರದಲ್ಲಿಯೂ ಸ್ಥಳೀಯ ನಾಯಕರು ಸಾಥ್ ನೀಡುತ್ತಿಲ್ಲ. ಹೀಗಾಗಿ ಮತ್ತೊಮ್ಮೆ ಕಣಕ್ಕಿಳಿದ್ರೆ ಗೆಲುವು ಕಷ್ಟವಾಗಬಹುದು ಎಂದು ಸಿದ್ದರಾಮಯ್ಯ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ.

ಜಮೀರ್ ಅಹ್ಮದ್ ಕ್ಷೇತ್ರ ಚಾಮರಾಜಪೇಟೆಗೆ ಹೋದರೆ ಒಳ್ಳೆಯದು, ಚಾಮರಾಜಪೇಟೆಯಲ್ಲಿ ಅಲ್ಪಸಂಖ್ಯಾತ ಮತಗಳು ಅಧಿಕವಾಗಿರುವುದರಿಂದ ಗೆಲುವು ಸುಲಭ ಎಂದು ಆಪ್ತರು ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಇನ್ನೊಂದೆಡೆ ಮರಳಿ ವರುಣಾ ವಿಧಾನಸಭಾ ಕ್ಷೇತ್ರದಿಂದಲೇ ಕಣಕ್ಕಿಳಿಯಲು ಸಿದ್ದರಾಮಯ್ಯ ಆಸಕ್ತಿ ತೋರುತ್ತಿದ್ದು, ಆದರೆ ಬಿಜೆಪಿ ಮತ್ತು ಜೆಡಿಎಸ್ ಒಂದಾದರೆ ವರುಣಾದಲ್ಲಿಯೂ ಗೆಲುವು ಕಷ್ಟ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರಂತೆ. ವರುಣಾದಲ್ಲಿ ಕಳೆದ ಬಾರಿ ಯಡಿಯೂರಪ್ಪ ಮಗ ವಿಜಯೇಂದ್ರ ಭರ್ಜರಿ ಪ್ರಚಾರ ನಡೆಸಿದ್ದು, ಈಗಲೂ ಅಲ್ಲಿ ಬಿಜೆಪಿ ಮತ್ತು ಜೆಡಿಎಸ್ ತಮ್ಮದೇ ಆದ ಮತಬ್ಯಾಂಕ್ ಹೊಂದಿವೆ.

ಒಕ್ಕಲಿಗ ಮತ್ತು ಲಿಂಗಾಯತ ಮತಗಳು ಒಂದಾದರೆ, ವರುಣಾದಲ್ಲಿಯೂ ಗೆಲುವು ಕಷ್ಟ ಎಂದು ಸ್ಥಳೀಯ ನಾಯಕರೆ ಸಿದ್ದರಾಮಯ್ಯನವರಿಗೆ ವರದಿ ನೀಡಿದ್ದಾರಂತೆ ಹೀಗಾಗಿ ಸಿದ್ದರಾಮಯ್ಯ ಹೆಚ್ಚು ಲೆಕ್ಕಾಚಾರ ಹಾಕಿ ಕ್ಷೇತ್ರ ಆಯ್ದುಕೊಳ್ಳಲು ಮುಂದಾಗಿದ್ದಾರೆ. ಆದರೆ ಕೊನೆಯ ಕ್ಷಣದವರೆಗೂ ಗೌಪ್ಯತೆ ಕಾಯ್ದುಕೊಳ್ಳಲು ಸಿದ್ದು ಬಯಸಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ.

Exit mobile version