ರೈತರ ಹಣ್ಣು, ತರಕಾರಿಗಳನ್ನು ಬೇರ್ಪಡಿಸುವ ಉಪಕರಣಗಳ ಮೇಲೆ ತೆರಿಗೆ(Tax) 5% ಇಂದ 18% ಮಾಡಿದ್ದಾರೆ. ಬಾವಿಗಳಿಂದ ನೀರೆತ್ತಲು ಬಳಸುವ ಸಬ್ ಮೆರಿನ್ ಪಂಪ್ ಹಾಗೂ ಮೋಟಾರ್ ಗಳಿಗೆ 12% ಇಂದ 18% ಗೆ ತೆರಿಗೆ ಏರಿಕೆ ಮಾಡಿದ್ದಾರೆ. ಬಡಜನರ ಮೇಲೆ ನರೇಂದ್ರ ಮೋದಿ(Narendra Modi) ಸರ್ಕಾರಕ್ಕೆ ಏಕಿಷ್ಟು ದ್ವೇಷ? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಪ್ರಶ್ನಿಸಿದ್ದಾರೆ.
ಜಿಎಸ್ಟಿ ಹೆಚ್ಚಳವನ್ನು ಖಂಡಿಸಿ ಸರಣಿ ಟ್ವೀಟ್ ಮಾಡಿರುವ ಅವರು, ಬರೆಯುವ ಹಾಗೂ ಮುದ್ರಿಸುವ ಇಂಕ್ಗಳ ಮೇಲೆ 12% ಇಂದ 18% ಗೆ, ಇಟ್ಟಿಗೆ ತಯಾರಿಸುವ ಜಾಗ್ ವರ್ಕ್ ಗಳ ಮೇಲಿನ ಜಿಎಸ್ಟಿ ಯನ್ನು 5% ಇಂದ 12% ಗೆ ಹೆಚ್ಚಿಸಿದ್ದಾರೆ. ಶೈಕ್ಷಣಿಕ ಬಳಕೆಯ ಭೂಪಟ, ಗ್ಲೋಬ್ ಗಳ ಮೇಲೆ 0% ಇಂದ 12% ತೆರಿಗೆ ಹಾಕಿದ್ದಾರೆ. ಇದು ಪ್ರಧಾನಿ ನರೇಂದ್ರ ಮೋದಿ ಅವರ ಅಚ್ಚೇದಿನ್ ಭಾಗವೇ? ಎಂದು ವ್ಯಂಗ್ಯವಾಡಿದ್ದಾರೆ.
ಇನ್ನು 1,000 ರೂಪಾಯಿಯ ಹೋಟೆಲ್ ಕೊಠಡಿಗಳಿಗೆ 12% ಜಿಎಸ್ಟಿ ಹಾಕಿದ್ದಾರೆ, ಸೋಲಾರ್ ವಾಟರ್ ಹೀಟರ್ ಗಳ ಮೇಲೆ 5% ಇದ್ದದ್ದನ್ನು 12% ಮಾಡಿದ್ದಾರೆ. ಎಲ್.ಇ.ಡಿ ಬಲ್ಬ್ ಗಳಿಗೆ 12% ಇಂದ 18%, ಬ್ಯಾಂಕ್ ಚೆಕ್ ಪುಸ್ತಕಗಳಿಗೆ 0% ಇಂದ 18% ಗೆ ತೆರಿಗೆ ಏರಿಕೆ ಮಾಡಿದ್ದಾರೆ.
ಇದರಿಂದ ಬಡ- ಮಧ್ಯಮ ವರ್ಗದ ಜನರ ಬದುಕು ಇನ್ನಷ್ಟು ಹಾಳಾಗಲಿದೆ. ಮೊಸರು, ಮಜ್ಜಿಗೆ, ಪನ್ನೀರ್, ಲಸ್ಸಿ ಹಾಗೂ ಅಕ್ಕಿ, ಗೋಧಿ, ಬಾರ್ಲಿ, ಓಟ್ಸ್ ಗೆ 0% ತೆರಿಗೆ ಇತ್ತು, ಅದೀಗ 5% ಗೆ ಹೆಚ್ಚಾಗಿದೆ. 5,000 ರೂ. ವರೆಗಿನ ಆಸ್ಪತ್ರೆ ಕೊಠಡಿಗಳ ಮೇಲೆ 5% ಜಿಎಸ್ಟಿ ಹಾಕಿದ್ದಾರೆ. ಕೇಂದ್ರ ಸರ್ಕಾರ ಜನರ ಊಟದ ತಟ್ಟೆಗೇ ಹೈಹಾಕುವ ನೀಚತನಕ್ಕೆ ಇಳಿಯಬಾರದಿತ್ತು ಎಂದು ಟೀಕಿಸಿದ್ದಾರೆ. ಕೇಂದ್ರ ಬಿಜೆಪಿ ಸರ್ಕಾರ(Central Government) ಜಿಎಸ್ಟಿ ಹೆಚ್ಚಳ ಮಾಡುವ ಮೂಲಕ ಬಡಜನರ ರಕ್ತ ಹೀರಲು ಹೊರಟಿದೆ.
ಕೇಂದ್ರದ ಈ ಜನಪೀಡಕ ನಿಲುವಿಗೆ ರಾಜ್ಯ ಸರ್ಕಾರವೂ ರಾಜ್ಯದ ಜನರ ಹಿತ ಮರೆತು ಬೆಂಬಲಕ್ಕೆ ನಿಂತಿರುವುದು ದುರದೃಷ್ಟಕರ. ಈಗ ಡಬ್ಬಲ್ ಎಂಜಿನ್ ಸರ್ಕಾರಗಳ “ಡಬ್ಬಲ್ ದರೋಡೆ” ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.