ಅನಾಥರ ಪಾಲಿನ ಅಮ್ಮ ಎಂದೇ ಖ್ಯಾತಿಯಾಗಿದ್ದ ಸಿಂಧೂ ತಾಯಿ ಇನ್ನಿಲ್ಲ

 ಅನಾಥರ ಪಾಲಿನ ತಾಯಿಯಾಗಿದ್ದ ಮಹಾರಾಷ್ಟ್ರದಲ್ಲಿ ಸಿಂಧೂ ತಾಯಿ ಎಂದೇ ಪ್ರಖ್ಯಾತರಾಗಿದ್ದಸಿಂಧು ಸಪ್ಕಾಲ್ ಅವರು ಜನವರಿ 4 ರಂದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮಹಾರಾಷ್ಟ್ರದಲ್ಲಿ ಸಿಂಧೂ ತಾಯಿ ಎಂದರೆ ಅನಾಥರ ಪಾಲಿನ ಆಯಿ ಎಂದೇ ಖ್ಯಾತಿ ಪಡೆದಿದ್ದವರು. ಸುಮಾರು 50 ವರ್ಷಗಳಿಂದಲೂ  ಅನಾಥ ಮಕ್ಕಳಿಗೆ ಆಶ್ರಯ ನೀಡುವ ಮೂಲಕ ದಿಕ್ಕು ದೆಸೆ ಇಲ್ಲದ ಸಾವಿರಾರು ಅನಾಥ ಮಕ್ಕಳನ್ನು ಬೆಳೆಸಿ ದೊಡ್ಡವರನ್ನಾಗಿ ಮಾಡಿ ಅವರಿಗೆ ಸೂಕ್ತವಾದ ವಿದ್ಯಾಭ್ಯಾಸವನ್ನು ನೀಡಿ ಸಮಾಜದಲ್ಲಿ ಉತ್ತಮ ಪ್ರಜೆಗಳನ್ನು ಮಾಡಿರುವ ಕಾರಣ ಆಕೆ ತನಗೆ  207 ಅಳಿಯಂದಿರು ಮತ್ತು 36 ಸೊಸೆಯರು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು.

ಸಿಂಧೂ ತಾಯಿ ಹಿನ್ನಲೆ :  ಸಿಂಧೂ ತಾಯಿ ಹುಟ್ಟಿದ್ದು ಬಡತನವನ್ನೇ ಹಾಸಿ ಹೊದ್ದಂತಿದ್ದ ಕುಂಟುಂಬದಲ್ಲಿ. ಮಹಾರಾಷ್ಟ್ರದ ಹಳ್ಳಿಯೊಂದರಲ್ಲಿ ಅವಳ ಜನನವಾಯ್ತು. ಸ್ವಲ್ಪ ದೊಡ್ಡವಳಾದಾಗ ಶಾಲೆ ಹೋಗ್ತೀನಿ ಅಂದಳು. ಆದರೆ ಅವಳ ಬಡ ಕುಟುಂಬ ಎಮ್ಮೆ ಮೇಯಿಸುವ ಕೆಲಸ ಕೊಟ್ಟು ಅವಳನ್ನು ಸಾಗಹಾಕಿತು. ಅವಳಿಗೆ 8 ವರ್ಷ ವಯಸ್ಸಾದಾಗ ಮದುವೆ ಮಾಡಿದರು. ಅವಳು ಮದುವೆಯಾದ ಹುಡುಗನ ವಯಸ್ಸು 30 ವರ್ಷ. ಅವಳಿಗೆ 19 ವರ್ಷವಾದಾಗ ಮೂರು ಗಂಡುಮಕ್ಕಳ ತಾಯಿಯಾಗಿದ್ದಳು. ನಾಲ್ಕನೇ ಮಗು ಹೊಟ್ಟೆಯಲ್ಲಿತ್ತು.

ಆ ಹೊತ್ತಿಗೆ ಒಬ್ಬ ಕ್ರೂರ ವ್ಯಕ್ತಿ ಅವಳಿದ್ದ ಹಳ್ಳಿಯ ಹೆಣ್ಣು ಮಕ್ಕಳಿಗೆ ವಿಪರೀತ ಹಿಂಸೆ ಮಾಡುತ್ತಿದ್ದ. ಆ ಹೆಣ್ಣುಮಕ್ಕಳನ್ನು ಸಿಕ್ಕಾಪಟ್ಟೆ ದುಡಿಸುತ್ತಿದ್ದ. ಅವರಿಗೆ ಕೆಲಸಕ್ಕೆ ತಕ್ಕ ಹಣ ಕೊಡುತ್ತಿರಲಿಲ್ಲ. ಊರಿನ ಬಡ ಹೆಣ್ಣುಮಕ್ಕಳು ಈತನನ್ನು ಕಂಡರೆ ಹೆದರಿ ನಡುಗುತ್ತಿದ್ದರು. ಆದರೆ ಸಿಂಧೂತಾಯಿ ಧೈರ್ಯವಾಗಿ ಈ ವಿಷಯವನ್ನು ಊರಿನ ಕಲೆಕ್ಟರ್ ಬಳಿ ಹೇಳಿದಳು. ಪೊಲೀಸರು ಬಂದು ಆ ಕ್ರೂರಿಯನ್ನು ಕರೆದೊಯ್ದರು. ಆದರೆ ಆ ಮನುಷ್ಯ ಸಿಂಧೂ ಮೇಲೆ ಸಿಟ್ಟಿನಿಂದ ಉರಿಯುತ್ತಿದ್ದ. ಅವನು ಇವಳ ಗಂಡನಿಗೆ ಕಿವಿಯೂದಿದ, ‘ನೀನೊಬ್ಬ ಮೂರ್ಖ. ನಿನ್ನ ಹೆಂಡತಿಗೆ ಊರಲ್ಲಿ ಅದೆಷ್ಟು ಜನರ ಜೊತೆಗೆ ಸಂಬಂಧವಿದೆ ಗೊತ್ತಾ? ಇನ್ನೊಂದು ವಿಷ್ಯ ಅಂದರೆ ಈಗ ಅವಳ ಹೊಟ್ಟೆಯಲ್ಲಿರುವ ಮಗು ನಿನ್ನದಲ್ಲ, ಅದು ನನ್ನದು. ನಾನೂ ಅವಳ ಜೊತೆಗೆ ಸಂಬಂಧ ಇಟ್ಟುಕೊಂಡಿದ್ದೆ. ಈಗ ನೀನು ಅವಳ ಹೊಟ್ಟೆಯಲ್ಲಿರುವ ಮಗುವನ್ನು, ಅವಳನ್ನು ಕೊಲ್ಲದಿದ್ದರೆ ನಾನು ಅವಳನ್ನು ಕೊಲ್ಲುತ್ತೀನಿ’ ಅಂದ.

ಅವನ ಮಾತನ್ನು ನಂಬಿದ ಮೂರ್ಖ ಗಂಡ ಹೆಂಡತಿ ಹೊಟ್ಟೆಗೆ ಒದ್ದ. ಎದೆ, ಹೊಟ್ಟೆಗೆ ಬಿದ್ದ ಏಟಿನಿಂದ ಹತ್ತೊಂಬತ್ತರ ಹರೆಯದ ಹುಡುಗಿ ಪ್ರಜ್ಞಾಹೀನಳಾದಳು. ಅವಳು ಬಹುಶಃ ಸತ್ತಿರಬೇಕು ಅಂದುಕೊಂಡು ಅವಳನ್ನು ಹಸುಗಳಿದ್ದ ಕೊಟ್ಟಿಗೆಗೆ ಸಾಗಿಸಿ ಅಲ್ಲೇ ಎಸೆದ. ಹಸುಗಳ ತುಳಿತದಿಂದ ಅವಳು ಸತ್ತಳು ಅಂತ ಜನ ತಿಳಿದುಕೊಳ್ಳಲಿ ಅನ್ನೋದು ಅವನ ಯೋಚನೆಯಾಗಿತ್ತು. ಅಲ್ಲೇ ಅವಳಿಗೆ ಹೆರಿಗೆಯಾಯ್ತು. ಅವಳು ಸಾಕಿದ ಆ ಹಸುವೇ ಅವಳಿಗೆ ನೆರಳಾಗಿ ನಿಂತು ಅವಳ ರಕ್ಷಣೆ ಮಾಡಿತು. ಅವಳ ಮಾವ ಅವಳು ಸತ್ತಿದ್ದಾಳೋ ಇಲ್ಲವೋ ಅಂತ ನೋಡಲು ಬಂದಾಗ ಹಸು ಅವರನ್ನು ಹತ್ತಿರಕ್ಕೂ ಬರಲು ಬಿಡಲಿಲ್ಲ. ಯಾವುದೋ ಒಂದು ಸಮಯದಲ್ಲಿ ಎಚ್ಚರವಾಗಿ ಸಿಂಧೂ ಮಗುವಿನೊಂದಿಗೆ ಅಲ್ಲಿಂದ ಹೊರಬಂದಳು. ದಿಕ್ಕುದೆಸೆಯಿಲ್ಲದೇ ನಡೆಯತೊಡಗಿದಳು. ಹಸಿ ಬಾಣಂತಿ. ಹೊಟ್ಟೆ ಹಸಿಯುತ್ತಿತ್ತು. ಆದರೆ ಇವಳ ಗಮನ ಅದರಲ್ಲಿ ಇರಲಿಲ್ಲ. ಮುಂದೆ ಬರುವ ರೈಲಿಗೆ ತಲೆಕೊಟ್ಟು ಪ್ರಾಣ ಬಿಡಬೇಕು, ನನ್ನ ಮಗುವನ್ನು ಇಂಥಾ ಸ್ಥಿತಿಯಲ್ಲಿ ಬೆಳೆಸುವುದು ಬೇಡ. ಮಗುವಿನೊಂದಿಗೇ ಪ್ರಾಣ ಬಿಡೋಣ ಅಂದುಕೊಂಡಳು.

ಆದರೆ ಸುಮ್ಮನೆ ಸಾಯುವ ಬದಲು ನೆಲೆಯಿಲ್ಲದ ನಿರ್ಗತಿಕರಿಗೆ ತಾಯಿಯಾಗಲು ಬಯಸಿದಳು. ಸುತ್ತ ಮುತ್ತ ಇರುವ ಅನಾಥ ಮಕ್ಕಳನ್ನು ಗುರುತಿಸಿ ಅವರನ್ನು ಪೋಷಿಸಲಾರಂಭಿಸಿದಳು. ಅವಳಿಗೆ ಚೆನ್ನಾಗಿ ಹಾಡಲು ಗೊತ್ತಿತ್ತು. ಹಾಡು ಹಾಡಿ ಭಿಕ್ಷೆ ಎತ್ತಿ ಮಕ್ಕಳಿಗೆ ಆಹಾರ, ರಕ್ಷಣೆ ನೀಡತೊಡಗಿದಳು. ಅಂಥಾ ಮಕ್ಕಳ ಸಂಖ್ಯೆ ಏರತೊಡಗಿತು. ಅವಳ ಕೆಲಸಕ್ಕೆ ಉದಾರಿಗಳಿಂದ ಸಹಾಯವೂ ಒದಗಿಬಂತು. ಅವರು ಅವಳಿಗೊಂದು ಅನಾಥಾಶ್ರಮ ಕಟ್ಟಿಕೊಟ್ಟರು.  ಆ ಆಸ್ರಮದಲ್ಲಿ ಬರೋಬ್ಬರಿ ಒಂದೂವರೆ ಸಾವಿರದಷ್ಟು ಮಕ್ಕಳಿದ್ದರು, ಸಾವಿರಕ್ಕೂ ಹೆಚ್ಚು ಮೊಮ್ಮಕ್ಕಳಿದ್ದಾರೆ. ಅವಳ ಎಲ್ಲ ಮಕ್ಕಳೂ ಸುಶಿಕ್ಷಿತರು. ಅವರಲ್ಲಿ ಹಲವರು ವೈದ್ಯರು, ಕೃಷಿಕರು, ಉದ್ಯೋಗಿಗಳೆಲ್ಲ ಇದ್ದಾರೆ. ಸಿಂಧೂ ಎಂಬ ಹೆಸರು ಹೋಗಿ  ಅವರ ಪರಿಶ್ರಮಕ್ಕೆ ಸಿಂಧೂತಾಯಿ ಎಂಬ ಹೆಸರು ಬಂದಿತು.

ರಾಷ್ಟ್ರಪತಿಗಳೇ ಈಕೆಯ ಸಾಧನೆಗೆ ಬೆರಗಾಗಿ ಪ್ರಶಸ್ತಿ ನೀಡಿ ಗೌರವಿಸಿದ್ದಾರು. ಅನೇಕ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿಗಳು ಸಿಂಧೂತಾಯಿಗೆ ಬಂದಿವೆ.

ಹೀಗಿರುವಾಗ ಒಂದು ಘಟನೆ ನಡೆಯಿತು. ಒಂದು ದಿನ ಸಿಂಧೂತಾಯಿ ಆಶ್ರಮದ ಮುಂದೆ ಒಬ್ಬ ಅನಾರೋಗ್ಯಪೀಡಿತ ವ್ಯಕ್ತಿ ಬಸವಳಿದು ನಿಂತಿದ್ದ. ಅವಳಲ್ಲಿ ದಯನೀಯವಾಗಿ ಆಶ್ರಯ ಬೇಡಿದ. ಆತ ಬೇರ್ಯಾರೂ ಅಲ್ಲ ಅವಳನ್ನು ಕೊಲ್ಲಲು ಮುಂದಾಗಿದ್ದ ಅವಳ ಗಂಡ. ಒಂದು ಕಂಡೀಶನ್ ಮೇಲೆ ಈಕೆ ಅವನನ್ನು ಆಶ್ರಮಕ್ಕೆ ಸೇರಿಸಿಕೊಂಡಳು. ಅವನೂ ಇಲ್ಲಿ ಉಳಿದ ಮಕ್ಕಳ ಜೊತೆಗೆ ಮಗುವಾಗಿಯೇ ಇರಬೇಕು. ಅವನೀಗ ಅವಳ ಗಂಡ ಅಲ್ಲ, ಅವಳು ಅವನ ಹೆಂಡತಿ ಅಲ್ಲ ಅಮ್ಮ ಮಗನ ಸಂಬಂಧವಾಗಿ ಬದಲಾಗಿತ್ತು.

ಕೇವಲ 4ನೇ ತರಗತಿ ಓದಿದ್ದ ಹಳ್ಳಿಯ ಸಾಮಾನ್ಯ ಸಿಂಧುವಾಗಿದ್ದವಳು  ಈಗ ಸಿಂಧೂತಾಯಿ ಆಗಿ ಬದಲಾಗಿದ್ದರುಆಕೆಯ ಈ ಸಾಧನೆಯನ್ನು ಮೆಚ್ಚಿ ಹತ್ತು ಹಲವಾರು  ರಾಷ್ಟ್ರೀಯ, ಅಂತಾರಾಷ್ಟ್ರೀಯ ಸಂಘ ಸಂಸ್ಥೆಗಳು ಆಕೆಗೆ ಪ್ರಶಸ್ತಿ ಪುರಸ್ಕಾರಗಳನ್ನು ನೀಡಿ ಗೌರವಿಸಿತ್ತು. ರಾಷ್ಟ್ರಪತಿಗಳೇ ಈಕೆಯ ಸಾಧನೆಗೆ ಬೆರಗಾಗಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದ್ದರು.  ಕರ್ನಾಟಕ ಸರ್ಕಾರದಿಂದಲೂ ಆಕೆ ಬಸವಶ್ರೀ ಪ್ರಶಸ್ತಿಗೆ ಭಾಜನರಾಗಿದ್ದರು.  ಸುಮಾರು 750 ಕ್ಕೂ ಹೆಚ್ಚು ಗೌರವಗಳನ್ನು ಪಡೆದಿದ್ದರೂ,  ಪ್ರಶಸ್ತಿ ಬಂದಾಗ ಹಿಗ್ಗದೇ ಕಷ್ಟ ಬಂದಾಗ ಕುಗ್ಗದೇ ಕಾಯಕವೇ ಕೈಲಾಸ ಎಂದು ತನ್ನ ಆಶ್ರಮದಲ್ಲೇ ತನ್ನ ಸಾವಿರಾರು ಮಕ್ಕಳು ಮತ್ತು ನೂರಾರು ಮೊಮ್ಮಕ್ಕಳೊಂದಿಗೆ ಇದ್ದ ಅನಾಥ ಮಕ್ಕಳ ಪಾಲಿನ ಆಯಿ ಸಿಂಧುತಾಯಿ ಸಪ್ಕಾಲ್ ಆವರಿಗೆ ತಮ್ಮ 73 ನೇ ವಯಸ್ಸಿನಲ್ಲಿ ವಯೋಸಹಜ ಖಾಯಿಲೆಗಳು ಕಾಣಿಸಿಕೊಂಡಾಗ ಆಕೆಯನ್ನು ಪುಣೆಯ ಖಾಸಗೀ ಆಸ್ಪತ್ರೆಗೆ ಸೇರಿಸಲಾಯಿತು.

ಪುಣೆಯಲ್ಲಿರುವ ಗ್ಯಾಲಕ್ಸಿ ಕೇರ್ ಆಸ್ಪತ್ರೆಯಲ್ಲಿ ಒಂದೂವರೆ ತಿಂಗಳ ಹಿಂದೆ ಹರ್ನಿಯಾ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದು, ಚೇತರಿಕೆ ಬಹಳ ನಿಧಾನವಾಗಿತ್ತು.  ಎಲ್ಲಾ ವೈದ್ಯರುಗಳ ಹರಸಾಹವೂ ಹೊಳೆಯಲ್ಲಿ ಹುಣಸೇ ಹಣ್ಣು ತೊಳೆದಂತಾಗಿ  ಆವರು ನೀಡಿದ ಚಿಕಿತ್ಸೆಗೆ ಸಿಂಧು ತಾಯಿಯ ದೇಹ ಸ್ಪಂದಿಸದೇ ಜನವರಿ 4, 2022ರ ರಾತ್ರಿ 8 ಗಂಟೆಯ ಸುಮಾರಿಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಶೈಲೇಶ್  ಸ್ಪಷ್ಟಪಡಿಸಿದರು.

Exit mobile version