ಅತಿ ಹೆಚ್ಚು ಪಕ್ಷಾಂತರ ಮಾಡಿದ ಸಿದ್ದರಾಮಯ್ಯ, ಪಕ್ಷಾಂತರಿಗಳಿಗೆ ಶಿಕ್ಷೆಯಾಗಬೇಕೆಂದು ವಾದಿಸುವುದು ಚೋದ್ಯ : ಬಿಜೆಪಿ

congress

ರಾಜ್ಯದಲ್ಲಿ ಅತಿ ಹೆಚ್ಚು ಬಾರಿ ಪಕ್ಷಾಂತರ ಮಾಡಿದ ಸಿದ್ದರಾಮಯ್ಯ(Siddaramaiah) ಅವರು ಪಕ್ಷಾಂತರಿಗಳಿಗೆ ಶಿಕ್ಷೆಯಾಗಬೇಕೆಂದು ವಾದಿಸುವುದು ಚೋದ್ಯ ಎಂದು ರಾಜ್ಯ ಬಿಜೆಪಿ(State BJP) ವ್ಯಂಗ್ಯವಾಡಿದೆ. ಶಾಸಕರನ್ನು ಖರೀದಿ ಮಾಡುವ ಕೆಟ್ಟ ಚಾಳಿ ದೇಶಕ್ಕೆ ಪರಿಚಯಿಸಿದ್ದು ಬಿಜೆಪಿ. ಇಂದು ದೇಶಾದ್ಯಂತ ಅನೇಕ ಸರ್ಕಾರಗಳನ್ನು ಹಿಂಬಾಗಿಲಿನ ಮೂಲಕ ಉರುಳಿಸಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಹೀಗಾಗಿ ಪಕ್ಷಾಂತರ ಮಾಡುವ ಶಾಸಕರಿಗೆ ಇನ್ನಷ್ಟು ಕಠಿಣ ಶಿಕ್ಷೆಯಾಗಬೇಕೇಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ರಾಜ್ಯ ಬಿಜೆಪಿ, ಸಿದ್ದರಾಮಯ್ಯ ಅವರೇ, ನೀವು ಮತ್ತೊಂದು ಬಾರಿ ಪಕ್ಷಾಂತರಕ್ಕೆ ಸಿದ್ದರಾಗಿದ್ದಾರೆಂಬ ಸುದ್ದಿ ಇದೆ. ಹಾಗಾದರೆ ನಿಮ್ಮ ಚುನಾವಣಾ(Election) ಭವಿಷ್ಯವೇನು? ತೊಂಬತ್ತೊಂಬತ್ತು ಜಿಂಕೆಗಳನ್ನು ಕೊಂದು ತಿಂದ ಹುಲಿ ಅಹಿಂಸಾವಾದದ ಪ್ರತಿಪಾದನೆಗಾಗಿ ಕಾಶಿಯಾತ್ರೆಗೆ ತೆರಳಿತ್ತಂತೆ ಎಂದಿದೆ. ಜೆಡಿಎಸ್ ಶಾಸಕರು(JDS MLA) ಕಾಂಗ್ರೆಸ್(Congress) ಪಕ್ಷಕ್ಕೆ ಕ್ರಾಸ್ ವೋಟಿಂಗ್ ಮಾಡಿದರೆ ಆತ್ಮಸಾಕ್ಷಿಯ ಮತ. ಶಿವಸೈನಿಕರು ಬಿಜೆಪಿಗೆ ಕ್ರಾಸ್ ವೋಟಿಂಗ್ ಮಾಡಿದರೆ ಅದು ಖರೀದಿ. ಕಾಂಗ್ರೆಸ್ಸಿಗರೇ, ನಿಮ್ಮ ಹತಾಶೆಯ ಬಗ್ಗೆ ನಮಗೆ ಕನಿಕರವಿದೆ ಎಂದು ಬಿಜೆಪಿ ಲೇವಡಿ ಮಾಡಿದೆ.


ಇನ್ನು ಮಹಾರಾಷ್ಟ್ರದಲ್ಲಿ(Maharashtra) ಶಿವಸೇನೆ-ಕಾಂಗ್ರೆಸ್-ಎನ್‍ಸಿಪಿ ಮೈತ್ರಿಕೂಟದ ಸರ್ಕಾರವನ್ನು ಅತಂತ್ರಗೊಳಿಸಲು, ಶಿವಸೇನೆ ಶಾಸಕರನ್ನು ಬಿಜೆಪಿ ಖರೀದಿ ಮಾಡಿದೆ. ಅಧಿಕಾರದ ಆಸೆಗಾಗಿ ಬಿಜೆಪಿ ಈ ರೀತಿಯ ಕುತಂತ್ರಗಳನ್ನು ಮಾಡುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

Exit mobile version