ಪ್ರಚಾರ ಪಡೆಯಲು ನಮ್ಮ ಸಾಧನೆಗಳೇ ಬೇಕೇ? : ಕಾಂಗ್ರೆಸ್!

ಉದ್ಘಾಟನೆಯಾಗಿ ಕಾರ್ಯನಿರ್ವಹಿಸುತ್ತಿರುವ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್‍ನ್ನ ಮತ್ತೊಮ್ಮೆ ಉದ್ಘಾಟಿಸುತ್ತಿರುವ ಮೋದಿಯವರೇ, ನಿಮ್ಮ ಡಬಲ್ ಇಂಜಿನ್ ಸರ್ಕಾರದ ಯಾವುದೇ ಸಾಧನೆ ಇಲ್ಲವೇ? ಹೆಸರು, ಪ್ರಚಾರ ಪಡೆಯಲು ನಮ್ಮ ಸಾದನೆಗಳೇ ಬೇಕೇ? ಕರ್ನಾಟಕಕ್ಕೆ ಉಭಯ ಬಿಜೆಪಿ ಸರ್ಕಾರಗಳ(BJP Government) ಕೊಡುಗೆಗಳು ಇಲ್ಲದ್ದು ನಾಚಿಕೆಗೇಡಲ್ಲವೆ? ಎಂದು ಕಾಂಗ್ರೆಸ್(Congress) ಬಿಜೆಪಿಯನ್ನು ಟೀಕಿಸಿದೆ.

ಸರಣಿ ಟ್ವೀಟ್(Tweet) ಮಾಡಿರುವ ರಾಜ್ಯ ಕಾಂಗ್ರೆಸ್, ಮಾನ್ಯ ಪ್ರಧಾನಿಗಳೇ, ಮೈಸೂರಿಗೆ ಭೇಟಿ ಕೊಡುತ್ತಿದ್ದೀರಿ, ಪಕ್ಕದಲ್ಲೇ ಚಾಮರಾಜನಗರ(Chamarajnagar) ಇದೆ, ಕೋವಿಡ್(Covid) ಕಾಲದಲ್ಲಿ ಆಕ್ಸಿಜನ್ ಸಿಗದೆ ಜೀವ ಬಿಟ್ಟವರ ಮನೆಗೆ ಭೇಟಿ ಕೊಡುವುದಿಲ್ಲವೇ? ನಿಮ್ಮ ಉಭಯ ಸರ್ಕಾರಗಳ ವೈಫಲ್ಯಕ್ಕೆ ಅವರ ಕುಟುಂಬಸ್ಥರ ಎದುರು ಕೈಮುಗಿದು ಕ್ಷಮೆ ಕೇಳಿ ಪ್ರಾಯಶ್ಚಿತ್ತ ಮಾಡಿಕೊಳ್ಳುವುದಿಲ್ಲವೇ?ಮಾನ್ಯ ಪ್ರಧಾನಿಯವರೇ, ನಿಮ್ಮಿಂದ ನ್ಯಾಯ ಸಿಗಬಹುದೆಂದು 40% ಕಮಿಷನ್ ಕಿರುಕುಳದ ಬಗ್ಗೆ ನಿಮ್ಮದೇ ಪಕ್ಷದ ಕಾರ್ಯಕರ್ತ,

ಗುತ್ತಿಗೆದಾರ ಸಂತೋಷ್ ಪಾಟೀಲ್ ಪತ್ರ ಬರೆದಿದ್ದರು, ನೀವು ಸ್ಪಂದಿಸದ ಕಾರಣ ಆತ್ಮಹತ್ಯೆಗೆ ಶರಣಾಗಿದ್ದರು. ಅವರ ಕುಟುಂಬಕ್ಕೆ ಸಾಂತ್ವಾನ ಹೇಳುವುದಿಲ್ಲವೇ? 40% ಕಮಿಷನ್ ನಿಗ್ರಹಿಸುವ ಮನಸಿಲ್ಲವೇ? ಎಂದು ಪ್ರಶ್ನಿಸಿದೆ. ಮಾನ್ಯ ಪ್ರಧಾನಿಗಳೇ, ಚುನಾವಣೆಗೂ ಮೊದಲು ರಾಜ್ಯಕ್ಕೆ ಬಂದು ಡಬಲ್ ಇಂಜಿನ್ ಸರ್ಕಾರಗಳಿದ್ದರೆ ಅಭಿವೃದ್ಧಿ ಮುಗಿಲೆತ್ತರಕ್ಕೆ ಏರಲಿದೆ ಎಂದಿದ್ದಿರಿ. ವಿಶ್ವದರ್ಜೆಯ ನಗರವಾಗಿದ್ದ ಬೆಂಗಳೂರಿನ ರಸ್ತೆಗಳೆಲ್ಲ ಗುಂಡಿಮಯವಾಗಿವೆ, ಅಭಿವೃದ್ಧಿ ಮಾಯವಾಗಿದೆ. ಇದೇನಾ ನಿಮ್ಮ ಡಬಲ್ ಇಂಜಿನ್ ಸರ್ಕಾರಗಳ ‘ವಿಕಾಸ್’?


‘ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್’
◆ಕಾಂಗ್ರೆಸ್ ಅವಧಿಯಲ್ಲಿ ನಿರ್ಮಾಣವಾಗಿದೆ
◆2017-ಪ್ರಣಬ್ ಮುಖರ್ಜಿಯವರಿಂದ ಶಂಕುಸ್ಥಾಪನೆ
◆45 ಎಕರೆ ಭೂಮಿ ಮಂಜೂರು ಮಾಡಲಾಗಿತ್ತು
◆350 ಕೋಟಿ ಅನುದಾನ ನೀಡಲಾಗಿತ್ತು
◆6 ತಿಂಗಳಲ್ಲಿ ಕ್ಯಾಂಪಸ್ ಸಿದ್ಧ
◆2017-ಮನಮೋಹನ್ ಸಿಂಗ್‍ರಿಂದ ಉದ್ಘಾಟನೆ
ಆದರೆ ಬಿಜೆಪಿ ಕೊಡುಗೆ ಏನು? ಹಿಂದೆ ನಮ್ಮ ಸರ್ಕಾರ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್‍ಗೆ ನುರಿತ ತಜ್ಞರು, ಯಶಸ್ವಿ ಉದ್ಯಮಿಗಳನ್ನು ಒಳಗೊಂಡ ಅತ್ಯುತ್ತಮ ಗರ್ವನಿಂಗ್ ಕೌನ್ಸಿಲ್ ರೂಪಿಸಿತ್ತು. ಬಿಜೆಪಿ ಆಡಳಿತದಲ್ಲಿ ‘ತಮ್ಮವರನ್ನು’ ಕೂರಿಸಿ ಅದನ್ನು ದುರ್ಬಲಗೊಳಿಸಿದೆ.

ಮರು ಉದ್ಘಾಟನೆ ಮಾಡುತ್ತಿರುವ ಮೋದಿಯವರೇ, ಇದೇನಾ ನಿಮ್ಮ ಸಾಧನೆ. ಅಂಬೇಡ್ಕರ್‍ರವರ 125ನೇ ಹುಟ್ಟುಹಬ್ಬದ ಅಂಗವಾಗಿ ನಮ್ಮ ಅವಧಿಯಲ್ಲಿ ಸಿದ್ದರಾಮಯ್ಯ ಅವರ ಮಾರ್ಗದರ್ಶದಲ್ಲಿ ಹಾಗೂ ಪ್ರೀಯಾಂಕ್ ಖರ್ಗೆ, ಸಿ.ಮಹದೇವಪ್ಪ, ಟಿ.ಬಿ ಜಯಚಂದ್ರ ಅವರುಗಳ ಕಾಳಜಿಯಲ್ಲಿ ನಿರ್ಮಾಣವಾಗಿದ್ದ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್‍ನ್ನು ಮನಮೋಹನ್ ಸಿಂಗ್ ಅವರು ಉದ್ಘಾಟಿಸಿದ್ದರು. ಈಗ ಮೋದಿ ಮತ್ತೊಮ್ಮೆ ಉದ್ಘಾಟಿಸುತ್ತಾರಂತೆ! ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.

Exit mobile version