ರೈ ತ ವಿರೋಧಿ ಬಿಜೆಪಿ ಸರ್ಕಾರ(BJP Government) ರೈತರಿಗೆ ಮೇಲಿಂದ ಮೇಲೆ ಅನ್ಯಾಯವೆಸಗುತ್ತಿದೆ, ನೆರೆ ಪರಿಹಾರವಿಲ್ಲ, ಗೊಬ್ಬರವೂ ಸಿಗ್ತಿಲ್ಲ, ಬೆಳೆ ಸಾಲಕ್ಕೂ ಪರದಾಟ, ಸಾಲದ ಮೇಲಿನ ಬಡ್ಡಿಯೂ ದುಬಾರಿ. ಬಿಜೆಪಿಗೆ(BJP) ರೈತರ ಮೇಲಿರುವುದು ದ್ವೇಷವೇ, ತಾತ್ಸಾರವೇ? ಹೆಣ ಕಂಡರೆ ಓಡೋಡಿ ಬರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ(Shobha Karandlaje) ಸಮಸ್ಯೆಗಳಿಗೆ ಬಾಯಿ ಬಿಡದಿರುವುದೇಕೆ? ಎಂದು ರಾಜ್ಯ ಕಾಂಗ್ರೆಸ್(State Congress) ಪ್ರಶ್ನಿಸಿದೆ.
ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿ, ಸರಣಿ ಟ್ವೀಟ್(Tweet) ಮಾಡಿರುವ ರಾಜ್ಯ ಕಾಂಗ್ರೆಸ್, ನಿರುದ್ಯೋಗ ಹೋಗಲಾಡಿಸಲು, ಗ್ರಾಮೀಣ ಆರ್ಥಿಕತೆಯನ್ನು ಸಶಕ್ತಗೊಳಿಸಲು ಕಾಂಗ್ರೆಸ್ ಉದ್ಯೋಗ ಖಾತ್ರಿ ಎಂಬ ಕ್ರಾಂತಿಕಾರಿ ಯೋಜನೆ ಜಾರಿಗೊಳಿಸಿತ್ತು. ರಾಜ್ಯ ಬಿಜೆಪಿ ಸರ್ಕಾರ ಬಡವರ ಉದ್ಯೋಗದ ಆಸರೆಯನ್ನು ಕಿತ್ತುಕೊಂಡಿದೆ ‘ಪಸಲ್ ಬಿಮಾ’ ಎಂದರೆ ರೈತರ ಬೆವರಿನಲ್ಲಿ ವಿಮಾ ಕಂಪೆನಿಗಳ ಭರ್ಜರಿ ಫಸಲು ಬೆಳೆಯುವುದು ಎಂದರ್ಥ. ಬೆಳೆ ವಿಮೆ ಪರಿಹಾರ ನೀಡಿರುವುದಕ್ಕಿಂತ ಕಂಪೆನಿಗಳು ಲಾಭ ಮಾಡಿಕೊಂಡಿದ್ದೇ ಹೆಚ್ಚು ಎಂದು ಆರೋಪಿಸಿದೆ.
ರೈತ ವಿರೋಧಿ ಬಿಜೆಪಿ, ರೈತರ ಹಿತಕ್ಕೆ ಕೆಲಸ ಮಾಡುತ್ತೇವೆ ಎನ್ನುವುದು, ತೋಳ ಗೋವಿನ ಮುಖವಾಡ ಹಾಕಿಕೊಳ್ಳುವುದು ಎರಡೂ ಒಂದೇ. ಸಮಾಜ ಕಲ್ಯಾಣ ಇಲಾಖೆಯಲ್ಲಿ ಸ್ವಯಂ ಕಲ್ಯಾಣ ಇಲಾಖೆಯಾಗಿರುವಾಗ ಗಂಗಾ ಕಲ್ಯಾಣದಲ್ಲಿ ಭ್ರಷ್ಟರ ಕಲ್ಯಾಣ ಆಗುತ್ತಿರುವುದರಲ್ಲಿ ಆಶ್ಚರ್ಯವಿಲ್ಲ. ಇಲಾಖಾ ತನಿಖೆಯಲ್ಲಿ ಮೇಲ್ನೋಟದಲ್ಲೇ ಹಗರಣ ಸಾಬೀತಾಗಿದೆ, ಹೀಗಿದ್ದೂ ಭ್ರಷ್ಟರ ರಕ್ಷಣೆಗಾಗಿ ಉನ್ನತ ತನಿಖೆಗೆ ವಹಿಸದೆ ಸರ್ಕಾರ ಹಿಂದೇಟು ಹಾಕುತ್ತಾ ದಲಿತರಿಗೆ ಅನ್ಯಾಯವೆಸಗುತ್ತಿದೆ ಎಂದು ಟೀಕಿಸಿದೆ.
ಬಿಜೆಪಿ ಸರ್ಕಾರದಲ್ಲಿ 40% ಕಮಿಷನ್ ಭ್ರಷ್ಟಾಚಾರದ ಸೋಂಕು ಕೋವಿಡ್ಗಿಂತಲೂ ಅಪಾಯಕಾರಿಯಾಗಿ ವ್ಯಾಪಿಸಿದೆ.
ನಿಗಮ, ಮಂಡಳಿಗಳಲ್ಲಿ ಭ್ರಷ್ಟಾಚಾರ ವಿಜೃಂಭಣೆಯಿಂದ ನಡೆಯುತ್ತಿದೆ. ಬಡವರ, ಹಿಂದುಳಿದವರ ಏಳಿಗೆಯ ಬದಲು ಭ್ರಷ್ಟರ ಏಳಿಗೆಯಾಗುತ್ತಿದೆ. ಬಡವರನ್ನು ತಲುಪಬೇಕಾದ ನೂರಾರು ಕೋಟಿ ಅನುದಾನ ಬಿಜೆಪಿ ಭ್ರಷ್ಟರ ತಿಜೋರಿ ಸೇರುತ್ತಿದೆ ಎಂದು ಆರೋಪಿಸಿದೆ.