ಕೇಂದ್ರ ಸರಕಾರ ಒಂದು ಪಕ್ಷದ್ದಲ್ಲ, ಒಂದು ವ್ಯಕ್ತಿ ಮತ್ತು ಕಂಪನಿಗಳದ್ದು: ರೈತ ನಾಯಕ ರಾಕೇಶ್ ಟಿಕಾಯತ್

ಲಕ್ನೋ, ಆ. 08: ಹಿಂದಿ ವಾಹಿನಿ ಆಜ್ ತಕ್ ವತಿಯಿಂದ ನಡೆದ ಸರ್ವಪಕ್ಷ ಸಮಾವೇಶ ‘ಪಂಚಾಯತ್ ಆಜ್ ತಕ್’ ನಲ್ಲಿ ಉತ್ತರಪ್ರದೇಶದ ಎಲ್ಲಾ ಪಕ್ಷಗಳ ಪ್ರಮುಖ ನಾಯಕರು ಭಾಗಿಯಾದರು. ಈ ಕಾರ್ಯಕ್ರಮದಲ್ಲಿ ಹಲವು ದಿಗ್ಗಜ ನಾಯಕರೊಂದಿಗೆ ರಾಜಕೀಯ ಮತ್ತು ಸಾಮಾಜಿಕ ವಿಚಾರಗಳ ಬಗ್ಗೆ ಚರ್ಚೆ ನಡೆಯಿತು.

ಕಾರ್ಯಕ್ರಮದಲ್ಲಿ ಭಾಗಿಯಾದ ರೈತ ನಾಯಕ ರಾಕೇಶ್ ಟಿಕಾಯತ್, ಕೇಂದ್ರ ಸರಕಾರವನ್ನು ಕೇವಲ ಒಂದು ವ್ಯಕ್ತಿ ಮತ್ತು ಕೆಲವು ಕಂಪನಿಗಳು ನಡೆಸುತ್ತಿವೆ. ಇದು ಒಂದು ಪಕ್ಷದ ಸರಕಾರವಾಗಿದ್ದರೆ ಅದರಲ್ಲಿ ಹಲವು ನಾಯಕರಿರುತ್ತಿದ್ದರು, ಅವರ ಮಧ್ಯೆ ಪರಸ್ಪರ ಚರ್ಚೆ ನಡೆದು ತೀರ್ಮಾನಗಳನ್ನು ತೆಗೆದುಕೊಳ್ಳುತ್ತಿದ್ದರು, ಆದರೆ ಇಲ್ಲಿ ಎಲ್ಲದ್ದಕ್ಕೂ ಒಬ್ಬರ ಮಾತನ್ನೇ ಕಾಯಬೇಕಾಗಿದೆ. ಹೊಸ ಕೃಷಿ ಕಾನೂನುಗಳನ್ನು ವಾಪಾಸ್ ಪಡೆಯುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲವೆಂದು ಟಿಕಾಯತ್ ಪುನರುಚ್ಚರಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಯುಪಿ ಸಿಎಂ ಯೋಗಿ, ಕೃಷಿ ಕಾಯ್ದೆಗಳ ವಿರುದ್ಧ ಹೋರಾಟ ಮಾಡುವವರನ್ನು ಯುಪಿ ಸ್ವಾಗತಿಸುತ್ತದೆ. ನಾವು ಚರ್ಚೆಗೂ ತಯಾರಿದ್ದೇವೆ. ಆದರೆ ಕಾನೂನು ಸುವ್ಯವಸ್ಥೆಗೆ ಅಡ್ಡಿಪಡಿಸುವವರನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ ಎಂದು ಯೋಗಿ ಹೇಳಿದರು. 

ಇನ್ನು ಮಾಜಿ ಸಿಎಂ ಅಖಿಲೇಶ್, ನಾವು ಬಿಜೆಪಿಯವರಿಗಿಂತ ದೊಡ್ಡ ಹಿಂದೂಗಳು, ಅವರಿಂದ ನಾವು ಹಿಂದುತ್ವವನ್ನು ಕಲಿಯಬೇಕಿಲ್ಲ. ಸಮಾಜವಾದಿ ಪಕ್ಷ 300ಕ್ಕೂ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಅಖಿಲೇಶ್ ವಿಶ್ವಾಸ ವ್ಯಕ್ತಪಡಿಸಿದರು.

ಈ ಬಾರಿ 300ಕ್ಕೂ ಅಧಿಕ ಸೀಟ್ ಬಿಜೆಪಿ ಗೆಲ್ಲಲಿದೆ, ಮೋದಿ-ಶಾ ಜೋಡಿ ಜೊತೆ ಇಡೀ ಯುಪಿ ಇದೆ ಎಂದು ಡಿಸಿಎಂ ಕೇಶವ ಮೌರ್ಯ ಹೇಳಿದರೆ, ಮಾಯಾವತಿಯವರ ಪಕ್ಷ ಬಿ ಎಸ್ ಪಿ ಈ ಬಾರಿ ಯಾರೊಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ, ಬಿಜೆಪಿ ಧರ್ಮದ ಹೆಸರಲ್ಲಿ ಕೆಟ್ಟ ರಾಜಕಾರಣ ಮಾಡುತ್ತಿದೆ. ಇವರ ಆಡಳಿತದಲ್ಲಿ ಬ್ರಾಹ್ಮಣರ ಹತ್ಯೆಯೂ ನಡೆಯುತ್ತಿದೆ ಎಂದು ಬಿ ಎಸ್ ಪಿಯ ರಾಷ್ಟ್ರೀಯ ಕಾರ್ಯದರ್ಶಿ ಸತೀಶ್ ಚಂದ್ರ ಮಿಶ್ರಾರವರು ಆರೋಪಿಸಿದ್ದಾರೆ.

ಜಲಸಂಪನ್ಮೂಲ ಮಂತ್ರಿ ಮಹೇಂದ್ರ ಸಿಂಗ್, ಬಿಜೆಪಿ ಸರಕಾರವು ಉತ್ತರಪ್ರದೇಶದಿಂದ ರೊಹಿಂಗ್ಯರನ್ನು ಖಂಡಿತವಾಗಿಯೂ ಖಾಲಿ ಮಾಡಿಸುತ್ತದೆ, ಬೇರೆ ಸರಕಾರಗಳು ಬೇಕಾದರೆ ಅವರಿಗೆ ಆಶ್ರಯ ಕೊಟ್ಟುಕೊಳ್ಳಲಿ ಎಂದು ಹೇಳಿಕೆ ನೀಡಿದ್ದಾರೆ.

ಕಾರ್ಯಕ್ರಮದಲ್ಲಿ ಹಾಲಿ ಸಿಎಂ ಯೋಗಿ ಆದಿತ್ಯನಾಥ್, ಉಪಮುಖ್ಯಮಂತ್ರಿಗಳಾದ ಕೇಶವ ಪ್ರಸಾದ್ ಮೌರ್ಯ ಮತ್ತು ದಿನೇಶ್ ಶರ್ಮಾ, , ರೈತ ನಾಯಕ ರಾಕೇಶ್ ಟಿಕಾಯತ್, ಮಾಜಿ ಸಿಎಂ ಅಖಿಲೇಶ್ ಯಾದವ್, ಏಐಎಂಐಎಂ ನಾಯಕ ಅಸದುದ್ದೀನ್ ಓವೈಸಿ, ಆಪ್ ನ ಸಂಸದ ಸಂಜಯ್ ಸಿಂಗ್, ನಿಷಾದ್ ಪಾರ್ಟಿಯ ಸಂಜಯ್ ನಿಷಾದ್, ಬಿ ಎಸ್ ಪಿಯ ರಾಷ್ಟ್ರೀಯ ಕಾರ್ಯದರ್ಶಿ ಸತೀಶ್ ಚಂದ್ರ ಮಿಶ್ರಾ, ಬಿಜೆಪಿ ಸಂಸದ, ಭೋಜ್ಪುರಿ ನಟ ಮನೋಜ್ ತಿವಾರಿ,  ಭೀಮ್ ಆರ್ಮಿ ಪಾರ್ಟಿಯ ಅಧ್ಯಕ್ಷ ಚಂದ್ರಶೇಖರ್ ಆಜಾದ್ ರಾವಣ್ ಸೇರಿ ಹಲವಾರು ಪ್ರಾದೇಶಿಕ ನಾಯಕರೂ ಭಾಗಿಯಾದರು.

Exit mobile version