ಮಹದೇಶ್ವರನಿಗೆ ಬೆಳ್ಳಿ ರಥದ ನಿರ್ಮಾಣಕ್ಕೆ ಬೆಳ್ಳಿ ಕರಗಿಸುವಿಕೆ ಆರಂಭ

ಚಾಮರಾಜನಗರ, ಏ. 12: ಐತಿಹಾಸಿಕ ಪ್ರವಾಸಿ ತಾಣವಾಗಿರೋ ಮಲೆ ಮಹದೇಶ್ವರ ದೇಗುಲದ ಖಜಾನೆಯಲ್ಲಿದ್ದ 400 ಕೆಜಿ ಅನುಪಯುಕ್ತ ಬೆಳ್ಳಿಯನ್ನು ಕರಗಿಸಿ ಶುದ್ದ ಬೆಳ್ಳಿ ಗಟ್ಟಿಗಳನ್ನಾಗಿ ಪರಿವರ್ತಿಸುವ
ಆರಂಭಗೊಂಡಿದೆ.

ಮಹದೇಶ್ವರನಿಗೆ ಬೆಳ್ಳಿ ರಥ ನಿರ್ಮಿಸಲು ಈಗಾಗಲೇ ನಿರ್ಧರಿಸಲಾಗಿದ್ದು ಇದಕ್ಕೆ ಬೇಕಾಗುವ ಬೆಳ್ಳಿಯನ್ನು ಭಕ್ತರಿಂದ ಕಾಣಿಕೆ ರೂಪದಲ್ಲಿ ಪಡೆಯಲು ಮಲೆ ಮಹದೇಶ್ವರಸ್ವಾಮಿ‌ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ನಿರ್ಧರಿಸಿ ಆ ಕಾರ್ಯವೂ ನಡೆಯುತ್ತಿದೆ. ದೇಗುಲದ ಖಜಾನೆ‌ಯಲ್ಲಿರುವ ಬೆಳ್ಳಿ ವಸ್ತುಗಳನ್ನು‌ ಕರಗಿಸಿ ಅದನ್ನೂ ರಥದ ನಿರ್ಮಾಣಕ್ಕೆ ಬಳಸಿಕೊಳ್ಳಲು ಬೆಳ್ಳಿ ಕರಗಿಸುವ ಪರಿಣಿತರನ್ನು ದೇವಾಲಯಕ್ಕೇ ಕರೆತರಲಾಗಿದೆ.

ಸಾಲೂರು ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಅವರ ಸಮಕ್ಷಮದಲ್ಲಿ ಬೆಳ್ಳಿ ಕರಗಿಸಿ ಶುದ್ದ ಬೆಳ್ಳಿಗಟ್ಟಿಗಳನ್ನು ಮಾಡುವ ಕಾರ್ಯಕ್ಕೆ ಚಾಲನೆ ನೀಡಿದೆ. ಇದರಲ್ಲಿ ಸುಮಾರು ನಾಲ್ಕು ಕ್ವಿಂಟಾಲ್ನಷ್ಟು ಬೆಳ್ಳಿ ವಸ್ತುಗಳಿದ್ದು ಇದನ್ನು ಕರಗಿಸಿ ಶುದ್ದ ಬೆಳ್ಳಿ ಗಟ್ಟಿಗಳನ್ನು ಮಾಡುವ ಸಂಪೂರ್ಣ ಪ್ರಕ್ರಿಯೆಯನ್ನು ಪಾರದರ್ಶಕತೆಯಿಂದ ಮಾಡುವ ದೃಷ್ಟಿಯಿಂದ ವಿಡಿಯೋ ಚಿತ್ರೀಕರಣ ಮಾಡಲಾಗುತ್ತಿದೆ. ಇದರ ಜೊತೆಗೆ ಎರಡು ಸಿ.ಸಿ. ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.‌

ಬೆಳ್ಳಿ ಕರಗಿಸುವ ಪ್ರಕ್ರಿಯೆಗೆ 3 ರಿಂದ 4 ದಿನ ಹಿಡಿಯಲಿದೆ. ಇದರಿಂದ ಬರುವ ಗಟ್ಟಿ ಬೆಳ್ಳಿ ಶೇಕಡಾ 100 ಶುದ್ಧ‌ ಇರುವುದಿಲ್ಲ. ಸುಮಾರು ಶೇಕಡಾ 70 ರಿಂದ‌ 80 ಶುದ್ಧ ಬೆಳ್ಳಿ ಬರಬಹುದು” ಎಂದು ಮಲೈ ಮಹದೇಶ್ವರಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ‌ ತಿಳಿಸಿದರು.

ಬೆಳ್ಳಿಯ ಶುದ್ದತೆ ಪರೀಕ್ಷಿಸಲು ಮಾಡಲು ಪ್ರತ್ಯೇಕ ಉಪಕರಣವಿದ್ದು, ಶುದ್ದತೆ ಪರೀಕ್ಷಿಸಿದ ನಂತರ, ಈ ಗಟ್ಟಿ ಬೆಳ್ಳಿಯನ್ನು ಸರ್ಕಾರಿ ಸಂಸ್ಥೆಗೆ ನೀಡಿ, ಅದಕ್ಕೆ ಸರಿಸಮನಾದ ಶೇ.100 ಶುದ್ಧ ಬೆಳ್ಳಿಯನ್ನು ಪಡೆದು ದೇವಾಲಯದಲ್ಲಿ ಶೇಖರಿಸಿಡಲಾಗುವುದು ಎಂದು ಅವರು ಹೇಳಿದರು.

ಬೆಳ್ಳಿ ರಥ ನಿರ್ಮಾಣಕ್ಕೆ ಭಕ್ತರು ಈಗಾಗಲೇ‌ ಶುದ್ಧಬೆಳ್ಳಿ ಗಟ್ಟಿಗಳನ್ನೂ ನೀಡಿದ್ದು, ಅದನ್ನು ಈಗಾಗಲೇ ಸಂಗ್ರಹಿಸಿಡಲಾಗಿದೆ. ಈ ತಿಂಗಳ ಕೊನೆ ವಾರದಿಂದ ಬೆಳ್ಳಿ ತೇರು ನಿರ್ಮಾಣ ಪ್ರಕ್ರಿಯೆ ಪ್ರಾರಂಭಿಸಲಾಗುವುದು ಎಂದು ಜಯವಿಭವಸ್ವಾಮಿ ಹೇಳಿದರು. ದೇಗುಲದ ಖಜಾನೆಯಲ್ಲಿದ್ದ ಬೆಳ್ಳಿ ವಸ್ತುಗಳ ಪೈಕಿ ಅಪರೂಪದ ಹಳೆಯ ಕಾಲದ ನಾಣ್ಯಗಳು ಮತ್ತು ವಸ್ತು ಸಂಗ್ರಹಾಲಯದಲ್ಲಿ ಸಂಗ್ರಹಿಸಿ ಇಡಬಹುದಾದ ಕೆಲವು ವಸ್ತುಗಳು‌ ಪತ್ತೆಯಾಗಿವೆ.

ನೂರಾರು ವರ್ಷಗಳಷ್ಟು ಹಳೆಯದಾದ ಬೆಳ್ಳಿ ನಾಣ್ಯಗಳು, ನಾಲ್ಕೈದು ಶತಮಾನಗಳ ಹಿಂದಿನ ಅಪರೂಪದ ಬೆಳ್ಳಿ ವಸ್ತುಗಳು ಕಂಡು ಬಂದಿದ್ದು ಅವುಗಳನ್ನು ಬೇರ್ಪಡಿಸಿ, ಪಟ್ಟಿ ಮಾಡಿ ಮತ್ತೆ ಖಜಾನೆಯೊಳಗೆ‌ ಇಡಲಾಗುವುದು. ಇತಿಹಾಸ ಕಾರರಿಂದ ಈ ಬೆಳ್ಳಿ ನಾಣ್ಯಗಳು ಹಾಗು ವಸ್ತುಗಳು ಯಾವ ಕಾಲದ್ದೆಂದು ಪಟ್ಟಿ ಮಾಡಿಸಿ, ನಂತರದ‌ ದಿನದಲ್ಲಿ ವಸ್ತು ಸಂಗ್ರಹಾಲಯ ಮಾಡಿದಾಗ ಸಾರ್ವಜನಿಕರ‌‌ ದರ್ಶನಕ್ಕೆ ಪ್ರದರ್ಶನಕ್ಕೆ ಇಡಲು ಪ್ರಾಧಿಕಾರ ಚಿಂತನೆ ನಡೆಸಿದೆ.

2021ರ ಜುಲೈ ಅಥವಾ ಆಗಸ್ಟ್ ತಿಂಗಳಿನ ಒಳಗೆ ಪೂರ್ಣ ಪ್ರಮಾಣದಲ್ಲಿ ಬೆಳ್ಳಿ ತೇರು ನಿರ್ಮಿಸಿ ಲೋಕಾರ್ಪಣೆ ಮಾಡುವ ಗುರಿಯನ್ನು ಪ್ರಾಧಿಕಾರ ಹೊಂದಿದೆ. ಬೆಳ್ಳಿ ರಥ ನಿರ್ಮಾಣಕ್ಕೆ 500 ರಿಂದ 600 ಕೆ.ಜಿ.ಶುದ್ದ ಬೆಳ್ಳಿ ಬೇಕಾಗಬಹುದು ಎಂದು ಅಂದಾಜಿಸಲಾಗಿದ್ದು ಭಕ್ತರು ಈಗಲೂ ಸಹಾ ಶುದ್ಧ ಬೆಳ್ಳಿಯನ್ನು ಕೊಡುಗೆಯನ್ನಾಗಿ ನೀಡಬಹುದು. ಇದಕ್ಕೆ ಯಾವುದೇ ಊರಿನಲ್ಲಿ ಪ್ರತಿನಿಧಿ ಅಥವಾ‌ ಏಜೆಂಟ್ ನೇಮಿಸಿರುವುದಿಲ್ಲ. ನೇರವಾಗಿ ದೇವಾಲಯಕ್ಕೆ ಬಂದು ದೇವಾಲಯದ ಪಾರುಪತ್ತೇಗಾರರಿಗೆ ನೀಡಿ ರಸೀದಿ ಪಡೆಯಬೇಕು ಎಂದು ಮಲೈ ಮಹದೇಶ್ವರಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳು ತಿಳಿಸಿದ್ದಾರೆ.

Exit mobile version