ನಡು ರಸ್ತೆಯಲ್ಲಿದ್ದ ವಯೋವೃದ್ದೆ ಸಹಾಯಕ್ಕೆ ಬಂದ ಸ್ಥಳೀಯರು

ಬೆಳ್ತಂಗಡಿ, ಫೆ. 02: 5 ಜನ ಮಕ್ಕಳಿದ್ದರೂ ವಯೋ ವೃದ್ಧ ತಾಯಿಯನ್ನು ಮನೆ ಮಂದಿ ರಸ್ತೆಯಲ್ಲೇ ಬಿಟ್ಟು ಹೋಗಿರುವ ಘಟನೆ ಬೆಳ್ತಂಗಡಿಯ ಕಳಿಯದ ನಾಳ ಎಂಬಲ್ಲಿ ನಡೆದಿದೆ.

ವಿಪರ್ಯಾಸವೆಂದರೆ, ಈ ವೃದ್ಧೆ ತಾಯಿಯ ಮಕ್ಕಳ ಪೈಕಿ ಒಬ್ಬರು ಆಶಾ ಕಾರ್ಯಕರ್ತೆಯಾಗಿದ್ದು, ಪುತ್ರನೊಬ್ಬ ಪೊಲೀಸ್ ಸಿಬ್ಬಂದಿಯಾಗಿ ಸೇವೆಯಲ್ಲಿದ್ದಾನೆ ಎಂದು ತಿಳಿದುಬಂದಿದೆ. ಈ ವೃದ್ಧೆಗೆ ಮೂವರು ಪುತ್ರರು ಹಾಗೂ ಇಬ್ಬರು ಪುತ್ರಿಯರಿದ್ದಾರೆ. ಒಬ್ಬ ಪುತ್ರ ಮಂಗಳೂರಿನಲ್ಲಿ ಪೊಲೀಸ್ ಆಗಿ ಕರ್ತವ್ಯ ‌ನಿರ್ವಹಿಸುತ್ತಿದ್ದಾರೆ. ಇನ್ನಿಬ್ಬರು ಪುತ್ರರು ಮೇಸ್ತ್ರಿ ಕೆಲಸ ಮಾಡುತ್ತಿದ್ದಾರೆ. ಪುತ್ರಿಯರಲ್ಲಿ ಒಬ್ಬರು ಗೃಹಿಣಿಯಾಗಿದ್ದು, ಮತ್ತೊಬ್ಬರು ಆಶಾ ಕಾರ್ಯಕರ್ತೆಯಾಗಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ. ವೃದ್ಧೆಯ ಮಕ್ಕಳ ಅಮಾನವೀಯ ‌ನಡೆಗೆ ಸಾರ್ವಜನಿಕರಿಂದ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

ವೃದ್ಧೆಯನ್ನು ಬಿಟ್ಟು ಹೋಗಿರುವ ಬಗ್ಗೆ ದ.ಕ ಜಿಲ್ಲಾ 112 ಸಹಾಯವಾಣಿಗೆ ಕರೆ ಬಂದಿದ್ದು, ತಕ್ಷಣ ತುರ್ತು ಸ್ಪಂದನ ವಾಹನ ಸ್ಥಳಕ್ಕೆ ತೆರಳಿ ವೃದ್ಧೆಯನ್ನು ರಕ್ಷಿಸಿದೆ. ಮನೆಯವರಿಗೆ ಸೂಕ್ತ ಮಾಹಿತಿ ನೀಡಿ ವೃದ್ಧೆಯನ್ನು ಅವರ ಪುತ್ರಿಯ ಮನೆಗೆ ಕಳುಹಿಸಲಾಗಿದೆ‌. ಮನೆಯವರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕಾಗಿ ಪ್ರಕರಣವನ್ನು ಬೆಳ್ತಂಗಡಿ ಠಾಣೆಗೆ ಹಸ್ತಾಂತರಿಸಲಾಗಿದೆ.

Exit mobile version