ಕಿಟಕಿಯಲ್ಲಿ ಬಿರುಕು, ತುರ್ತು ಭೂಸ್ಪರ್ಶ ಮಾಡಿದ ಸೌದಿಗೆ ಹೊರಟಿದ್ದ ವಿಮಾನ

ಸಾಂದರ್ಭಿಕ ಚಿತ್ರ

ಕೇರಳ, ಜು. 31: ಸೌದಿ ಅರೇಬಿಯಾಕ್ಕೆ ತೆರಳುತ್ತಿದ್ದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನವು ಶನಿವಾರ ತಿರುವನಂತಪುರದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.

ವಿಮಾನವು ತಿರುವನಂತಪುರದಿಂದ ಶನಿವಾರ ಬೆಳಿಗ್ಗೆ 7.52ಕ್ಕೆ ಟೇಕ್‌ ಆಫ್‌ ಆಗಿತ್ತು. ಆದರೆ, ವಿಮಾನದ ಕಿಟಕಿಯೊಂದರಲ್ಲಿ ಬಿರುಕು ಪತ್ತೆಯಾಯಿತು. ಹೀಗಾಗಿ, ವಿಮಾನವು ತುರ್ತು ಭೂಸ್ಪರ್ಶಕ್ಕಾಗಿ ಒಂದು ಗಂಟೆಯೊಳಗೆ ಇದೇ ವಿಮಾನ ನಿಲ್ದಾಣಕ್ಕೆ ಹಿಂತಿರುಗಿದೆ. 8.50ಕ್ಕೆ ವಿಮಾನ ಭೂಸ್ಪರ್ಶ ಮಾಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಕೋವಿಡ್‌–19ನಿಂದಾಗಿ ಅಂತರರಾಷ್ಟ್ರೀಯ ಪ್ರಯಾಣದ ಮೇಲೆ ಹೇರಿರುವ ನಿರ್ಬಂಧದಿಂದಾಗಿ ವಿಮಾನದಲ್ಲಿ ಯಾವುದೇ ಪ್ರಯಾಣಿಕರು ಇರಲಿಲ್ಲ. ಈ ವಿಮಾನದಲ್ಲಿ ಸರಕುಗಳು ಮತ್ತು ಎಂಟು ಸಿಬ್ಬಂದಿ ಇದ್ದರು.

ಪೈಲಟ್‌ಗಳು ಸೇರಿದಂತೆ ವಿಮಾನದಲ್ಲಿದ್ದ ಎಲ್ಲಾ ಸಿಬ್ಬಂದಿ ಸುರಕ್ಷಿತರಾಗಿದ್ದಾರೆ. ಟೇಕ್‌ ಆಫ್‌ಗಿಂತ ಮುನ್ನ ವಿಮಾನ ಪರಿಶೀಲನೆ ನಡೆಸಿದಾಗ, ಯಾವುದೇ ಬಿರುಕುಗಳಿರಲಿಲ್ಲ. ಹಾಗಾಗಿ, ಟೇಕ್‌ ಆಫ್‌ ವೇಳೆ ಈ ಬಿರುಕು ಉಂಟಾಗಿರಬಹುದು ಎಂದು ತಿರುವನಂತಪುರ ವಿಮಾನ ನಿಲ್ದಾಣದ ನಿರ್ದೇಶಕ ಸಿ.ವಿ. ರವೀಂದ್ರನ್‌ ಹೇಳಿದ್ದಾರೆ.

Exit mobile version