ಇಂಜಿನಿಯರಿಂಗ್ ಕಾಲೇಜುಗಳ ಶುಲ್ಕ ಹೆಚ್ಚಳವಿಲ್ಲ – ಡಾ. ಅಶ್ವತ್ಥ್ ನಾರಾಯಣ್

ಬೆಂಗಳೂರು ಸೆ 29 : ಕೊರೊನಾ ಹಿನ್ನಲೆಯಲ್ಲಿ ಪ್ರಸಕ್ತ ಸಾಲಿನ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ ಶುಲ್ಕ ಹೆಚ್ಚಳವಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ್  ನಾರಾಯಣ್ ತಿಳಿಸಿದ್ದಾರೆ  

ಈ ಬಗ್ಗೆ ಅನುದಾನರಹಿತ ಎಂಜಿನಿಯರಿಂಗ್ ಕಾಲೇಜುಗಳ ಆಡಳಿತ ಮಂಡಳಿಗಳ ಒಕ್ಕೂಟ ಮತ್ತು ಭಾಷಾ ಹಾಗೂ ಧಾರ್ಮಿಕ ಅಲ್ಪಸಂಖ್ಯಾತ ವೃತ್ತಿಪರ ಕಾಲೇಜುಗಳ ಆಡಳಿತ ಮಂಡಳಿಗಳ ಒಕ್ಕೂಟದ ಪ್ರತಿನಿಧಿಗಳ ಜತೆ ಬುಧವಾರ ಸಭೆ ನಡೆಸಿದ ಬಳಿಕ ಅವರು ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.

ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳ ಆಡಳಿತ ಮಂಡಳಿಯವರು ಶೇಕಡ 30ರಷ್ಟು ಶುಲ್ಕ ಹೆಚ್ಚಳಕ್ಕೆ ಬೇಡಿಕೆ ಇಟ್ಟಿದ್ದರು. ಆದರೆ, ಸರ್ಕಾರ ಅದನ್ನು ಒಪ್ಪಿಕೊಂಡಿಲ್ಲ. ಪ್ರವೇಶ ಶುಲ್ಕದಲ್ಲಿ ಯಾವುದೇ ಬದಲಾವಣೆಯೂ ಇರುವುದಿಲ್ಲ ಎಂದರು.

ಜೊತೆಗೆ ಕಾಲೇಜು ಆಡಳಿತ ಮಂಡಳಿಗಳು ಇತರ ಶುಲ್ಕದ ಹೆಸರಿನಲ್ಲಿ ವಿದ್ಯಾರ್ಥಿಗಳಿಂದ ಹೆಚ್ಚು ಹಣ ಪಡೆಯುವಂತಿಲ್ಲ. ಇತರ ಶುಲ್ಕ 120,000 ಮೀರುವಂತಿಲ್ಲ ಎಂದು ಸಚಿವರು ತಿಳಿಸಿದರು. ಇತರ ಶುಲ್ಕದ ವಿವರವನ್ನು ಎಲ್ಲ ಕಾಲೇಜುಗಳು ಕಡ್ಡಾಯವಾಗಿ ಕರ್ನಾಟ ಪರೀಕ್ಷಾ ಪ್ರಾಧಿಕಾರಕ್ಕೆ ಸಲ್ಲಿಸಬೇಕು. ಪ್ರಾಧಿಕಾರದ ಮೂಲಕವೇ ಇತರ ಶುಲ್ಕ ಪಾವತಿಸಬೇಕು. ಬಳಿಕ ಆಯಾ ಕಾಲೇಜುಗಳಿಗೆ ವರ್ಗಾವಣೆ ಮಾಡಲಾಗುತ್ತದೆ ಎಂದರು.

ಹಾಸ್ಟೆಲ್ ಮತ್ತು ವಾಹನ ಸೌಲಭ್ಯದ ಶುಲ್ಕವನ್ನು ಮಾತ್ರ ಕಾಲೇಜುಗಳು ನೇರವಾಗಿ ಸಂಗ್ರಹಿಸಬಹುದು. ಅತ್ಯಾಧುನಿಕ ಪ್ರಯೋಗಾಲಯ ಮತ್ತು ವಿಶೇಷ ಕೋರ್ಸ್ ಸೌಲಭ್ಯ ಇದ್ದಲ್ಲಿ ಈ ಕುರಿತು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಮೂಲಕ ಮೌಲ್ಯಮಾಪನ ನಡೆಸಿ ಶುಲ್ಕ ನಿಗದಿ ಮಾಡಬೇಕು. ಅದನ್ನೂ ಪ್ರಾಧಿಕಾರದ ಮೂಲಕವೇ ಪಡೆಯಬೇಕು ಎಂದರು. ಜೊತೆಗೆ ಸ್ಕಿಲ್ ಟ್ರೈನಿಂಗ್ ಸಂಬಂಧ ಪಡೆಯುವ ಶುಲ್ಕವೂ ಸಹ 20 ಸಾವಿರ ರು. ಮೀರಬಾರದು ಎಂದು ಕಾಲೇಜು ಆಡಳಿತ ಮಂಡಳಿಗಳಿಗೆ ಸಚಿವರು ಖಡಕ್ ಸೂಚನೆ ನೀಡಿದ್ದಾರೆ. ನೀಟ್ ಪರೀಕ್ಷೆಯ ಮೂಲಕ ವೈದ್ಯಕೀಯ ಶಿಕ್ಷಣ ಸೀಟುಗಳ ಹಂಚಿಕೆ ಮುಗಿದ ಬಳಿಕವೇ ಎಂಜಿನಿಯರಿಂಗ್ ಸೀಟುಗಳ ಹಂಚಿಕೆಗೆ ಕೌನ್ಸೆಲಿಂಗ್ ನಡೆಸಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.

ಮೊದಲ ಬಾರಿಗೆ ಕನ್ನಡದಲ್ಲಿ ಎಂಜಿನಿಯರಿಂಗ್ ಶಿಕ್ಷಣ : ಪ್ರಸಕ್ತ ಸಾಲಿನಿಂದ  ಇಂಜಿನಿಯರಿಂಗ್ ತರಗತಿಗಳನ್ನು ಕನ್ನಡ ಮಾಧ್ಯಮದಲ್ಲಿ ಮಾಡಲು ರಾಜ್ಯದ ನಾಲ್ಕು ಕಾಲೇಜುಗಳು ಮುಂದೆ ಬಂದಿದೆ. ಇಲ್ಲಿ ಕನ್ನಡದಲ್ಲಿ ಇಂಜಿನಿಯರಿಂಗ್ ಶಿಕ್ಷಣ ಪಡೆದುಕೊಳ್ಳಬಹುದಾಗಿದೆ ಎಂದು ಉನ್ನತ ಶಿಕ್ಷಣ ಸಚಿವರಾದ ಅಶ್ವತ್ಥ ನಾರಾಯಣ್ ತಿಳಿಸಿದರು. 

ಬಾಲ್ಕಿಯ ಖಂಡ್ರೆ ಕಾಲೇಜು, ಎಸ್ ಜೆ ಸಿ  ಚಿಕ್ಕಬಳ್ಳಾಪುರ, ಮಹಾರಾಜ – ಮೈಸೂರು,  ವಿಜಯಪುರದ ಬಿ ಎಲ್ ಡಿ ಕಾಲೇಜುಗಳಲ್ಲಿ ಮೂವತ್ತು ಪ್ರತಿಶತ ಕನ್ನಡ ಮಾಧ್ಯಮಕ್ಕೆ ಸೀಟ್ ನೀಡುವುದಾಗಿ ಭರವಸೆ ನೀಡಿವೆ ಎಂದು ಸಚಿವರು ಸ್ಪಷ್ಟ ಪಡಿಸಿದ್ದಾರೆ.

Exit mobile version