Telangana: ‘ಹೈದರಾಬಾದ್’ (Hyderabad) ಎಂಬ ರಾಜಧಾನಿಯ ಹೆಸರನ್ನು ಬಿಜೆಪಿಯು ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ ತೆಲಂಗಾಣ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ‘ಭಾಗ್ಯ ನಗರ’ ಎಂದು ಮರು ನಾಮಕರಣ ಮಾಡುವುದಾಗಿ ತೆಲಂಗಾಣ ಬಿಜೆಪಿ (BJP) ಅಧ್ಯಕ್ಷ ಹಾಗೂ ಕೇಂದ್ರ ಸಚಿವ ಜಿ. ಕಿಶನ್ ರೆಡ್ಡಿ ಭರವಸೆ ನೀಡಿದ್ದಾರೆ. ಸೋಮವಾರ ಹೈದರಾಬಾದ್ನಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡುವ ವೇಳೆ ಕಿಶನ್ ರೆಡ್ಡಿ ಈ ಭರವಸೆ ನೀಡಿದ್ಧಾರೆ.
ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಕಿಶನ್ ರೆಡ್ಡಿ (Kishan Reddy), ತೆಲಂಗಾಣ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ನಾವು ಖಂಡಿತವಾಗಿಯೂ ಹೈದರಾಬಾದ್ ಹೆಸರನ್ನು ಬದಲಿಸುತ್ತೇವೆ. ಏಕೆಂದರೆ, ಈ ಹೈದರ್ ಯಾರು? ಆತನ ಹೆಸರು ನಮಗೆ ಏಕೆ? ಹೈದರ್ (Hyder) ಎಲ್ಲಿಂದ ಬಂದಿದ್ದ? ಹೈದರಾಬಾದ್ ಹೆಸರು ಯಾರಿಗೆ ಬೇಕು? ಇದೇ ಕಾರಣದಿಂದಾಗಿ ಬಿಜೆಪಿ ಅಧಿಕಾರಕ್ಕೆ ಬಂದರೆ ಹೈದರಾಬಾದ್ ಹೆಸರು ಬದಲಾಗಲಿದೆ.
ಹೈದರ್ ಹೆಸರನ್ನು ತೆಗೆದು ಹಾಕಿ ನಾವು ಭಾಗ್ಯನಗರ ಎಂದು ಹೆಸರು ಬದಲಿಸಲಿದ್ದೇವೆ ಎಂದು ಕಿಶನ್ ರೆಡ್ಡಿ ವಿವರಿಸಿದರು. ಅಷ್ಟೇ ಅಲ್ಲ, ಹೈದರಾಬಾದ್ ನಗರದ ಹೆಸರನ್ನು ಏಕೆ ಬದಲಿಸಬಾರದು ಎಂದೂ ಕಿಶನ್ ರೆಡ್ಡಿ ಪ್ರಶ್ನಿಸಿದರು. ಮದ್ರಾಸ್ (Madras), ಬಾಂಬೆ ಹಾಗೂ ಕಲ್ಕತ್ತಾ ನಗರಗಳ ಹೆಸರನ್ನು ಬದಲಿಸಲಾಗಿದ್ದು, ಅದೇ ರೀತಿಯಲ್ಲೇ ಹೈದರಾಬಾದ್ ಹೆಸರನ್ನೂ ಬದಲಾವಣೆ ಮಾಡಲಾಗುವುದು ಎಂದು ಹೇಳಿದ್ದಾರೆ.
ಮದ್ರಾಸ್ ಅನ್ನೋ ಹೆಸರನ್ನು ಬಿಜೆಪಿ ಬದಲಾವಣೆ ಮಾಡಿರಲಿಲ್ಲ. ಅದನ್ನು ಬದಲಿಸಿದ್ದು ಅಂದಿನ ಡಿಎಂಕೆ (DMK) ಸರ್ಕಾರ, ಹಾಗೂ ಈಗಾಗಲೇ ಮದ್ರಾಸ್ ಹೆಸರನ್ನು ಚೆನ್ನೈ ಎಂದು ಬದಲಿಸಲಾಗಿದ್ದು, ಬಾಂಬೆ ಅನ್ನೋದು ಮುಂಬೈ (Mumbai) ಆಗಿದೆ. ಕಲ್ಕತ್ತಾ ಅನ್ನೋದು ಕೋಲ್ಕತ್ತಾ ಎಂದು ಬದಲಾವಣೆಯಾಗಿದೆ. ರಾಜ ಪಥವು ಕರ್ತವ್ಯ ಪಥವಾಗಿ ಬದಲಾಗಿದೆ. ಹೀಗಿರುವಾಗ ಹೈದರಾಬಾದ್ ಹೆಸರು ಭಾಗ್ಯ ನಗರ ಏಕೆ ಆಗಬಾರದು? ಏನು ತಪ್ಪು ಎಂದು ಪ್ರಶ್ನಿಸಿದ್ದಾರೆ.
ಭವ್ಯಶ್ರೀ ಆರ್ ಜೆ