ಅಮರಾವತಿ, ಅ.13: ಬಂಗಾಳ ಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದಿಂದಾಗಿ ಆಂಧ್ರ – ಕರಾವಳಿ ಜಿಲ್ಲೆಗಳಲ್ಲಿ ನಿನ್ನೆಯಿಂದಲೇ ಭಾರೀ ಪ್ರಮಾಣದ ಬಿರುಗಾಳಿ ಸಹಿತ ಧಾರಾಕಾರ ಮಳೆಯಾಗಿದೆ.
ಭಾರೀ ಬಿರುಗಾಳಿಯಿಂದಾಗಿ ವಿಶಾಖಪಟ್ಟಣಂ ನಗರದ ಟೆನ್ನೆಟಿ ಪಾರ್ಕ್ ಬೀಚ್ ಬಳಿ ಸರಕು ಸಾಗಣೆ ನೌಕೆಯೊಂದು ಕೊಚ್ಚಿಕೊಂಡು ಹೋಗಿದೆ. ಪೂರ್ವ ಗೋದಾವರಿ ಜಿಲ್ಲೆಯ ಕಾಕಿನಾಡ ಸಮೀಪದ ಕರಾವಳಿಯಲ್ಲಿ ಪ್ರಬಲ ವಾಯುಭಾರ ಕುಸಿತ ಉಂಟಾಗಿದ್ದು, ಅನೇಕ ಜಿಲ್ಲೆಗಳಲ್ಲಿ ಧಾರಾಕಾರ ವರ್ಷಧಾರೆಯಾಗಿದೆ.
ರಾಜ್ಯದ 100ಕ್ಕೂ ಹೆಚ್ಚು ಸ್ಥಳಗಳಲ್ಲಿ 11.5 ಸೆಂ.ಮೀನಿಂದ 24ಸೆಂ.ಮೀ ತನಕ ಭಾರೀ ಮಳೆಯಾಗಿದೆ. ಪೂರ್ವ ಗೋದಾವರಿ, ಪಶ್ಚಿಮ ಗೋದಾವರಿ, ಶ್ರೀಕಾಕುಳಂ, ವಿಜಯನಗರಂ, ವಿಶಾಖಪಟ್ಟಣಂ ಮತ್ತು ಕೃಷ್ಣಾ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಿದೆ.
ಭಾರೀ ಬಿರುಗಾಳಿ ಸಂಭವಿಸಿರುವುದರಿಂದ ವಿಶಾಖಪಟ್ಟಣಂ ನಗರದ ಟೆನ್ನೆಟ್ಟಿ ಪಾರ್ಕ್ ಬೀಚ್ ಬಳಿ ಸರಕು ಸಾಗಣೆ ನೌಕೆಯೊಂದು ಕೊಚ್ಚಿಕೊಂಡು ಹೋಗಿದೆ. ಮಳೆಯಿಂದಾಗಿ ಅನೇಕ ಸ್ಥಳಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ ಎಂದು ಮಾಹಿತಿ ಮೂಲಗಳು ತಿಳಿಸಿವೆ.