ಇಷ್ಟರ ಮಟ್ಟಿಗೆ ಕೊರೊನಾ ಸೋಂಕು ಹರಡಲು ಕಾರಣ ಏನು ಗೊತ್ತಾ? ಬಯಲಾಯಿತು ಸರ್ಕಾರದ ನಿರ್ಲಕ್ಷ್ಯ

ಕೋವಿಡ್ 19 ಸೋಂಕಿನಿಂದ ಬಳಲುತ್ತಿರುವ ರೋಗಿಗಳನ್ನು ಮನೆಗಳಲ್ಲಿ ಪ್ರತ್ಯೇಕವಾಗಿರಿಸಿದ್ದರೂ ವೈದ್ಯಕೀಯ ಸೂಚನೆ ಪ್ರಕಾರ ಶಿಷ್ಟಾಚಾರ ಅನುಸರಿಸುತ್ತಿಲ್ಲ ಎನ್ನುವ ಹೊಸ ಮಾಹಿತಿ ಹೊರಬಿದ್ದಿದೆ. ಸೋಂಕಿತರು ಮತ್ತು ಪ್ರಾಥಮಿಕ ಸಂಪರ್ಕದಲ್ಲಿರುವವರು ಶಿಷ್ಟಾಚಾರ ಅನುಸರಿಸದಿರುವುದೇ ಕರ್ನಾಟಕ ನಿರ್ಣಾಯಕ ಘಟ್ಟಕ್ಕೆ ತಲುಪಲು ಮೂಲ ಕಾರಣ ಎಂಬ ಅಂಶವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊರಗೆಡವಿದೆ.

ಅಲ್ಲದೆ ಮಾರ್ಚ್ 19ರಿಂದ 28ರ ವರೆಗೂ ಈ ಬಗ್ಗೆ ಮುಂಜಾಗರೂಕತೆ ವಹಿಸಿದ ಇಲಾಖೆ ಅಧಿಕಾರಿಗಳು ಇದೀಗ ನಿರ್ಣಾಯಕ ಘಟ್ಟಕ್ಕೆ ತಲುಪಿದ ನಂತರ ಪ್ರಾಥಮಿಕ ಸಂಪರ್ಕಗಳನ್ನು ಮನೆಯಿಂದ ಹೊರತು ಪಡಿಸಲು ಮುಂದಾಗಿದ್ದಾರೆ. ಇದು ಇಲಾಖೆ ಮಾತ್ರವಲ್ಲದೆ ರಾಜ್ಯ ಸರ್ಕಾರದ ಕೆಟ್ಟ ನಿರ್ಲಕ್ಷಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಕೋವಿಡ್ 19 ನ ಪ್ರಾಥಮಿಕ ಸಂಪರ್ಕವನ್ನು ಹೊಂದಿರುವ ವ್ಯಕ್ತಿಗಳ ಮೇಲ್ವಿಚಾರಣೆ ನಡೆಸುವಲ್ಲಿಯೂ ಸತತವಾಗಿ ವಿಫಲವಾಗಿದೆಯಲ್ಲದೆ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳುವಲ್ಲಿಯೂ ಎಡವಿ ಬಿದ್ದಿದೆ ಎಂಬುದನ್ನು ಮತ್ತೊಮ್ಮೆ ನಿರೂಪಿಸಿದೆ.

2020 ರ ಮಾರ್ಚ್ 28 ರಂದು ಮತ್ತೊಮ್ಮೆ ಬಿಗಿಯಾದ ಮಾರ್ಗಸೂಚಿಗಳನ್ನು ಹೊರಡಿಸಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತಾಲಯದ ಆಯುಕ್ತರು ಪ್ರಾಥಮಿಕ ಸಂಪರ್ಕವನ್ನು ಹೋಮ್ ಕ್ವಾರಂಟೈನ್ ಗೆ ಒಳ ಪಡಿಸುವುದು ಕಷ್ಟವಾಗುತ್ತಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಆಯುಕ್ತರು ಸೋಂಕು ಹರಡದಂತೆ ತಡೆಯುವುದು ಮತ್ತು ಸಾರ್ವಜನಿಕ ಹಿತಾಸಕ್ತಿ ಹಿನ್ನೆಲೆಯಲ್ಲಿ ಪ್ರಾಥಮಿಕ ಸಂಪರ್ಕಗಳನ್ನು ಸರಕಾರದ ಪ್ರತ್ಯೇಕ ಕ್ವಾರಂಟೀನ್ ಸೌಲಭ್ಯವಿರುವ ಕೇಂದ್ರಗಳ ಪ್ರತ್ಯೇಕ ಕೊಠಡಿಗಳಲ್ಲಿ ಇರಿಸಲು ನಿರ್ಧರಿಸಿದ್ದಾರೆ.

ಹಾಗೆಯೇ ಕೋವಿಡ್ ದೃಢಪಟ್ಟವರೊಂದಿಗೆ ಸಂಪರ್ಕದಲ್ಲಿದ್ದ ಪ್ರಾಥಮಿಕ ಸಂಪರ್ಕಿತರನ್ನು ಅವರ ಮನೆಯಿಂದ ಕ್ವಾರಂಟೈನ್ ಕೇಂದ್ರಗಳಿಗೆ ಸ್ಥಳಾಂತರ ಮಾಡಲು ಅಧಿಕಾರಿಗಳಿಗೆ ಆಯುಕ್ತರು ಸೂಚಿಸಿರುವುದು ಡಿಹೆಚ್ಓಗಳಿಗೆ ಬರೆದಿರುವ ಪತ್ರಗಳಿಂದ ತಿಳಿದುಬಂದಿದೆ.

ಅಲ್ಲದೇ ಸಾಮಾಜಿಕ ಅಂತರಕ್ಕೆ ಕೊಡುತ್ತಿರುವ ಒತ್ತನ್ನು ಶಾರೀರಿಕ ಅಂತರಕ್ಕೆ ಕೊಡುತ್ತಿಲ್ಲ ಇದು ಕೂಡ ವೈರಾಣು ಇನ್ನಷ್ಟು ವೇಗದಲ್ಲಿ ಹರಡಲು ಕಾರಣವಾಗಬಹುದೆಂಬ ಹೊಸ ಅಂಶವನ್ನು ಆರೋಗ್ಯ ಶಿಕ್ಷಣ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.

ಆರೋಗ್ಯ ಶಿಕ್ಷಣಾಧಿಕಾರಿಯವರೊಬ್ಬರು ಮಾತನಾಡಿ ಮನೆಗಳಲ್ಲಿ ಪ್ರತ್ಯೇಕವಾಗಿರಿಸಿರುವವರ ಸುರಕ್ಷತೆ ಹೇಗಿದೆ. ಹೇಗೆ ಇತರರಿಂದ ಅಂತರವನ್ನು ಕಾಪಾಡಿಕೊಳ್ಳಬೇಕು ಎಂಬ ಬಗ್ಗೆ ಸಮೀಕ್ಷೆ ನಡೆಸಲು ಮಾರ್ಗಸೂಚಿಗಳನ್ನೇ ಹೊರಡಿಸಿಲ್ಲ. ಹೇಗೆ ಸಮೀಕ್ಷೆ ಮಾಡಬೇಕು ಎಂಬ ಬಗ್ಗೆಯೂ ತರಬೇತಿಯನ್ನು ನೀಡಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

ಈಗ ಕಂಡು ಬಂದಿರುವ ಒಟ್ಟು ಪ್ರಕರಣಗಳ ಪೈಕಿ ಶೇಕಡ 25ರಷ್ಟು ಪ್ರಕರಣಗಳನ್ನು ಕೋವಿಡ್ 19 ಪ್ರಕರಣದ ಪ್ರಾಥಮಿಕ ಸಂಪರ್ಕಗಳೆಂದು ಪರಿಗಣಿಸಿದೆ. ಕರ್ನಾಟಕ ಸರ್ಕಾರದ ಈಗಿರುವ ಶಿಷ್ಟಾಚಾರದ ಪ್ರಕಾರ ಕೋವಿಡ್ 19 ಪಾಸಿಟಿವ್ ರೋಗಿಯ ಪ್ರಾಥಮಿಕ ಸಂಪರ್ಕವನ್ನು ಅವರ ಮನೆಗಳಲ್ಲಿ ಇರಿಸಬೇಕಾಗಿತ್ತು. ಹೋಮ್ ಕ್ವಾರಂಟೈನ್ ಗೆ ಒಳಗಾಗಿರುವ ವ್ಯಕ್ತಿಯ ವೈಯಕ್ತಿಕ ಶಿಸ್ತು ಅತ್ಯಂತ ನಿರ್ಣಾಯಕವಾಗಿದೆ.
ಪ್ರಾಥಮಿಕ ಸಂಪರ್ಕಗಳನ್ನು ಹೊಂದಿದ ವ್ಯಕ್ತಿಗಳು ಹೋಮ್ ಕ್ವಾರಂಟೈನ್ ಶಿಷ್ಟಾಚಾರವನ್ನು ಅನುಸರಿಸುತ್ತಿಲ್ಲ. ಇದು ಸೋಂಕು ಹರಡಲು ಮುಖ್ಯ ಕಾರಣವಾಗುತ್ತದೆ. ಇಂತಹ ಸ್ಥಿತಿಯಲ್ಲಿ ಪ್ರಾಥಮಿಕ ಸಂಪರ್ಕವನ್ನು ಹೋಮ್ ಕ್ವಾರಂಟೈನ್ ಗೆ ಒಳಪಡಿಸುವುದು
ಪಡಿಸುವುದು ಕಷ್ಟದ ಕೆಲಸವಾಗುತ್ತಿದೆ ಎಂದು ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ.

ಸೋಂಕು ಉಲ್ಬಣಗೊಳ್ಳುವ ಮುನ್ನವೇ ಎಚ್ಚೆತ್ತುಕೊಳ್ಳದ ಅಧಿಕಾರಶಾಹಿ ಸೋಂಕಿತರನ್ನು ಮತ್ತು ವಿದೇಶದಿಂದ ಬೆಂಗಳೂರು, ಮಂಗಳೂರು, ಹುಬ್ಬಳ್ಳಿ ಬೆಳಗಾವಿಗೆ ಆಗಮಿಸಿದ ಅಂದಾಜು 26000 ಮಂದಿಯನ್ನು ಮನೆಗೆ ಕಳಿಸದೆ ಪ್ರತ್ಯೇಕ ವಸತಿ ಸೌಕರ್ಯ ಕಲ್ಪಿಸಬೇಕಿತ್ತು. ಕೇವಲ ಸಂಶಯ ಇರುವ ಪ್ರಕರಣಗಳನ್ನು ಪರಿಗಣಿಸಿ ಉಳಿದವರನ್ನು ಮನೆಗೆ ಕಳುಹಿಸುವ ಮೂಲಕ ಇಲಾಖೆ ಅತಿ ದೊಡ್ಡ ಲೋಪವೆಸಗಿದೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

Exit mobile version