ಮೈಸೂರು, ಅ. 28: ರಾಜ್ಯದಲ್ಲಿ ಅನೇಕ ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಉತ್ತರ ಕರ್ನಾಟಕ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಈರುಳ್ಳಿ ಬೆಳಗಾರರಿಗೆ ಆತಂಕ ಎದುರಾಗಿದೆ. ಏಕೆಂದರೆ ಈರುಳ್ಳಿ ಬೆಳೆ ಹೊಲದಲ್ಲೇ ಕೊಳೆಯುವಂತಾಗಿದೆ. ಇದರಿಂದ ಬೆಲೆ ಕೆ.ಜಿಗೆ ₹ 100ರ ಗಡಿ ತಲುಪಿದೆ.
ಹಿಂಗಾರು ಮಳೆಗೂ ಮುನ್ನ ಅಂದರೆ ಸೆ.14ರವರೆಗೂ ಈರುಳ್ಳಿ ಬೇರೆಡೆ ರಫ್ತಾಗುತ್ತಿತ್ತು. ಇದೂ ಬೆಲೆ ಏರಿಕೆಗೆ ಒಂದು ಕಾರಣವಾಗಿತ್ತು. ಮಳೆರಾಯನ ಆರ್ಭಟದ ಬಳಿಕ ಈರುಳ್ಳಿ ರಫ್ತಿಗೆ ನಿಷೇಧ ಹೇರಿದರೂ ಅ.9ರಂದು ಕೆಲವು ತಳಿಯ ಈರುಳ್ಳಿ ರಫ್ತಿಗೆ ಅನುಮತಿ ನೀಡುವ ಮೂಲಕ ನಿರ್ಬಂಧ ಸಡಿಲಿಸಲಾಯಿತು.
ಇದರಿಂದ ಇಲ್ಲಿನ ಎಪಿಎಂಸಿ ಮಾರುಕಟ್ಟೆಗೆ ಈರುಳ್ಳಿ ಈ ತಿಂಗಳಿನಲ್ಲಿ ಹೆಚ್ಚಾಗಿ ಸಂಗ್ರಹವಾಗುತ್ತಿಲ್ಲ. ಮೊದಲಿಗಿಂತ ಸಂಗ್ರಹದ ಪ್ರಮಾಣದಲ್ಲಿ ಭಾರಿ ಕುಸಿತ ಕಂಡಿದೆ. ಹೀಗಾಗಿ, ಸಹಜವಾಗಿಯೇ ಬೆಲೆ ದುಬಾರಿಯಾಗಿದೆ ಎನ್ನಲಾಗುತ್ತಿದೆ.
ಚಿಲ್ಲರೆ ಮಾರುಕಟ್ಟೆಗಳ ದರವನ್ನು ಗಮನಿಸುವುದಾದರೆ, ಸಾಮಾನ್ಯ ದರ್ಜೆಯ ಈರುಳ್ಳಿ ದರ ಕೆ.ಜಿಗೆ ₹ 100 ಇದ್ದು, ಹಾಪ್ಕಾಮ್ಸ್ನಲ್ಲಿ ಇದರ ದರ ಕೆ.ಜಿಗೆ ₹ 82ರಿಂದ ₹ 85ರವರೆಗೂ ಇದೆ ಎಂದು ತಿಳಿದು ಬಂದಿದೆ.
ಅಧಿಕ ಮಾಸದ ನಂತರ ಮದುವೆ ಮೊದಲಾದ ಶುಭ ಸಮಾರಂಭಗಳು ಆರಂಭವಾಗಿದ್ದು, ಆಯೋಜಕರು ಈರುಳ್ಳಿ ಖರೀದಿಗಾಗಿ ಪರದಾಡುವಂತಾಗಿದೆ. ಈರುಳ್ಳಿ ಬೆಲೆ ಹೆಚ್ಚಳದಿಂದ ಗ್ರಾಹಕರು ಹೈರಾಣಾಗಿದ್ದಾರೆ. ನಷ್ಟದಿಂದ ಕಂಗೆಟ್ಟಿದ್ದ ಹೋಟೆಲ್ ಉದ್ಯಮದವರು ಈರುಳ್ಳಿ ಬೆಲೆ ಏರಿಕೆಯಿಂದ ಮತ್ತಷ್ಟು ನಷ್ಟಕ್ಕೆ ತುತ್ತಾಗಿದ್ದಾರೆ ಎಂದು ಎನ್ನಲಾಗುತ್ತಿದೆ.