ಬೆಂಗಳೂರು: ಸ್ಯಾಂಡಲ್ ವುಡ್ ನಟ ನಟಿಯರನ್ನು ಸುತ್ತಿಕೊಂಡ ಡ್ರಗ್ಸ್ ಉರುಳು ಈಗ ಕನ್ನಡದ ಕಿರುತೆರೆಯ ನಟ ನಟಿಯರನ್ನೂ ಸುತ್ತಲು ಪ್ರಾರಂಭಿಸಿದೆ. ಡ್ರಗ್ಸ್ ಪೆಡ್ಲರ್ ಗಳ ಮಾಹಿತಿಯನ್ನು ಆಧರಿಸಿ ಐಎಸ್ ಡಿ (ಆಂತರಿಕ ಸುರಕ್ಷಿತ ವಿಭಾಗದ) ಅಧಿಕಾರಿಗಳು ಕಿರುತೆರೆ ನಟಿ, ಬ್ರಹ್ಮಗಂಟು ಖ್ಯಾತಿಯ ಗೀತಾ ಭಾರತಿ ಭಟ್ ಮತ್ತು ಗಟ್ಟಿಮೇಳ ಧಾರವಾಹಿಯಲ್ಲಿ ಮಿಂಚಿದ ಸಹ ನಟ ಅಭಿಷೇಕ್ ಗೆ ಮಂಗಳವಾರ ಬೆಳಿಗ್ಗೆ 10 ಕ್ಕೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಐಎಸ್ಡಿ ನೋಟೀಸ್ ನೀಡಿದೆ.
ಬ್ರಹ್ಮಗಂಟು ದಾರಾವಾಹಿಯಲ್ಲಿ ಮುಖ್ಯಪಾತ್ರಧಾರಿಯಾಗಿ ಅಭಿನಯಿಸುತ್ತಿರುವ ಗೀತಾ ಭಾರತಿ ಭಟ್ ಐಎಸ್ ಡಿ ನೋಟೀಸ್ ಹಿನ್ನಲೆಯಲ್ಲಿ ಸಮಯಕ್ಕೆ ಸರಿಯಾಗಿ ವಿಚಾರಣೆಗೆ ಹಾಜರಾಗಿದ್ದಾರೆ, ಮಾದ್ಯಮದ ಜೊತೆ ಮಾತನಾಡಿದ ಗೀತಾ ‘ನಾನು ಅಪರಾಧಿಯಲ್ಲ’ ನಾನು ತಪ್ಪು ಮಾಡಿಲ್ಲ ಎಂದು ಹೇಳಿದ್ದಾರೆ.
ಗಟ್ಟಿಮೇಳ ದಾರಾವಾಹಿಯಲ್ಲಿ ವಿಕ್ರಾಂತ್ ಪಾತ್ರದಲ್ಲಿ ಅಭಿನಯಿಸುತ್ತಿರುವ ಅಭಿಷೇಕ್ ಅವರು ಐಎಸ್ ಡಿ ನೋಟೀಸ್ ಕೊಟ್ಟಿರುವ ಬಗ್ಗೆ ಸುದ್ದಿಗಾರರೊಂದಿಗೆ ಮಾತಾಡಿದ ಅಭಿಷೇಕ್, “ ವಿಚಾರಣೆಗೆ ನನ್ನನ್ನು ಕರೆದಿದ್ದಾರೆ. ಸದ್ಯ ಶೂಟಿಂಗ್ನಲ್ಲಿದ್ದೇನೆ. ಖಂಡಿತಾ ವಿಚಾರಣೆ ಹಾಜರಾಗುತ್ತೇನೆ ಎಂದಿದ್ದಾರೆ. ಇವರು ಇಂದು ಬೆಳಗ್ಗೆ 11 ರ ಸುಮಾರಿಗೆ ವಿಚಾರಣೆಗೆ ಹಾಜರಾಗಿದ್ದಾರೆ ಎಂದು ತಿಳಿದು ಬಂದಿದೆ.