ತಲಕಾಡು, ಡಿ. 13: ತಲಕಾಡು ಶ್ರೀ ವೈದ್ಯನಾಥೇಶ್ವರ ದೇವಾಲಯಕ್ಕೆ ಭಾನುವಾರ ಭೇಟಿ ನೀಡಿದ ಸಚಿವ ಎಸ್.ಟಿ. ಸೋಮಶೇಖರ್, ಪಂಚಲಿಂಗ ದರ್ಶನ ಜಾತ್ರಾ ಮಹೋತ್ಸವ 2020ರ ಸಿದ್ಧತೆ ಪರಿಶೀಲಿಸಿದರು.
ಬಳಿಕ ವೈದ್ಯನಾಥೇಶ್ವರ ದೇಗುಲಕ್ಕೆ ತೆರಳಿ ಪೂಜೆ ನರೆವೇರಿಸಿದ ಸಚಿವರು, ಕಾರ್ಯಕ್ರಮವು ನಿರ್ವಿಘ್ನವಾಗಿ ನೆರವೇರಲಿ, ನಾಡಿನ ಸಮಸ್ತ ಜನತೆಗೆ ದೇವರು ಒಳಿತನ್ನುಂಟು ಮಾಡಲಿ ಎಂದು ಪ್ರಾರ್ಥಿಸಿದರು.
ಸೋಮವಾರ ಕುಹುಯೋಗ ಜ್ಯೇಷ್ಠ ನಕ್ಷತ್ರ ಮುಂಜಾನೆ 4.30ರಿಂದ 7.30ರೊಳಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ಪಂಚಲಿಂಗ ದರ್ಶನ ಮಹೋತ್ಸವದ ಮಹಾಪೂಜೆ, ಮಾಹಾಭಿಷೇಕದೊಂದಿಗೆ ಪ್ರಾರಂಭಗೊಳ್ಳಲಿದೆ. ಈ ಹಿಂದೆ 2013ರಲ್ಲಿ ಪಂಚಲಿಂಗ ದರ್ಶನ ಮಹೋತ್ಸವ ನಡೆದಿತ್ತು. ಈಗ ಏಳು ವರ್ಷದ ನಂತರ ಬಂದ ಮಹೋತ್ಸವದಲ್ಲಿ ಸ್ವಾಮಿ ವೈದ್ಯನಾಥೇಶ್ವರನು ನಾಡಿನ ಸಮಸ್ತ ಜನತೆಗೆ ಸನ್ಮಂಗಳವನ್ನುಂಟು ಮಾಡಲಿ, ಕರೋನಾ ಸಂಕಷ್ಟವನ್ನು ದೂರ ಮಾಡಲಿ, ಸಕಲರಿಗೂ ಆರೋಗ್ಯವನ್ನು ಕರುಣಿಸಲಿ ಎಂದು ಭಗವಂತನಲ್ಲಿ ರಾಜ್ಯ ಸರ್ಕಾರದ ಪರವಾಗಿ ಸಚಿವರಾದ ಸೋಮಶೇಖರ್ ಅವರು ಪ್ರಾರ್ಥಿಸಿದರು.
ಕಡ್ಡಾಯ ಮಾಸ್ಕ್ ಧರಿಸಿ:
ಕೋವಿಡ್ 19ರ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಹಾಗೂ ಸ್ಯಾನಿಟೈಸ್ ಬಳಸಿ ಮಹಾಜನತೆಯು ಪಂಚಲಿಂಗಗಳ ದರ್ಶನ ಪಡೆಯಲು ಸಚಿವರು ಮನವಿ ಮಾಡಿದರು. ಪೊಲೀಸ್ ಸಿಬ್ಬಂದಿಯೊಂದಿಗೆ ಸಹಕರಿಸುವಂತೆಯೂ ಇದೇ ಸಂದರ್ಭದಲ್ಲಿ ಜನತೆಗೆ ಮನವಿ ಮಾಡಿದರು.