ದಿಗಂತ್ ಹರಿಪ್ರಿಯಾ ಚಿತ್ರದ ಮುಹೂರ್ತ

ಬೆಂಗಳೂರು, ಅ. 17: ದಿಗಂತ್ ಮತ್ತು ಹರಿಪ್ರಿಯ ಜೋಡಿಯ ಹೊಸ ಚಿತ್ರದ ಮುಹೂರ್ತ ಇಂದು ಮುಂಜಾನೆ ನೆರವೇರಿದ್ದು, ಇನ್ನೂ ಹೆಸರಿಡದ ಚಿತ್ರದ ಮಾಧ್ಯಮಗೋಷ್ಠಿಯು ಅರಮನೆ ಮೈದಾನದ ‘ಗಾಯತ್ರಿ ವಿಹಾರ’ದ ಆವರಣದೊಳಗೆ ಅದ್ದೂರಿಯಾಗಿ ನೆರವೇರಿತು.

ಚಿತ್ರದ ನಾಯಕಿ ಹರಿಪ್ರಿಯಾ ಮಾತನಾಡಿ “ಇದು ತೆಲುಗು ಚಿತ್ರದ ರಿಮೇಕ್. ಅನಿರೀಕ್ಷಿತವಾಗಿ ನಡೆದ ಕೊಲೆಯೊಂದರ ಸುತ್ತ ಹೆಣೆಯಲಾದ ಕಥೆ. ಒಂದೊಂದು ಪಾತ್ರವು ಕೂಡ ಅನುಮಾನಾಸ್ಪದವಾಗಿ ಬಂದು ಹೋಗುತ್ತದೆ. ಚಿತ್ರದಲ್ಲಿ ಹಲವು ತಿರುವುಗಳು ಬರುತ್ತವೆ. ಆತಂಕ, ಕುತೂಹಲ ಹೆಜ್ಜೆ ಹೆಜ್ಜೆಗೂ ಸಾಗುತ್ತಲೇ ಹೋಗುತ್ತದೆ” ಎಂದರು. ನಾಯಕ ದಿಗಂತ್ “ಚಿತ್ರೋದ್ಯಮ ಸಂಕಷ್ಟದಲ್ಲಿರುವ ಇಂತಹ ಸಮಯದಲ್ಲಿ ಚಿತ್ರ ಮಾಡುತ್ತಿರುವುದು ಪ್ರಶಂಸಾರ್ಹ. ಇದು ಹಲವಾರು ಭಾಷೆಗಳಲ್ಲಿ ಬಂದಿರುವ ಸಿನಿಮಾ. ನನಗೆ ಎರಡು ಶೇಡ್ಸ್ ಇವೆ. ಅದು ಯಾವುದು ಎಂದು ರಿವೀಲ್ ಮಾಡುವಂತಿಲ್ಲ. ಹೈದರಾಬಾದ್, ತೆಲಂಗಾಣದಲ್ಲಿ ಚಿತ್ರೀಕರಣ ಈಗಾಗಲೇ ಶುರು ಆಗಬೇಕಿತ್ತು. ಅಲ್ಲಿ ಮಳೆ ಇರುವುದರಿಂದ ಶೂಟಿಂಗ್ ಮುಂದೆ ಹಾಕಲಾಗಿದೆ. ಮೂಲ ಚಿತ್ರಕ್ಕಿಂತ ಸಣ್ಣ ಪುಟ್ಟ ಬದಲಾವಣೆ ಮಾಡಿರುವುದು ಖುಷಿಯಿದೆ” ಎಂದರು.

ರಾಜೇಶ್ ಅಗರ್ವಾಲ್ ಮತ್ತು ಡಿ.ಜಯಪ್ರಕಾಶ್ ರಾವ್ ಸೇರಿ ನಿರ್ಮಿಸುತ್ತಿರುವ ಈ ಚಿತ್ರವನ್ನು ಅಶೋಕ್ ತೇಜ ನಿರ್ದೇಶಿಸುತ್ತಿದ್ದಾರೆ. ಈಗಾಗಲೇ ತೆಲುಗಿನಲ್ಲಿ ಒಂದು ಚಿತ್ರವನ್ನು ನಿರ್ದೇಶಿಸಿರುವ ಅಶೋಕ್ ತೇಜ ಅವರಿಗೆ ಇದು ಪ್ರಥಮ ಕನ್ನಡ ಚಿತ್ರ. ತಾಂತ್ರಿಕ ವರ್ಗದಲ್ಲಿ ಛಾಯಾಗ್ರಾಹಕರಾಗಿ ಯೋಗಿ, ಸಂಗೀತ ನಿರ್ದೇಶಕರಾಗಿ ಚರಣ್, ಸಂಕಲನಕಾರರಾಗಿ ಕೆಜಿಎಫ್ ಖ್ಯಾತಿಯ ಶ್ರೀಕಾಂತ್ , ಸಂಭಾಷಣೆಕಾರರಾಗಿ ಸುಬ್ರಹ್ಮಣ್ಯ ಸುಕೃತ್ ಮೊದಲಾದವರಿದ್ದಾರೆ. ಚಿತ್ರಕ್ಕೆ ಕಲಾ ನಿರ್ದೇಶಕರು ರಾಜೀವ್ ನಾಯರ್ ಮತ್ತು ಸಾಹಸ ನಿರ್ದೇಶಕರಾಗಿ ರಿಯಲ್ ಸತೀಶ್ ಕಾರ್ಯನಿರ್ವಹಿಸಲಿದ್ದಾರೆ. ಮಾಧ್ಯಮಗೋಷ್ಠಿಗೆ ನಿರ್ದೇಶಕ ಮುಹೂರ್ತ ಭಟ್ ಅವರು ಅತಿಥಿಗಳಾಗಿ ಆಗಮಿಸಿದ್ದರು.

Exit mobile version