ನೀರು ಹರಿಬೇಕೆಂದು ಒತ್ತಾಯಿಸಿದ ರೈತರು

Captions

ನಾಗಪುರ, ನ. 3: ಮಹಾರಾಷ್ಟ್ರದಲ್ಲಿ ರೈತರು  ತಮ್ಮ ಬೆಳೆಗಳನ್ನು  ರಕ್ಷಿಸಿಕೊಳ್ಳಲು ಜಲಾಶಯದಿಂದ ನೀರು ಹರಿಸಬೇಕು ಎಂದು ಒತ್ತಾಯಿಸಿ ಮಹಾರಾಷ್ಟ್ರದ ನಾಗಪುರ ಜಿಲ್ಲೆಯಲ್ಲಿ ಖಿಂಡಿಸಿ ನದಿಯಲ್ಲಿ ನಿಂತು ಸೋಮವಾರ ಪ್ರತಿಭಟಿಸಿದರು.

ನದಿಯ ಅಚ್ಚುಕಟ್ಟು ಪ್ರದೇಶದಲ್ಲಿ ಭೂಮಿ ಗುತ್ತಿಗೆ ಪಡೆದು ರೈತರು ಕೃಷಿ ಚಟುವಟಿಕೆ ಕೈಗೊಂಡಿದ್ದಾರೆ. ಬೆಳೆ ಒಣಗುತ್ತಿದ್ದು, ರಕ್ಷಣೆಗಾಗಿ ನೀರು ಹರಿಸುವಂತೆ ಕೃಷಿಕರು ಉಪ ವಿಭಾಗಾಧಿಕಾರಿಗಳ ಕಚೇರಿಗೆ ಮನವಿ ಸಲ್ಲಿಸಿದ್ದರು.

ಈ ಮನವಿಗೆ ಸಕಾರಾತ್ಮಕ ಪ್ರತಿಕ್ರಿಯೆ ದೊರೆಯದಿದ್ದಾಗ ನದಿಯಲ್ಲಿ ನಿಂತು ಪ್ರತಿಭಟಿಸಿದರು. ಸ್ಥಳಕ್ಕೆ ಧಾವಿಸಿದ ತಹಶೀಲ್ದಾರ್ ಹಾಗೂ ಪೊಲೀಸರು ಕೃಷಿಕರ ಮನವೊಲಿಸಲು ಮುಂದಾದರು. ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಂಬಂಧಿತ ಇಲಾಖೆಯ ಅಧಿಕಾರಿಗಳ ಜೊತೆಗೆ ಸಭೆ ಆಯೋಜಿಸಲಾಗುವುದು ಎಂದು ತಹಶೀಲ್ದಾರ್ ಭರವಸೆ ನೀಡಿದ್ದು, ಕೃಷಿಕರು ಬಳಿಕ ಪ್ರತಿಭಟನೆ ಹಿಂತೆಗೆದುಕೊಂಡಿದ್ದಾರೆ.

 

Exit mobile version