ನವದೆಹಲಿ, ಅ. 22: ವಿವಿಧ ಮಹಿಳಾ ಸಂಘಟನೆಗಳು ಹಾಥರಸ್ನಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ವಿರೋಧಿಸಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಜೀನಾಮೆಗೆ ಒತ್ತಾಯಿಸಿ ಅ.29ರಂದು ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕರೆ ನೀಡಿವೆ.
ಈ ಪ್ರತಿಭಟನೆಯನ್ನು ಅಖಿಲ ಭಾರತೀಯ ಪ್ರಜಾಸಕ್ತಾತ್ಮಕ ಮಹಿಳಾ ಸಂಘಟನೆ, ಭಾರತೀಯ ಮಹಿಳೆಯರ ರಾಷ್ಟ್ರೀಯ ಒಕ್ಕೂಟ, ಅಖಿಲ ಭಾರತ ಪ್ರಗತಿಪರ ಮಹಿಳಾ ಸಂಘಟನೆ ಮತ್ತು ಇತರೆ ಸಂಘ ಸಂಸ್ಥೆಗಳು, ಹೋರಾಟಗಾರರು ಜಂಟಿಯಾಗಿ ನಡೆಸುತ್ತಿರುವುದಾಗಿ ಜಂಟಿ ಹೇಳಿಕೆಯಲ್ಲಿ ತಿಳಿಸಿವೆ.
ಮಹಿಳಾ ಸಂಘಟನೆಗಳು ಹಾಥರಸ್ ಪ್ರಕರಣದ ತನಿಖೆ ನ್ಯಾಯಯುತವಾಗಿ ನಡೆಯಬೇಕು, ಜೀವನ, ಜೀನವೋಪಾಯ, ಪ್ರಜಾಪ್ರಭುತ್ವ ಹಕ್ಕುಗಳನ್ನು ರಕ್ಷಿಸಬೇಕು ಮತ್ತು ಹಿಂಸಾಚಾರ ಮುಕ್ತ ಜೀವನಕ್ಕೆ ಅವಕಾಶ ಕಲ್ಪಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿವೆ.
ಸಂಘಟನೆಗಳು ತಮ್ಮ ಹೇಳಿಕೆಯಲ್ಲಿ ‘ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರ, ಮೇಲ್ಜಾತಿಗೆ ಸೇರಿದ ಆರೋಪಿಗಳನ್ನು ರಕ್ಷಿಸಲು ಪ್ರಯತ್ನಿಸುತ್ತಿದೆ. ಠಾಕೂರ್ ಸಮುದಾಯದವರಿಗೆ ಜಾತಿ ಪಂಚಾಯಿತಿಗಳನ್ನು ನಡೆಸಲು ಅವಕಾಶ ನೀಡಿ, ಸಂತ್ರಸ್ತೆಯ ಕುಟುಂಬಕ್ಕೆ ಬಹಿರಂಗವಾಗಿ ಸವಾಲು ಹಾಕಲು ಅವಕಾಶ ನೀಡುತ್ತಿದೆ’ ಎಂದು ಆರೋಪಿಸಿವೆ.
‘ಅತ್ಯಾಚಾರ ಎಸಗಿರುವ ವಿಚಾರವನ್ನು ತನಿಖಾ ಸಂಸ್ಥೆ ನಿರ್ದಯವಾಗಿ ನಿರಾಕರಿಸುತ್ತಿದೆ. ಕುಟುಂಬವನ್ನು ಬೆಂಬಲಿಸಿದ ಜನರ ವಿರುದ್ಧ ಪ್ರಕರಣಗಳು ದಾಖಲಾಗಿವೆ’ ಎಂದು ಸಂಘಟನೆಗಳು ದೂರಿವೆ.