ಪ್ರಧಾನಿಗೆ ರಾಜ್ಯಸಭಾ ಸದಸ್ಯ ವೈಕೋ ಪತ್ರ

ಚೆನ್ನೈ, ನ. 09: ತಮಿಳುನಾಡಿನ ಮೀನುಗಾರರ 100 ಯಾಂತ್ರೀಕೃತ ದೋಣಿಗಳು ಶ್ರೀಲಂಕಾದ ವಶದಲ್ಲಿವೆ ಅವುಗಳನ್ನು ಬಿಡುಗಡೆ ಮಾಡಿಸಬೇಕು, ಇಲ್ಲವೇ ತಮಿಳುನಾಡು ಸರ್ಕಾರದಿಂದ ದೋಣಿ ಮಾಲೀಕರಿಗೆ ಪರಿಹಾರ ಕೊಡಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಎಂಡಿಎಂಕೆ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯಸಭಾ ಸದಸ್ಯ ವೈಕೊ, ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ.

ಈ ಕುರಿತು ಪ್ರಕಟವಾದ ಸುದ್ದಿಗಳನ್ನು ಉಲ್ಲೇಖಿಸಿ ಮಾತನಾಡಿದ ಅವರು, ‘ಶ್ರೀಲಂಕಾ ನ್ಯಾಯಾಲಯ, ಮೀನುಗಾರರಿಂದ ವಶಪಡಿಸಿಕೊಂಡ 121 ದೋಣಿಗಳನ್ನು ನಾಶಮಾಡಲು ಆದೇಶಿಸಿದೆ. ಇದು ಆಘಾತಕಾರಿ ಸಂಗತಿ’ ಎಂದಿದ್ದಾರೆ. ಶ್ರೀಲಂಕಾ ವಶದಲ್ಲಿರುವ 100ಕ್ಕೂ ಹೆಚ್ಚು ದೋಣಿಗಳಲ್ಲಿ, 88 ರಾಮೇಶ್ವರಂಗೆ ಸೇರಿವೆ ಎಂದು ವೈಕೊ, ಮೋದಿಯವರಿಗೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

‘ಅಕ್ರಮವಾಗಿ ದ್ವೀಪರಾಷ್ಟ್ರದ ಗಡಿ ದಾಟಿದ ಆರೋಪದ ಮೇಲೆ ವಶಪಡಿಸಿಕೊಂಡಿರುವ ಭಾರತೀಯ ಮೀನುಗಾರರ ಯಾಂತ್ರೀಕೃತ ದೋಣಿಗಳನ್ನು ನಾಶ ಮಾಡುವಂತೆ ಜಾಫ್ನಾ ನ್ಯಾಯಾಲಯ, ಅಧಿಕಾರಿಗಳಿಗೆ ಅನುಮತಿ ನೀಡಿದೆ ಎಂದು ರಾಮೇಶ್ವರಂ ಅಧಿಕಾರಿಗಳು ನೀಡಿರುವ ಮಾಹಿತಿಯನ್ನು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

‘ಭಾರತ ಸರ್ಕಾರ, ಶ್ರೀಲಂಕಾ ಸರ್ಕಾರದೊಂದಿಗೆ ಮಾತುಕತೆ ನಡೆಸಿ, ದೋಣಿಗಳನ್ನು ಬಿಡಿಸಬೇಕು. ಇಲ್ಲವೇ ದೋಣಿಯ ವಾರಸುದಾರರಿಗೆ ತಮಿಳುನಾಡು ಸರ್ಕಾರದಿಂದ ಪರಿಹಾರ ಕೊಡಿಸಬೇಕು. ಇದಕ್ಕೆ ಸಂಬಂಧಿಸಿದಂತೆ ಪ್ರಧಾನಿಯವರು ಶೀಘ್ರವಾಗಿ, ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ. ಒಂದೊಂದು ಯಾಂತ್ರಿಕ ದೋಣಿಯ ಬೆಲೆ ₹25 ಲಕ್ಷದಿಂದ ₹40 ಲಕ್ಷವಾಗುತ್ತದೆ. ಮೀನುಗಾರರು ದೋಣಿ ಖರೀದಿಗಾಗಿ ಹೆಚ್ಚು ಬಡ್ಡಿ ಕೊಟ್ಟು ಸಾಲ ಪಡೆದಿರುತ್ತಾರೆ ಎಂದು ವೈಕೊ ಹೇಳಿದ್ದಾರೆ

Exit mobile version