ಬೆಳಗಾವಿ, ಅ.31: ಬೆಳಗಾವಿಯಲ್ಲಿ ಕನ್ನಡಿಗರು ಕನ್ನಡ ರಾಜ್ಯೋತ್ಸವವನ್ನು ಆಚರಿಸಲು ಸಕಲ ಸಿದ್ಧತೆಗಳನ್ನು ನಡೆಸುತ್ತಿದ್ದಾರೆ. ಆದರೆ ಇಲ್ಲಿ ಮಹಾರಾಷ್ಟ್ರೀಯರು ಕನ್ನಡ ರಾಜ್ಯೋತ್ಸವವನ್ನು ಕಪ್ಪು ದಿನವನ್ನಾಗಿ ಆಚರಿಸಲು ನಿರ್ಧಾರ ಮಾಡಿದ್ದಾರೆ. ನವೆಂಬರ್ 1ರಂದು ರಾಜ್ಯಾದ್ಯಂತ ಸಂಭ್ರಮ, ಸಡಗರ ತುಂಬಿರುತ್ತದೆ. ನಾಡಿನ ಪ್ರತಿಯೊಬ್ಬರು ಕನ್ನಡ ಉತ್ಸವ ಆಚರಣೆಗೆ ಸಿದ್ಧರಾಗುತ್ತಿರುವ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಎಂಇಎಸ್ ಕರಾಳ ದಿನ ಆಚರಿಸುತ್ತದೆ ಎಂದರೆ ಕನ್ನಡಿಗರು ಹೇಗೆ ಸುಮ್ಮನಿರುತ್ತಾರೆ? ಕನ್ನಡಿಗರು ಇದನ್ನು ತಡೆಯುವ ಉದ್ದೇಶದಿಂದ ಈ ವರ್ಷ ಈ ಕರಾಳದಿನ ಆಚರಣೆಗೆ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದೆಂದು ಕನ್ನಡಪರ ಸಂಘಟನೆಗಳು ಆಗ್ರಹಿಸಿವೆ. ಇನ್ನೊಂದೆಡೆ ಕರಾಳ ದಿನ ಆಚರಣೆಗೆ ಅನುಮತಿ ಪಡೆಯಲು ಈಗಾಗಲೇ ಎಂಇಎಸ್ ಸಂಘಟನೆ ಹರಸಾಹಸ ಮಾಡುತ್ತಿದೆ. ಇದರ ಮದ್ಯೆ ಮಹಾರಾಷ್ಟ್ರ ಗಡಿಯ ಉಸ್ತುವಾರಿ ಸಚಿವರಾದ ಏಕನಾಥ್ ಶಿಂಧೆ ಅವರು ಹೊಸ ಕ್ಯಾತೆಯನ್ನು ಆರಂಭಿಸಿದ್ದಾರೆ. ನವೆಂಬರ್ 1ರಂದು ಮಹರಾಷ್ಟ್ರ ಎಲ್ಲ ಸಚಿವರು ಕಪ್ಪು ಬಟ್ಟೆಯನ್ನು ಧರಿಸಿ ಕರ್ನಾಟಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಬೇಕು ಎಂದು ಸೂಚನೆ ನೀಡಿದ್ದಾರೆ.
ಸಚಿವ ಏಕನಾಥ್ ಶಿಂಧೆ ರಾಜ್ಯದ ಎಲ್ಲ ಸಚಿವರಿಗೆ ಈ ಬಗ್ಗೆ ಪತ್ರ ಬರೆದು ಮನವಿಯನ್ನು ಮಾಡಿದ್ದಾರೆಂದು ತಿಳಿದು ಬಂದಿದೆ. ಕರ್ನಾಟಕದಲ್ಲಿ ಮರಾಠಿಗರಿಗೆ ಅನ್ಯಾಯವಾಗುತ್ತಿದೆ. ಇದನ್ನು ತಡೆಯಲು ಕರ್ನಾಟಕದಲ್ಲಿ ಕರಾಳ ದಿನ ಆಚರಣೆ ನಡೆದುಕೊಂಡು ಬಂದಿದೆ. ಇದೀಗ ಇದಕ್ಕೆ ಅನುಮತಿಯನ್ನು ಕರ್ನಾಟಕ ಸರ್ಕಾರ ನೀಡಿಲ್ಲ. ಸುಪ್ರೀಂ ಕೋರ್ಟ್ ಇದಕ್ಕಾಗಿ ರಾಜ್ಯ ಸರ್ಕಾರಕ್ಕೆ ಎಲ್ಲ ರೀತಿಯ ಸಹಕಾರ ನೀಡುತ್ತಿದೆ ಎಂದು ಸಚಿವ ಏಕನಾಥ್ ಶಿಂಧೆ ಹೇಳಿದ್ದಾರೆ. ಕರಾಳ ದಿನದಂದು ಮಹಾರಾಷ್ಟ್ರದ ಎಲ್ಲ ಸಚಿವರು ಕಪ್ಪು ಬಟ್ಟೆಯನ್ನು ಧರಿಸಿ ಕೆಲಸ ನಿರ್ವಹಿಸಬೇಕು ಎಂದು ನಾವು ಮನವಿ ಮಾಡಿದ್ದೇವೆ. ಮರಾಠಿಗರಿಗೆ ನ್ಯಾಯ ಸಿಗುವವರೆಗೂ ನಾವು ಅವರ ಜತೆಗೆ ಇದ್ದೇವೆ ಎಂದು ಮಹಾರಾಷ್ಟ್ರ ಗಡಿ ಉಸ್ತುವಾರಿ ಸಚಿವ ಏಕನಾಥ್ ಶಿಂಧೆ ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ಶಿವಸೇವೆ, ಎನ್ಸಿಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಸಮ್ಮಿಶ್ರ ಸರ್ಕಾರವಿದೆ. ಶಿವಸೇನೆ ಹಾಗೂ ಎನ್ ಸಿ ಪಿ ಕರ್ನಾಟಕದ ವಿರುದ್ಧ ನಿರಂತವಾಗಿ ಇಂತಹ ಕೆಲಸಗಳನ್ನು ಮಾಡಿಕೊಂಡು ಬಂದಿದೆ. ಆದರೆ ರಾಷ್ಟ್ರೀಯ ಪಕ್ಷವಾಗಿರುವ ಕಾಂಗ್ರೆಸ್ ಪಕ್ಷದ ನಿಲುವು ಈ ವಿಚಾರದಲ್ಲಿ ಏನು ಎಂಬುದು ಇದೀಗ ದೊಡ್ಡ ಪ್ರಶ್ನೆ ಉದ್ಭವಿಸಿದೆ.
ಮಹಾರಾಷ್ಟ್ರದ ಸಚಿವ ಏಕನಾಥ್ ಶಿಂಧೆ ಹೇಳಿಕೆಗೆ ಬೆಳಗಾವಿ ಕರವೇ ಜಿಲ್ಲಾಧ್ಯಕ್ಷ ದೀಪಕ್ ಗುಡಗನಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಹಾರಾಷ್ಟ್ರ ಸರ್ಕಾರ ತನ್ನ ನೀಚ ಪ್ರವೃತ್ತಿಯನ್ನು ಪ್ರದರ್ಶಿಸುತ್ತಿದೆ. ಇಲ್ಲಿನ ಜನಪ್ರತಿನಿಧಿಗಳು ಮಾತ್ರ ಮಹಾರಾಷ್ಟ್ರ ಸರ್ಕಾರದ ಜೊತೆಗೆ ಒಳ್ಳೆಯ ಸಂಬಂಧ ಹೊಂದಿದ್ದಾರೆ. ಕನ್ನಡಿಗರನ್ನು ಕನ್ನಡಿಗರನ್ನು ಮಾತ್ರ ಅವಮಾನಿಸುವ ಕೆಲಸವನ್ನು ಮಾಡುತ್ತಿದ್ದಾರೆ. ನಗರ ಪಾಲಿಕೆ, ಪಂಚಾಯಿತಿ ಚುನಾವಣೆಯನ್ನು ಮುಂದಿಟ್ಟುಕೊಂಡು ರಾಜಕೀಯ ಆಟ ಆಡುತ್ತಿದ್ದಾರೆ. ಈ ಬಗ್ಗೆ ಸಿಎಂ, ಜಿಲ್ಲಾ ಉಸ್ತುವಾರಿ ಸಚಿವರು ಮಹಾರಾಷ್ಟ್ರ ಸರ್ಕಾರಕ್ಕೆ ಬುದ್ದಿ ಹೇಳಬೇಕಾಗಿದೆ.
ಮಹಾರಾಷ್ಟ್ರದ ಲೋಕೋಪಯೋಗಿ ಸಚಿವ ಹಾಗೂ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದಗಳ ಸಚಿವ ಏಕನಾಥ್ ಶಿಂಧೆ, ಸಚಿವ ಸಂಪುಟ ಸಭೆಯಲ್ಲಿ ಮಾತನಾಡಿ, ನಾಳೆ ಎಲ್ಲಾ ಸಚಿವರು ತಮ್ಮ ಕೈಗೆ ಕಪ್ಪು ಬ್ಯಾಂಡ್ ನ್ನು ಕಟ್ಟಿ ಬೆಳಗಾವಿಯಲ್ಲಿ ಮರಾಠಿಗರ ಹೋರಾಟವನ್ನು ಬೆಂಬಲಿಸಬೇಕೆಂದು ಕರೆ ನೀಡಿದೆ.