ಸರ್ಕಾರ ಪೌರಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲಿ: ಮಾಜಿ ಸಿಎಂ ಕುಮಾರಸ್ವಾಮಿ

ಪೌರ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವುದು ಮೂಲಕ ಅವರಿಗೆ ಕೃತಜ್ಞತೆ ಸಲ್ಲಿಸಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಕರ್ತವ್ಯ ನಿರತ ಪೌರಕಾರ್ಮಿಕರು ಸೋಂಕಿನಿಂದ ಸಾವಿಗೆ ತುತ್ತಾದರೆ ಅವರ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರವನ್ನು ಸರ್ಕಾರ ನೀಡಬೇಕು.ಹಣರೂಪದ ಪರಿಹಾರ ಸರ್ಕಾರದ ಆಡಳಿತಾತ್ಮಕ ಕರ್ತವ್ಯವಾಗುತ್ತದೆ.

ಪೌರಕಾರ್ಮಿಕ ಸಮುದಾಯವನ್ನು ಸದಾ ಕೃತಜ್ಞತೆಯಿಂದ ಸ್ಮರಿಸುವುದು,ಅವರ ಬೇಡಿಕೆಗಳನ್ನು ಈಡೇರಿಸುವುದೇ ಅವರಿಗೆ ಸಲ್ಲಿಸಬಹುದಾದ ನಿಜ ಗೌರವವಾಗುತ್ತದೆ.

ಕೊರೊನಾ ಸಂಕಷ್ಟದ ಈ ದಿನಗಳಲ್ಲಿ ಜನರ ಆರೋಗ್ಯದ ರಕ್ಷಣೆಗಾಗಿ ತಮ್ಮ ಪ್ರಾಣವನ್ನೂ ಪಣಕ್ಕಿಟ್ಟು ದುಡಿಯುತ್ತಿರುವ ಪೌರಕಾರ್ಮಿಕರು ವೈದ್ಯ ಸಮೂಹದಷ್ಟೆ ಪ್ರಧಾನ ಪಾತ್ರ ವಹಿಸಿದ್ದಾರೆ.

ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ತ್ಯಾಗ, ಸೇವೆ, ಸಮರ್ಪಣೆ, ಕಾರುಣ್ಯದಿಂದ ಸದಾ ಜೀವ ತೇಯುತ್ತಿರುವ ಪೌರಕಾರ್ಮಿಕರನ್ನು ಈ ಸಮಾಜ ಪ್ರತಿಕ್ಷಣವು ತಾಯ್ತನದಿಂದ ಕಾಣುವುದೇ ನಾವು ಅವರಿಗೆ ಸಲ್ಲಿಸಬಹುದಾದ ದೊಡ್ಡ ಕೃತಜ್ಞತೆ ಎಂದು ಪೌರಕಾರ್ಮಿಕ ದಿನಾಚರಣೆಯ ಶುಭಾಶಯಗಳು ಎಂದು ಕೋರಿದ್ದಾರೆ.

Exit mobile version