ಹಳ್ಳಿ ಹಳ್ಳಿಗೂ ಟೆಲಿಮೆಡಿಸಿನ್‌ ಸೌಲಭ್ಯ

ಮೈಸೂರು, ಅ. 19: ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ್‌ ಮೈಸೂರಿನ ಸ್ಕ್ಯಾನ್ ರೇ ಸಂಸ್ಥೆ ಸಂಸ್ಥೆಗೆ ಭೇಟಿ ನೀಡಿ, ಉನ್ನತ ಅಧಿಕಾರಿಗಳ ಜತೆ ಮಾತುಕತೆ ನಡೆಸಿದರಲ್ಲದೆ, ತಂತ್ರಜ್ಞಾನ ಆಧಾರಿತ ಟೆಲಿ ಮೆಡಿಸನ್‌ ಸೇವೆಯನ್ನು ಜನಸಾಮಾನ್ಯರಿಗೂ ಒದಗಿಸುವ ನಿಟ್ಟಿನಲ್ಲಿ ಸರಕಾರವೂ ಉತ್ಸುಕವಾಗಿದೆ. ಐಟಿ ಇಲಾಖೆಯ ಸಹಯೋಗದೊಂದಿಗೆ ಈ ಕಾರ್ಯಕ್ರಮ ಜಾರಿ ಮಾಡಲಾಗುವುದು ಎಂದರು.

ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ, ಕೋವಿಡ್‌ ಈಗ ಎಲ್ಲ ವ್ಯವಸ್ಥೆಗಳನ್ನೂ ಅಸ್ತವ್ಯಸ್ತವಾಗಿಸಿದೆ. ಅದು ಆರೋಗ್ಯ ಕ್ಷೇತ್ರದಲ್ಲೂ ಹೆಚ್ಚು ಪ್ರಮಾಣದಲ್ಲೇ ಆಗಿದೆ. ಕಿಯೋನಿಕ್ಸ್‌ (KEONICS ) ಸಹಭಾಗಿತ್ವದಲ್ಲಿ ತಂತ್ರಜ್ಞಾನಯುಕ್ತ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲು ಹಾಗೂ ಟೆಲಿ ಕಮಾಂಡ್‌ ಕೇಂದ್ರವನ್ನು (Tele-command Centre) ತೆರೆಯುವ ಯೋಜನೆಗೆ ಸಂಸ್ಥೆಯು ಸರಕಾರದ ಬೆಂಬಲವನ್ನು ಕೇಳಿದೆ. ಸರಕಾರದಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ನಾನು ಭರವಸೆ ನೀಡಿದ್ದೇನೆ. ರಾಜ್ಯದ ಪ್ರತಿಹಳ್ಳಿಗೂ ಟೆಲಿ ಮೆಡಿಸನ್‌ ವ್ಯವಸ್ಥೆಯನ್ನು ತಲುಪಿಸಲು ಈ ಸಂಸ್ಥೆ ಮುಂದೆ ಬಂದಿರುವುದು ಸಂತೋಷ ತಂದಿದೆ ಎಂದು ಉಪ ಮುಖ್ಯಮಂತ್ರಿ ಮಾಹಿತಿ ನೀಡಿದರು.

ಇಷ್ಟು ಅಲ್ಪಾವಧಿಯಲ್ಲಿ 30,000 ವೆಂಟಿಲೇಟರ್‌ಗಳನ್ನು ಪೂರೈಕೆ ಮಾಡುವುದು ಸುಲಭದ ಮಾತಲ್ಲ. ಅಮರಿಕ ಚೀನಾದಂತಹ ದೇಶಗಳಿಗೆ ಇದು ಸಾಧ್ಯವಾಗಿಲ್ಲ. ಅಂತಹ ಸವಾಲನ್ನು ಸ್ವೀಕರಿಸಿ ಸ್ಕ್ಯಾನ್ ರೇ ಕೆಲಸ ಮಾಡಿದೆ. ಅದಕ್ಕಾಗಿ ನನ್ನ ಮೆಚ್ಚುಗೆ ಇದೆ. ಜತೆಗೆ, ಇತರೆ ಅನೇಕ ದೇಶಗಳಿಗೆ ಕೋವಿಡ್‌ ಪರಿಹಾರೋಪಾಯಗಳಲ್ಲಿ ಎಂಟು ತಿಂಗಳಾದರೂ ಸ್ವಾವಲಂಭನೆ ಸಾಧಿಸಲು ಸಾಧ್ಯವಾಗಿಲ್ಲ. ಆದರೆ, ಭಾರತಕ್ಕೆ ಇದು ಸಾಧ್ಯವಾಗಿದೆ. ಆತ್ಮನಿರ್ಭರ ಅಭಿಯಾನಕ್ಕೆ ಪೂರಕವಾಗಿ ಇಲ್ಲಿ ಉತ್ಪನ್ನವಾಗುವ ದೇಶೀಯ ಉತ್ಪನ್ನಗಳು ವಿದೇಶಿ ಮಾರುಕಟ್ಟೆಗೆ ಕೂಡಾ ತಲುಪುತ್ತಿವೆ ಎಂಬುದು ನಮ್ಮ ಹೆಮ್ಮೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಸ್ಕ್ಯಾನ್ ರೇ ತಯಾರಿಸಿರುವ 50ಕ್ಕೂ ಹೆಚ್ಚು ವೈದ್ಯಕೀಯ ಉತ್ಪನ್ನಗಳನ್ನು ಡಿಸಿಎಂ ವೀಕ್ಷಿಸಿದರು. ಜತೆಗೆ ಒಂದೇ ಯಂತ್ರದ ಮೂಲಕ ಒಬ್ಬ ವ್ಯಕ್ತಿಯು ಎಲ್ಲ ರೀತಿಯ ಪರೀಕ್ಷೆಗಳನ್ನು ಸುಲಭವಾಗಿ ಮಾಡಿಸಿಕೊಳ್ಳಬಹುದಾಗಿದೆ. ಅದನ್ನು ಮನೆಯಲ್ಲೇ ಇಟ್ಟುಕೊಳ್ಳುವಷ್ಟು ಸರಳ ಮತ್ತು ಸುಲಭವಾಗಿದೆ. ಆ ಉಪಕರಣ ಇನ್ನಷ್ಟೇ ಮಾರುಕಟ್ಟೆಗೆ ಬರಬೇಕಾದ ʼಸ್ಕ್ಯಾನ್ ಲೈಫ್‌ʼ ಎಂಬ ನೂತನ ಉಪಕರಣವನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸ್ಕ್ಯಾನ್‌ ರೇ ಸಂಸ್ಥೆಯ ಸಹ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ವಿಶ್ವಪ್ರಸಾದ್‌ ಆಳ್ವ ಮತ್ತಿತರೆ ತಜ್ಞರು, ಅಧಿಕಾರಿಗಳು ಜತೆಗೆ ಐಟಿ ಇಲಾಖೆ ನಿರ್ದೇಶಕಿ ಮೀನಾ ನಾಗರಾಜ, ಕಿಯೋನಿಕ್ಸ್ ವ್ಯವಸ್ಥಾಪಕ ನಿರ್ದೇಶಕ ಎಸ್.ಎನ್.ಸಿದ್ದರಾಮಪ್ಪ ಹಾಜರಿದ್ದರು.

Exit mobile version