ದೈಹಿಕ ಅಂತರ ನಿಯಮವನ್ನು ಗಾಳಿಗೆ ತೂರಿದರೆ ಒಬ್ಬ ಕೋವಿಡ್ ರೋಗಿಯಿಂದ 406 ಜನರಿಗೆ ಸೋಂಕು ಹರಡುತ್ತೆ: ಐಸಿಎಂಆರ್

ನವದೆಹಲಿ, ಏ. 27: ದೈಹಿಕ ಅಂತರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸದಿದ್ದರೆ ಕೊವಿಡ್-19 ರೋಗ ಹರಡುವ ಸಾರ್ಸ್-ಕೊವಿ-2 ವೈರಸ್​ನಿಂದ ಸೋಂಕಿತನಾಗಿರುವ ವ್ಯಕ್ತಿಯೊಬ್ಬ 30 ದಿನಗಳ ಅವಧಿಯಲ್ಲಿ 406 ಜನರಿಗೆ ಸೋಂಕನ್ನು ಹರಡಬಲ್ಲನೆಂದು ಕೇಂದ್ರ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೇಳಿದೆ. ಅಧಿಕೃತ ಸುದ್ದಿಗೋಷ್ಟಿಯೊಂದರಲ್ಲಿ ಇಲಾಖೆಯ ಅಧಿಕಾರಿಯೊಬ್ಬರು ಕೊವಿಡ್-19 ಸೋಂಕಿನ ವಿದ್ಯಮಾನಗಳು, ಸರ್ಕಾರ ತೆಗೆದುಕೊಳ್ಳುತ್ತಿರುವ ಕ್ರಮಗಳನ್ನು ವಿವರಿಸುವಾಗ, ‘ಸೂಕ್ತವಾಗಿ ದೈಹಿಕ ಅಂತರವನ್ನು ಕಾಯ್ದುಕೊಳ್ಳದಿದ್ದರೆ ಒಬ್ಬ ಸೋಂಕಿತ 406 ಜನರಿಗೆ ರೋಗ ಹರಡಬಲ್ಲ ಎನ್ನುವುದು ಸಂಶೋಧನೆಯ ಮೂಲಕ ಧೃಡಪಟ್ಟಿದೆ’ ಅಂತ ಹೇಳಿದರು.

ನೀತಿ ಆಯೋಗದ (ಆರೋಗ್ಯ) ಸದಸ್ಯರಾಗಿರುವ ಡಾ ವಿಕೆ ಪಾಲ್ ಅವರು, ಕೇವಲ ತುರ್ತು ಸಂದರ್ಭ ಇದ್ದಲ್ಲಿ ಮಾತ್ರ ಜನ ಮನೆಯಿಂದ ಆಚೆ-ಅದೂ ಮಾಸ್ಕ ಧರಿಸಿಯೇ ಬರಬೇಕು ಅಂತ ಆಗ್ರಹಿಸಿದರಲ್ಲದೆ ಹೊರಗಿನವರನ್ನು ಮನೆಯೊಳಗೆ ಆಹ್ವಾನಿಸದಿರುವಂತೆ ತಾಕೀತು ಮಾಡಿದರು.

‘ಈಗಿನ ಕೊವಿಡ್-19 ಸ್ಥಿತಿಯಲ್ಲಿ ದಯವಿಟ್ಟು ಯಾರೂ ಅನಗತ್ಯವಾಗಿ ಮನೆಯಿಂದ ಆಚೆ ಬರಬೇಡಿ, ಮನೆಯಲ್ಲಿದ್ದಾಗಲೂ ತಪ್ಪದೆ ಮಾಸ್ಕ್ ಧರಿಸಿ. ಅದನ್ನು ಧರಿಸುವುದು ಅತ್ಯವಶ್ಯಕವಾಗಿದೆ. ಯಾರನ್ನೂ ಮನೆಗೆ ಆಹ್ವಾನಿಸಬೇಡಿ, ಸಾಮಾಜಿಕ ಅಂತರ ಮತ್ತು ಬಾರಿ ಬಾರಿ ಸ್ಯಾನಿಟೈಸ್ ಮಾಡಿಕೊಳ್ಳುವುದು ಸೋಂಕಿನ ಆಪಾಯವನ್ನು ಕಡಿಮೆ ಮಾಡುತ್ತದೆ,’ ಎಂದು ಡಾ ಪಾಲ್ ಹೇಳಿದರು.

‘ದೈಹಿಕ ಅಂತರ ಕಾಯ್ದುಕೊಳ್ಳುವ ನಿಯಮವನ್ನು ಶೇಕಡಾ 50 ರಷ್ಟು ಪಾಲಿಸದರೂ ಸೋಂಕಿತ ವ್ಯಕ್ತಿಯು 406 ಜನರ ಬದಲಿಗೆ ಕೇವಲ 15 ಜನಕ್ಕೆ ಸೋಂಕನ್ನು ಹರಡುತ್ತಾನೆ, ಮತ್ತು ಅಪಾಯದ ಪ್ರಮಾಣ ಶೇಕಡಾ 75ರಷ್ಟು ಕಡಿಮೆಯಾಗುತ್ತದೆ. ಈ ಆಂಶವನ್ನು ಎಲ್ಲರೂ ಮನಗಾಣಿರೆಂದು ನಾವು ಮನವಿ ಮಾಡಿಕೊಳ್ಳುತ್ತಿದ್ದೇವೆ. ವೈದ್ಯಕೀಯ ನಿರ್ವಹಣೆ ಮತ್ತು ಸೋಂಕು ನಿಯಂತ್ರಣಗಳ ಮೇಲೆ ಗಮನವಿರಲಿ,’ ಎಂದು ಪಾಲ್ ಹೇಳಿದರು.

ಲಾಕ್​ಡೌನ್ ಮತ್ತು ದೈಹಿಕ ಅಂತರವನ್ನು ಸೂಕ್ತವಾಗಿ ಜಾರಿಗೊಳಿಸದಿದ್ದರೆ, ಒಬ್ಬ ಕೊವಿಡ್-19 ರೋಗಿಯು 406 ಜನರಿಗೆ ಸೋಂಕನ್ನು ಹರಡುತ್ತಾನೆ ಎಂದು ಭಾರತೀಯ ವೈದ್ಯಕೀಯ ಸಂಶೋಧನೆ ಸಂಸ್ಥೆ (ಐಸಿಎಮ್​ಆರ್) ನಡೆಸಿರುವ ಅಧ್ಯಯನದ ಮೂಲಕ ಬಯಲಿಗೆ ಬಂದಿದೆ.

ಕೊವಿಡ್-19ಗೆ ಸಂಬಂಧಿಸಿದ ನಿಯಮಾವಳಿಗಳನ್ನು ಅದರಲ್ಲೂ ವಿಶೇಷವಾಗಿ ದೈಹಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸದರೆ ಸೋಂಕಿತನೊಬ್ಬ ಕೇವಲ 2.5 ಜನಕ್ಕೆ ಮಾತ್ರ ಹರಡುವಷ್ಟರ ಮಟ್ಟಿಗೆ ಅದನ್ನು ನಿಯಂತ್ರಿಸಬಹುದು ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್​ವಾಲ್ ಏಪ್ರಿಲ್ 8ರಂದು ನಡೆಸಿದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು.

Exit mobile version