ನವದೆಹಲಿ, ಜ. 01: ರಾಜಧಾನಿ ದೆಹಲಿಯಲ್ಲಿನ ತಾಪಮಾನ ಶುಕ್ರವಾರ 1 ಡಿಗ್ರಿಗಿಂತಲೂ ಕಡಿಮೆಯಾಗಿದ್ದರಿಂದ ಕೊರೆಯುವ ಚಳಿಯಲ್ಲಿ ಹೊರಬರಲಾಗದೆ ಪ್ರತಿಭಟನಾ ನಿರತ ರೈತರು ತಮ್ಮ ಟೆಂಟ್ಗಳ ಒಳಗೆಯೇ ಕುಳಿತುಕೊಳ್ಳುವ ಪರಿಸ್ಥಿತಿ ಎದುರಾಯಿತು.
ಕಳೆದ 15 ವರ್ಷಗಳಲ್ಲಿ ಹೊಸ ವರ್ಷದ ದಿನ ತಾಪಮಾನ 1 ಡಿಗ್ರಿ ಸೆಲ್ಸಿಯಸ್ಗಿಂತ ಕಡಿಮೆಯಾಗಿದ್ದು, ಇದೇ ಮೊದಲಾಗಿದೆ. ಬೆಲೆ ಏರಿಕೆ ಮತ್ತು ಕೋಲು ಸುಡುವಿಕೆ ಮೇಲೆ ದಂಡ ಹೇರುವ ನಿರ್ಧಾರದಿಂದ ಹಿಂದೆ ಸರಿಯುವುದಾಗಿ ಕೇಂದ್ರ ಸರ್ಕಾರ ರೈತರಿಗೆ ಆಶ್ವಾಸನೆ ನೀಡಿದೆ. ಆದರೆ ಮೂರು ನೂತನ ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳುವ ಮತ್ತು ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತ್ರಿ ನೀಡುವ ಮುಖ್ಯ ಬೇಡಿಕೆಗಳಿಗೆ ಇನ್ನೂ ಸರ್ಕಾರ ಮತ್ತು ರೈತರು ಸಹಮತಕ್ಕೆ ಬಾರದಿರುವ ಹಿನ್ನೆಲೆಯಲ್ಲಿ ಪ್ರತಿಭಟನೆ ಮುಂದುವರಿದಿದೆ. ಕಳೆದ ಬುಧವಾರ ನಡೆಸಿದ ಮಾತುಕತೆ ಕೂಡ ವಿಫಲವಾಗಿದ್ದು, ಮುಂದಿನ ಮಾತುಕತೆ ಜನವರಿ 4ರಂದು ನಡೆಯಲಿದೆ ಎಂದು ವರದಿಗಳು ತಿಳಿಸಿವೆ.
ಕಳೆದ ಬುಧವಾರ ನಡೆದ 6ನೇ ಸುತ್ತಿನ ಮಾತುಕತೆಯಲ್ಲಿ ಶೇಕಡಾ 50ರಷ್ಟು ಸಹಮತಕ್ಕೆ ಬರಲಾಗಿದ್ದು ನಾಲ್ಕು ವಿಷಯಗಳಲ್ಲಿ ಎರಡು ವಿಚಾರಗಳ ಮೇಲೆ ಪರಸ್ಪರ ಒಪ್ಪಂದಕ್ಕೆ ಬರಲಾಗಿದ್ದು ಉಳಿದವುಗಳು ನಾಡಿದ್ದು 4ರಂದು ಮಾತುಕತೆ ವೇಳೆ ಚರ್ಚೆಗೆ ಬರಲಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೊಮರ್ ತಿಳಿಸಿದ್ದಾರೆ.ಕಳೆದ ಸಭೆಯಲ್ಲಿ 41 ರೈತ ಪ್ರತಿನಿಧಿಗಳ ಸದಸ್ಯರು ಭಾಗವಹಿಸಿದ್ದರು.
ದೆಹಲಿಯ ಗಡಿಭಾಗದಲ್ಲಿ ಭದ್ರತೆ ತೀವ್ರವಾಗಿದೆ, ನೂರಾರು ಮಂದಿ ಪೊಲೀಸರನ್ನು ಸಿಂಘು, ಗಝಿಪುರ್, ಟಿಕ್ರಿ ಗಡಿಭಾಗಗಳಲ್ಲಿ ನಿಯೋಜಿಸಲಾಗಿದೆ. ಕಳೆದೊಂದು ತಿಂಗಳಿಂದ ಇಲ್ಲಿ ಪೊಲೀಸರು ತೀವ್ರವಾಗಿ ಪ್ರತಿಭಟನಾ ನಿರತರಾಗಿದ್ದು, ಪ್ರತಿಭಟನೆಯಿಂದ ತೀವ್ರ ಸಂಚಾರ ದಟ್ಟಣೆ ಉಂಟಾಗಿದೆ, ಪೊಲೀಸರು ವಾಹನ ಸಂಚಾರರಿಗೆ ಬದಲಿ ಮಾರ್ಗಗಳನ್ನು ಸೂಚಿಸುವ ಅನಿವಾರ್ಯತೆ ಎದುರಾಗಿದೆ.
ಕಳೆದ ಸೆಪ್ಟೆಂಬರ್ ನಲ್ಲಿ ತಂದ ಕೇಂದ್ರ ಸರ್ಕಾರದ ಮೂರು ನೂತನ ಕೃಷಿ ಕಾಯ್ದೆ ರೈತರ ಸುಧಾರಣೆಗೆ, ಕೃಷಿ ಕ್ಷೇತ್ರದ ಸುಧಾರಣೆಗೆ ಎಂದು ಸರ್ಕಾರ ಹೇಳುತ್ತಿದೆ. ರೈತರನ್ನು ಮಧ್ಯವರ್ತಿಗಳ ಹಾವಳಿಯಿಂದ ತಪ್ಪಿಸಬಹುದಾಗಿದೆ, ರೈತರು ಎಲ್ಲಿ ಬೇಕಾದರೂ ತಮ್ಮ ವಸ್ತುಗಳನ್ನು ಮಾರಾಟ ಮಾಡಬಹುದು ಎಂದು ಹೇಳಲಾಗುತ್ತಿದೆ.
ಆದರೆ ರೈತರು ನೂತನ ಕಾಯ್ದೆಯಿಂದ ತಮ್ಮ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಹೋಗುವುದಲ್ಲದೆ, ಮಂಡಿ ವ್ಯವಸ್ಥೆ ಕೂಡ ಕಳೆದುಹೋಗುತ್ತದೆ, ಇದರಿಂದ ಕಾರ್ಪೊರೇಟ್ ಕಂಪೆನಿಗಳಿಗೆ ಲಾಭ ಎಂದು ಆರೋಪಿಸುತ್ತಿದ್ದಾರೆ. ಆದರೆ ಸರ್ಕಾರ ಕನಿಷ್ಠ ಬೆಂಬಲ ಬೆಲೆ ಮತ್ತು ಮಂಡಿ ವ್ಯವಸ್ಥೆ ಹೋಗುವುದಿಲ್ಲ, ವಿರೋಧ ಪಕ್ಷದವರು ರೈತರ ಹಾದಿ ತಪ್ಪಿಸುತ್ತಿದೆ ಎಂದು ಆರೋಪಿಸಿದೆ.