ಬೆಂಗಳೂರು, ಫೆ. 15: ಮನೆಯಲ್ಲಿ ಟಿ.ವಿ, ಬೈಕು, ಫ್ರಿಡ್ಜ್ ಇದ್ದರೆ ಬಿಪಿಎಲ್ ಪಡಿತರ ಚೀಟಿ ರದ್ದುಗೊಳಿಸಲಾಗುವುದು ಎಂದು ನಾಗರಿಕ ಪೂರೈಕೆ ಸಚಿವ ಉಮೇಶ್ ಕತ್ತಿ ಹೇಳಿಕೆಯನ್ನು ಮಾಜಿ ಸಚಿವ ದಿನೇಶ್ ಗುಂಡೂರಾವ್ ತೀವ್ರವಾಗಿ ಖಂಡಿಸಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, TV/ಬೈಕ್ ಇದ್ದರೆ BPLಕಾರ್ಡ್ ರದ್ದು ಮಾಡುವ ಉಮೇಶ್ ಕತ್ತಿಯವರ ಹೇಳಿಕೆ ಬಡತನದ ಬದಲು ಬಡವರನ್ನೇ ನಿರ್ಮೂಲನ ಮಾಡುವ ಮನಸ್ಥಿತಿಯ ಪ್ರತೀಕ. ಸಾವಿಲ್ಲದ ಮನೆಯ ಸಾಸಿವೆ ಕಾಳು ತರಲು ಹೇಗೆ ಸಾಧ್ಯವಿಲ್ಲವೋ, ಇಂದು TV ಇಲ್ಲದ ಮನೆಯನ್ನು ಹುಡಕಲು ಅಸಾಧ್ಯ.
BPL ಕಾರ್ಡ್ ನೀಡಲು ಕುಟುಂಬದ ಆದಾಯ ಮಾನದಂಡವಾಗಬೇಕೆ ಹೊರತು ಟಿವಿ ಬೈಕ್ಗಳಲ್ಲ.
ಉಮೇಶ್ ಕತ್ತಿಯವರ ಹೇಳಿಕೆ ಈ ಸರ್ಕಾರಕ್ಕೆ ಬಡವರ ಮೇಲೆ ಎಷ್ಟು ಕಾಳಜಿ ಇದೆ ಎಂದು ತೋರಿಸುತ್ತಿದೆ. ಬಡವರ ಸವಲತ್ತು ಕಿತ್ತುಕೊಳ್ಳಲು ಹೂಡುತ್ತಿರುವ ಹುನ್ನಾರವಿದು. ಬಿಜೆಪಿ ಸರ್ಕಾರ ತಮ್ಮದು ಬಡವರ ಪರ ಸರ್ಕಾರ ಎಂದು ಹೇಳಲು ಯಾವ ನಾಲಿಗೆಯಿದೆ? ಎಂದು ಪ್ರಶ್ನಿಸಿದ್ದಾರೆ.