ಮೈಸೂರು, ಮಾ. 19: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಜಾರಕಿಹೋಳಿಯನ್ನು ಮಹಾಮಹಿಮನನ್ನಾಗಿಸಲು ಹೊರಟಿದ್ದು, ಇದು ನಾಡಿಗೆ ಅಗೌರವ ಎಂದು ಕನ್ನಡ ಚಳವಳಿ ಹೋರಾಟಗಾರ ವಾಟಾಳ್ ನಾಗರಾಜ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಮೈಸೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ರಮೇಶ್ ಜಾರಕಿಹೊಳಿ ಸಿಡಿ ಹಾಗೂ ಎಸ್.ಐ.ಟಿ ತನಿಖೆ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರದ ವಿರುದ್ಧ ಕಿಡಿಕಾರಿದರು.
ಕರ್ನಾಟಕ ಪೊಲೀಸ್ ಅಂತಸ್ತು ಕೀಳು ಮಟ್ಟಕ್ಕೆ ಹೋಯ್ತು, ಇಲಾಖೆಗೆ ಕೆಟ್ಟ ಹೆಸರು ಬರಲು ಕಾರಣ ಸಿಎಂ ಯಡಿಯೂರಪ್ಪ, ಬೊಮ್ಮಾಯಿ ಕಾರಣವಾಗಿದ್ದು,
ಸಿಡಿ ಬಿಟ್ಟವರ ಬಗ್ಗೆ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಿರಾ, ಆದರೆ ಡ್ರಗ್ ವಿಚಾರ ಸತ್ತೋಯಿತು, ಡ್ರಗ್ ವಿಚಾರದಲ್ಲಿ ಪೊಲೀಸರು ತನಿಖೆ ನಡೆಸಿದ್ದೆ ನಡೆಸಿದ್ದು, ಎಲ್ಲೋಯ್ತು ಡ್ರಗ್ಗು.. ಯಾವ್ ಮೋರಿಗೆ ಹೋಯ್ತು ಡ್ರಗ್ಗು ಎಂದು ಪ್ರಶ್ನಿಸಿದ್ದಾರೆ.
ಸಿಡಿ ವಿಚಾರದಲ್ಲಿ ಎಸ್.ಐ. ಟಿ ಸಮಗ್ರ ತನಿಖೆ ಮಾಡಿಸೋದು ಬಿಟ್ಟು, ಬೇರೆ ಆಯಾಮದಲ್ಲಿ ರೂಮ್ ಎಲ್ಲಿತ್ತು..? ಆಕೆ ಎಲ್ಲಿದ್ಲು, ಯಾವ ರೂಮ್ ನಲ್ಲಿದ್ಲು.. ಯಾವ್ ಜಾಮ್ಕಾನ ಹೊಧ್ಕೋತಿದ್ಲು, ಯಾವ್ ಮಂದಲಿಗೆ ಇತ್ತು ಅಂತ ತನಿಖೆ ಮಾಡ್ತಿದ್ದಾರೆ. ಇದು ನಾಚಿಕೆ ವಿಚಾರ. ಪೊಲೀಸರಿಗೆ ಮಾನಮರ್ಯಾದೆ ಇಲ್ವಾ.. ಎಂದು ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಇದೇ ವೇಳೆ ಸಿಎಂ ಬಿಎಸ್ ವೈ ವಿರುದ್ಧ ಟೀಕಾಪ್ರಹಾರ ನಡೆಸಿದ ವಾಟಾಳ್ ನಾಗರಾಜ್, ಶಾಸನ ಸಭೆಯಲ್ಲಿ ಏನೇನು ಚರ್ಚೆ ಆಗಬೇಕಿತ್ತು ಅದ್ಯಾವುದು ಆಗುತ್ತಿಲ್ಲ. ಅದು ವಿಧಾನಸಭೆ ಆಗಿಲ್ಲ, ಸರ್ವಾಧಿಕಾರಿ ಯಡಿಯೂರಪ್ಪ ಅವರ ಸಭೆಯಾಗಿದೆ. ಸರ್ವಾಧಿಕಾರಿ ಹೇಳಿದ ಹಾಗೆ ಸ್ಪೀಕರ್ ಕೇಳುತ್ತಿದ್ದಾರೆ. ಮಂತ್ರಿಗಳು ಶಾಸಕರುಗಳು ಸಹ ಸರ್ವಾಧಿಕಾರಿ ಏಜೆಂಟ್ ಗಳಾಗಿದ್ದಾರೆ. ಯಡಿಯೂರಪ್ಪ ಕರ್ನಾಟಕ ಕಂಡರಿಯದ ಸರ್ವಾಧಿಕಾರಿ ಮುಖ್ಯಮಂತ್ರಿ ಎಂದು ಟೀಕಿಸಿದರು.