ಬೆಂಗಳೂರು, ಏ. 16: ಕನ್ನಡ ಕಿರುತೆರೆಯಲ್ಲಿ ಕೋಟ್ಯಾಂತರ ಅಭಿಮಾನಿಗಳ ಮಗಗೆದ್ದಿರುವ ಬಿಗ್ ಬಾಸ್ ಕಾರ್ಯಕ್ರಮದ ವೀಕೆಂಡ್ ಎಪಿಸೋಡ್ನಿಂದ ಇದೇ ಮೊದಲ ಬಾರಿಗೆ ಕಿಚ್ಚ ಸುದೀಪ್ ಹೊರಗುಳಿದಿದ್ದಾರೆ.
ಕಳೆದ ಹಲವು ಸೀಸನ್ನಿಂದ ಬಿಗ್ ಬಾಸ್ ಕಾರ್ಯಕ್ರಮದ ನಿರೂಪಕರಾಗಿರುವ ನಟ ಕಿಚ್ಚ ಸುದೀಪ್, ವಾರಾಂತ್ಯದಲ್ಲಿ ತಾವು ನಡೆಸಿಕೊಡುವ ಎಪಿಸೋಡ್ ಗಳಿಗೆ ಎಂದು ಗೈರಾಗಿರಲಿಲ್ಲ. ಆದರೆ ಅನಾರೋಗ್ಯ ಕಾರಣದಿಂದಾಗಿ ಇದೇ ಮೊದಲ ಬಾರಿಗೆ ವೀಕೆಂಡ್ ಷೋ ನಿರೂಪಣೆ ಮಾಡುವುದರಿಂದ ಹಿಂದೆ ಸರಿದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ನಟ ಕಿಚ್ಚ ಸುದೀಪ್, ತಮ್ಮ ಅನಾರೋಗ್ಯ ಕಾರಣದಿಂದ ವೈದ್ಯರ ಸಲಹೆಯಂತೆ ಕೆಲ ದಿನ ವಿಶ್ರಾಂತಿ ಪಡೆಯುತ್ತಿದ್ದು, ಈ ವಾರಾಂತ್ಯ ಬಿಗ್ಬಾಸ್ನಲ್ಲಿ ಭಾಗವಹಿಸುತ್ತಿಲ್ಲ ಎಂದು ತಿಳಿಸಿದ್ದಾರೆ. ಹೀಗಾಗಿ ಈ ವೀಕೆಂಡ್ ಬಿಗ್ಬಾಸ್ ಹೇಗಿರುತ್ತೆ? ಎಂಬ ಕುರಿತು
ನನಗೂ ಕುತೂಹಲವಿದೆ ಎಂದು ತಿಳಿಸಿದ್ದಾರೆ.
ಕನ್ನಡದ ರಿಯಾಲಿಟಿ ಷೋಗಳಲ್ಲಿ ದೊಡ್ಡಮಟ್ಟದ ಸಕ್ಸಸ್ ಕಂಡಿರುವ ಬಿಗ್ ಬಾಸ್, ಪ್ರೇಕ್ಷಕರ ನೆಚ್ಚಿನ ಕಾರ್ಯಕ್ರಮ ಎನಿಸಿದೆ. ಅದರಲ್ಲೂ ಕಿಚ್ಚ ಸುದೀಪ್ ನಡೆಸಿಕೊಡುವ ವೀಕೆಂಡ್ ಎಪಿಸೋಡ್ಗಳಿಗಾಗಿ ಪ್ರೇಕ್ಷಕರಷ್ಟೇ ಅಲ್ಲದೇ, ಬಿಗ್ ಬಾಸ್ ಕಾರ್ಯಕ್ರಮದಲ್ಲಿರುವ ಸ್ಪರ್ಧಿಗಳು ಸಹ ಕಾಯುತ್ತಿರುತ್ತಾರೆ. ಆದರೆ ಈ ವಾರಾಂತ್ಯದಲ್ಲಿ ಸುದೀಪ್ ಇಲ್ಲದಿರುವುದು ಕಿಚ್ಚನ ಅಭಿಮಾನಿಗಳ ಜತೆಗೆ ದೊಡ್ಮನೆಯ ಸ್ಪರ್ಧಿಗಳಲ್ಲಿ ಬೇಸರದ ಜೊತೆಗೆ ಕುತೂಹಲ ಮೂಡಿಸಿದೆ.